ಕೆರೂರ: ಜಿಲ್ಲೆಯ ಗಡಿ ಪ್ರದೇಶ ಗೋವನಕೊಪ್ಪ ಗ್ರಾಮದ ಬಳಿ ಹರಿದಿರುವ ಮಲಪ್ರಭಾ ನದಿಯಲ್ಲಿ ಈಚೆಗೆ ನವಿಲುತೀರ್ಥ ಜಲಾಶಯದಿಂದ ಬಿಟ್ಟ ನೀರು ಪ್ರವಾಹವಾಗಿ ಸಾವಿರಾರು ಎಕರೆ ಪ್ರದೇಶದ ಬೆಳೆ ಪ್ರವಾಹದಲ್ಲಿ ಮುಳುಗಿತು. ನಾಲ್ಕು ದಿನ ಹೆದ್ದಾರಿ ಸಂಚಾರ ಸ್ಥಗಿತಗೊಂಡು ಜನ ಪರದಾಡುವಂತಾಯಿತು.
ಆದರೆ ವರ್ಷಕ್ಕೊಮ್ಮೆ ಗಣೇಶ ಹಬ್ಬದ ನಂತರ ಬರುವ ಜೋಕುಮಾರ ಸ್ವಾಮಿ (`ಜೋಕುಮಾರ ಬಂದನ, ಜೋಕುಮಾರ ಎನಕುವರ..)ಗೂ ಮಲಪ್ರಭಾ ಪ್ರವಾಹ ಬಿಸಿ ತಟ್ಟಿತು ಎಂದರೆ ಅಚ್ಚರಿಯಾಗುವುದಿಲ್ಲವೇ..!
ಹೌದು.
ಸುತ್ತಲಿನ ಗ್ರಾಮಗಳಲ್ಲಿ ಜೋಕುಮಾರನನ್ನು ಹೊತ್ತು ಸಾಗುವ ಜನಾಂಗದವರು ಪ್ರವಾಹ ಬಂದಿದ್ದರಿಂದ ಅನಿವಾರ್ಯವಾಗಿ ನಾಲ್ಕು ದಿನ ವಿಳಂಬ ಆದರೂ ಕಾಯ್ದು, ನರಗುಂದ ತಾಲ್ಲೂಕಿನ ಕೊಣ್ಣುರ ಹತ್ತಿರದ ಕೋಡ್ಲಿತೋಟ ಹಳ್ಳದಲ್ಲಿ ನಿಂತಿದ್ದ ಪ್ರವಾಹ ಒತ್ತುವರಿ ನೀರು ಲೆಕ್ಕಿಸದೇ ಜೋಕುಮಾರನನ್ನು ನೀರಲ್ಲಿ ಹೊತ್ತು ವಿವಿಧ ಹಳ್ಳಿಗಳಿಗೆ ಸಾಗಿ, ತಮ್ಮಪದ್ಧತಿ ಆಚರಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದರು.