ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗ ಜಲಪಾತಕ್ಕೆ ಬೇಕು ಕಾಯಕಲ್ಪ

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಜೋಗ ಜಲಪಾತವನ್ನು  ಅಭಿವೃದ್ಧಿ ಪಡಿಸಲೆಂದು ೨೦೦೨ರಲ್ಲಿ ಸ್ಥಾಪನೆಗೊಂಡ ಜೋಗ ನಿರ್ವಹಣಾ ಪ್ರಾಧಿಕಾರ ಇದೀಗ ಕಣ್ಣು ತೆರೆದಿದೆ. ಹಾಗಾದರೆ ಈ ಪ್ರಾಧಿ ಕಾರ ಈವರೆಗೆ ಮಾಡಿದ್ದೇನು?   ಪ್ರಾಧಿಕಾರ ಮಾಡಿದ ಕೆಲಸಗಳಿಗಿಂತ ಮಾಡಿದ ಅಧ್ವಾನಗಳೇ ಹೆಚ್ಚು.

ಸಿರೂರು ಕೆರೆಯಲ್ಲಿ ದೋಣಿ ವಿಹಾರ ಪ್ರಾರಂಭಿಸಿ ಎರಡು ತಿಂಗಳಲ್ಲಿ ಅದನ್ನು ನಿಲ್ಲಿಸಲಾಯಿತು. ರೂ ೧.೪೦ ಕೋಟಿ ವೆಚ್ಚದಲ್ಲಿ ಸಂಗೀತ ಕಾರಂಜಿ ಮಾಡಿತು. ಇದು 3 ತಿಂಗಳಲ್ಲಿ ಕೆಟ್ಟು ನಿಂತಿತು. ಜಲಪಾತದ ಬಳಿ ಇದ್ದ ಅಂತರರಾಷ್ಟ್ರೀಯ ಈಜು ಕೊಳ ನಾಶ ಮಾಡಲಾಯಿತು. ವಾಹನ ನಿಲು ಗಡೆಗೆ ಸ್ಥಳ, ಶೌಚಾಲಯ, ಹೊಟೇಲ್, ಕುಡಿ ಯಲು ನೀರು, ಕೈಗೆಟಕುವ ವಸತಿಗೃಹ, ಸೂಕ್ತ ಮಾರ್ಗದರ್ಶನ– ಇವು ಇಲ್ಲದೇ ಸಹಸ್ರ ಜನ ಪರದಾಡಿದರೂ ಈ ಪ್ರಾಧಿಕಾರ ಅತ್ತ ತಿರುಗಿ ನೋಡಲಿಲ್ಲ. ಜಲಪಾತದ ಸುತ್ತ ಬ್ರಿಟಿಷರು ನಿರ್ಮಿಸಿದ ಕೆಲ ವಿಶೇಷ ‘ಸೀಟು’ಗಳು ಇದ್ದು ಅಲ್ಲಿಂದ ಜಲಪಾತ ಇನ್ನೂ ಸುಂದರವಾಗಿ ಕಾಣುತ್ತಲಿತ್ತು. ಈ ಸೀಟುಗಳನ್ನು ಸರಿಪಡಿಸ ಬಹುದಿತ್ತು. ಜೋಗ ಯೋಜನೆಗೆ ಮಾಡಿದ ಶಿಲಾನ್ಯಾಸದ ಜಾಗವಾದ ರಾಜಾಸೀಟಿಗೆ ಪ್ರವಾಸಿಗರನು್ನ ಆಕರ್ಷಿಸಿ, ಅಲ್ಲಿಂದ ಕಾಣುವ ಶರಾವತಿಯ ದರ್ಶನ ಮಾಡಿಸಬಹುದಿತ್ತು. ಲಿಂಗನಮಕ್ಕಿ ಅಣೆಕಟ್ಟೆಯ ಹತ್ತಿರ ಅಣೆಕಟ್ಟು ನಿರ್ಮಿಸುವಾಗ ಮುಳುಗಡೆಯಾದ ಸ್ಥಳದಲ್ಲಿ ದೊರೆತ ನೂರಾರು ಶಿಲ್ಪ, ಮಾಸ್ತಿಕಲ್ಲು, ಶಾಸನ ಗಳನು್ನ ಜೋಡಿಸಿ ಇರಿಸಿದ್ದಾರೆ. ಇವು ನೋಡುವ ವರಿಲ್ಲದೇ ಅನಾಥವಾಗಿವೆ. ಅವುಗಳನು್ನ ತಂದು ಜೋಗದ ಬಳಿ ಇರಿಸಿ ಅವುಗಳ ಪರಿಚಯವನ್ನು ಪ್ರವಾಸಿಗರಿಗೆ ಮಾಡಿಕೊಡಬಹುದಿತ್ತು. ಆದರೆ ಈ ಕೆಲಸ ಯಾವುದನ್ನೂ ಪ್ರಾಧಿಕಾರ ಮಾಡಲಿಲ್ಲ. 

ಸೆ. ೭ರಂದು ಜೋಗದಲ್ಲಿ ಪ್ರಾಧಿಕಾರ ಸಭೆ ನಡೆಸಿ ಬೇರೆಯೇ ಆದ ಇನ್ನೊಂದಿಷ್ಟು ಕೆಲಸ ಗಳನು್ನ ಮಾಡುವುದಾಗಿ ಹೇಳಿಕೊಂಡಿದೆ. ಈ ಕೆಲಸಗಳನ್ನು ಇಲ್ಲಿಯೇ ಮಾಡಬೇಕಾಗಿಲ್ಲ. ಎಲ್ಲೂ ಮಾಡಬಹುದು. ಜಂಗಲ್ ಬಜಾರ್, ಥೀಮ್ ಪಾರ್ಕ್‌, ದೋಣಿ ಮನೆ, ಕೇಬಲ್ ಕಾರ್ ಅಥವಾ ರೋಪ್ವೇ, ಪ್ಯಾರಾ ಗ್ಲೈಡಿಂಗ್, ನೈಟ್ ಸಫಾರಿ, ಸೈಕ್ಲಿಂಗ್, ಪ್ರಕೃತಿ ಆಧಾರಿತ ಪ್ರವಾಸ, ಜಲಸಾಹಸ ಕ್ರೀಡೆ, ಎಲ್ಲ ವರ್ಗದ ಜನರ ಅನುಕೂಲಕ್ಕೆ ತಕ್ಕದಾದ ಗಾಲ್ಪ್ ಕ್ಲಬ್ ಇತ್ಯಾದಿಗಳನ್ನು ಪ್ರಾಧಿಕಾರ ಮಾಡುವುದಾಗಿ ಹೇಳಿಕೊಂಡಿದೆ. ಆದರೆ ವಿಚಿತ್ರ ಅಂದರೆ ಅದು ಜಲಪಾತದ ಬಗ್ಗೆ ಹೇಳಿರುವುದು ಕಡಿಮೆಯಾ ದರೂ ಕೆಳಗೆ ಬಿದ್ದ ನೀರನ್ನು ಮತ್ತೆ ಮೇಲೆ ಪಂಪ್ ಮಾಡುವುದರ ಮೂಲಕ ಜಲಪಾತಕ್ಕೆ ಜೀವ ಕೊಡುವ ಮಾತನು್ನ ಆಡುತ್ತಿದೆ. ಪ್ರಾಧಿಕಾರ ಇಂತಹ ಕೆಲಸ ಮಾಡುವುದರ ಮೂಲಕ ಈಗ ಮಳೆಗಾಲದ ಒಂದೆರಡು ತಿಂಗಳು ಕಾಣಸಿಗುವ ಜಲಪಾತವನು್ನ ಎಲ್ಲಿ ಸಂಪೂರ್ಣವಾಗಿ ಅಂದಗೆಡಿ ಸುತ್ತದೋ ಅನ್ನುವ ಭೀತಿ ಜಲಪಾತ ಪ್ರಿಯರನ್ನು ಕಾಡುತ್ತಿದೆ.

ನೀರನ್ನು ಮೇಲೆ ಪಂಪ್ ಮಾಡಲು ಒಂದು ವರದಿ ಸಿದ್ಧವಾಗಿದೆ ಎಂದೂ ಇದು ಪ್ರಾಧಿಕಾರದ ಪರಿಶೀಲನೆಯಲ್ಲಿದೆ ಎಂದೂ ಮೊನ್ನಿನ ಸಭೆಯಲ್ಲಿ ಹೇಳಿದೆ. ಈ ವರದಿಯನು್ನ ಅನುಷ್ಠಾನಕ್ಕೆ ತರುವ ಮುನ್ನ ಅದನು್ನ ಸಾರ್ವಜನಿಕರ ಗಮನಕ್ಕೆ ತರ ಬೇಕು ಎಂದು ಒತ್ತಾಯಿಸಲಾಗಿದೆ. ಏಕೆಂದರೆ ಎಲ್ಲೆಲ್ಲಿ ಸರಕಾರ, ರಾಜಕಾರಣಿಗಳು ಕೈ ಹಾಕು ತ್ತಾರೋ ಅದೆಲ್ಲ ನಾಶವಾಗುತ್ತದೆ ಅನ್ನುವುದು ನಮಗೆ ಈಗಾಗಲೇ ಅನುಭವಕ್ಕೆ ಬಂದಿದೆ. ಅಲ್ಲದೇ ವಿನಾಶಕಾರಿಯಾದ ಇಲ್ಲವೇ ಪ್ರಯೋ ಗಾತ್ಮಕವಲ್ಲದ ಯೋಜನೆಗಳನ್ನು ಹುಟ್ಟು
ಹಾಕುವಲ್ಲಿ ನಮ್ಮ ನಾಯಕಗಣ ಮುಂದೆ. ಕೆಲ ವರ್ಷಗಳ ಹಿಂದೆ ಜಲಪಾತದ ಅಡಿಯಲ್ಲಿ ಕೇಂದ್ರದ ಪ್ರವಾಸೋದ್ಯಮ ಮಂತ್ರಿಗಳು ರೆಸಾರ್ಟ್‌ ಕಟ್ಟಲು ಹೊರಟಿದ್ದು ನಮಗೆ ನೆನಪಿದೆ. (ಸದ್ಯ ಅವರಿಗೆ ಬೇಗನೆ ಜ್ಞಾನೋದಯ ಆಗಿ ಈ ಅನಾಹುತ ತಪ್ಪಿತು). ನೀರನು್ನ ಪಂಪ್‌ ಮಾಡುವ ಈ ಕೆಲಸ ಕೂಡ ಹಾಗೇ ಆಗದಿರಲಿ ಅನ್ನುವುದು ನಮ್ಮ ಹಾರೈಕೆ.

ಲಿಂಗನಮಕ್ಕಿ ಅಣೆಕಟ್ಟನ್ನು ನಿರ್ಮಿಸುವಾಗ ಜೋಗದ ಹಳೆಯ ವಿದ್ಯುದಾಗಾರ, ಎ.ಬಿ ಸೈಟ್‌ ವಿದ್ಯುದಾಗಾರ ಹಾಗೂ ಜೋಗ ಜಲಪಾತಕ್ಕೆ ಇಷ್ಟಿಷ್ಟು ನೀರು ಎಂದು ನಿರ್ಧರಿಸಿ ಅಣೆಕಟ್ಟನು್ನ ಕಟ್ಟಲಾಯಿತು ಅನ್ನುವ ಮಾತಿದೆ. ಅಲ್ಲದೇ ಜಲ ಪಾತ ಅಂದಿನ ಮುಂಬೈ ಪ್ರಾಂತ್ಯದಲ್ಲಿ (ಉತ್ತರ ಕನ್ನಡ ಜಿಲ್ಲೆ ಮುಂಬೈ ಪ್ರಾಂತ್ಯಕ್ಕೆ ಸೇರಿತ್ತು) ಇದ್ದುದರಿಂದ ಜಲಪಾತ ಒಣಗದಿರಲಿ ಅನ್ನುವ ಕರಾರನು್ನ ಆ ಪ್ರಾಂತ್ಯ ಮುಂದೆ ಮಾಡಿತು್ತ ಎಂದು ಹೇಳಲಾಗಿದೆ.   ಇದರ ಪ್ರಕಾರ ಜೋಗ ತನ್ನ ಸಂಪೂರ್ಣ ಚೆಲುವನು್ನ ಸೂಸಬೇಕು ಅನ್ನು ವುದಾದರೆ ಜಲಪಾತದಿಂದ ೨೦೦ ಕ್ಯೂಸೆಕ್‌್‌ ನೀರು ಧುಮುಕಬೇಕೆಂದೂ ಅಷ್ಟು ನೀರನ್ನು ಜಲ ಪಾತಕ್ಕೆ ಬಿಡಲಾಗುವುದೆಂದೂ  ಕರಾರು ಕೂಡ ಆಯಿತಂತೆ. ಅಂದರೆ ಜಲಪಾತದ ಪೂರ್ಣ ಚೆಲುವು ಕಾಣಬೇಕು ಅನ್ನುವುದಾದರೆ ಅಲ್ಲಿ ೨೦೦ ಕ್ಯೂಸೆಕ್‌ ನೀರು ಸುರಿಯಬೇಕು
ಎಂದಾಯಿತು. ಹೀಗೆ ಮೇಲಿನಿಂದ ಕೆಳಗೆ ಧುಮುಕಿದ ಈ ೨೦೦ ಕ್ಯೂಸೆಕ್‌ ನೀರನು್ನ ಕೆಳಗಿನಿಂದ ಮೇಲು ಗಡೆಗೆ ಹೇಗೆ ಪಂಪ್ ಮಾಡುತ್ತೀರಿ ಅನ್ನುವುದು ಒಂದು ಪ್ರಶ್ನೆ.

ಇದಕ್ಕೂ ಮುಖ್ಯವಾದ ಪ್ರಶ್ನೆ ಅಂದರೆ ಜೋಗ ಜಲಪಾತದಲ್ಲಿ ನಾಲ್ಕು ಧಾರೆಗಳಿವೆ, (ರಾಜಾ, ರೋರರ್, ರಾಕೆಟ್, ಲೇಡಿ). ಈ ಧಾರೆಗಳಿಗೆ ಇಷ್ಟಿಷ್ಟು ನೀರು ಎಂದು ನದಿ ಜಲಪಾತದಿಂದ ಸುಮಾರು 2–3 ಕಿ.ಮೀ. ಹಿಂದೆಯೇ ಹಂಚಿಕೆ ಆಗುತ್ತದೆ. ಅಂದರೆ ಕೆಳಗಿನಿಂದ ನೀರನ್ನು ಮೇಲಕ್ಕೆ ಪಂಪ್ ಮಾಡುವ ನೀವು ಈ ನೀರನ್ನು ಎಲ್ಲಿ ತಂದು ನದಿಗೆ ಸುರಿಯುತ್ತೀರಿ ತಿಳಿಸಿ. ಮೇಲೆ ನದಿಯ ಪಾತ್ರ ವಿಸ್ತಾರವಾಗಿದ್ದು ಈ ವಿಸ್ತಾರವೇ ಜಲಪಾತಗಳ ಬೀಳುವಿಕೆಗೆ, ವೈವಿಧ್ಯಕ್ಕೆ ಕಾರಣ. ನಿಮಗೆ ಅನುಕೂಲಕರ ಅನಿಸುವಲ್ಲಿ ನೀವು ನೀರ ನು್ನ ತಂದು ಸುರಿದರೆ ಜಲಪಾತಗಳ ವೈವಿಧ್ಯಕ್ಕೆ ಧಕ್ಕೆ ಬಾರದೇ? ನೀರಿನ ಹರಿಯುವಿಕೆಯ ತಾಳ ತಪ್ಪಿ ಹೋಗದೇ? ಇದನು್ನ ಯೋಚಿಸಬೇಕಲ್ಲ.  ಇನ್ನು ಜಲಪಾತದ ಬಂಡೆ  ಶತಮಾನಗಳಿಂದ ಮಳೆಗೆ, ಬಿಸಿಲಿಗೆ ಮೈಯೊಡ್ಡಿರುವ ಬಂಡೆ. ಅಲ್ಲದೇ ಅದು ಅಡ್ಡಡ್ಡದಲ್ಲಿ ಮಲಗಿರುವ ಬಂಡೆ ಯಲ್ಲ, ಉದ್ದುದ್ದಕ್ಕೆ ಪದರು ಪದರಾಗಿ ನಿಂತಿರುವ ಬಂಡೆ. ೨೦ನೇ ಶತಮಾನದ ಆರಂಭದಲ್ಲಿ ಜಲ ಪಾತದ ಕೆಳಗಿನ ಒಂದು ಬಂಡೆ ಕಳಚಿಕೊಂಡು ಬಿದ್ದ ಬಗ್ಗೆ ವರದಿ ಆಗಿತ್ತು.

ಇದೀಗ ಜಲಪಾತದ ಕೆಳ ಭಾಗದಲ್ಲಿ  ಅಂಬು ತೀರ್ಥ ಜಲವಿದ್ಯುದಾಗಾರವಿದೆ, ಇದರ ಕೆಲಸ ಆಗುತ್ತಿದ್ದಾಗ ಜಲಪಾತ ಧುಮುಕುವಲ್ಲಿನ  ಗೋಡೆಯಲ್ಲಿ ಬಿರುಕು ಬಂದು ಒಂದು ಬಂಡೆ ಕಳಚಿಕೊಂಡು ಬಿದ್ದಿತ್ತು. ಬಂಡೆಯ ಚಕ್ಕೆಗಳು ಎದ್ದು ಕೆಳಗೆ ಉದುರಿದ್ದವು. ಅದೇ ಸಂದರ್ಭದಲ್ಲಿ ಅಪ್ಪಿಕೋ ಚಳವಳಿಯ ಸುಂದರಲಾಲ್ ಬಹು ಗುಣರ ಜೊತೆಯಲ್ಲಿ ನಾನು ಅಲ್ಲಿಗೆ ಹೋದಾಗ ಬಹುಗುಣ ಇಲ್ಲಿ ಡೈನಮೈಟ್ ಹಾಕಿದ್ದರಿಂದ ಹೀಗೆಲ್ಲ ಆಗಿದೆ ಎಂದು ಹೇಳಿದ ನೆನಪು. ಅಲ್ಲದೇ ಇತ್ತೀಚೆಗೆ ಜಲಪಾತದ ಬಳಿಯೇ ಒಂದು ಬಂಡೆ ಸ್ಥಳಾಂತರಗೊಂಡಿದೆ ಅನ್ನುವ ಮಾಹಿತಿಯೂ ಇದೆ.  ಇಲ್ಲಿಯೇ ವಾಣಿಜ್ಯ  ಸಮುಚ್ಚಯ ಇರುವ ಜಾಗದ ಹಿಂದಿನ ಗುಡ್ಡ ಇದೀಗ ಕುಸಿದು ಕೆಳಗೆ ಜಾರಿದೆ. ಇದು ಒಂದು ಅತೀ ಸೂಕ್ಷ್ಮ ಪ್ರದೇಶ ವಾಗಿದ್ದು ಇಲ್ಲಿ ಏನೇ ಮಾಡಿದರೂ ಜಲಪಾತದ ಹಿತವನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾದ ಆವಶ್ಯಕತೆ ಇದೆ. 

ಇನ್ನು ಕೆಳಗಿನಿಂದ ನೀರನ್ನು ಮೇಲೆ ಸಾಗಿಸುವ ನಿಮ್ಮ ಯತ್ನದಲ್ಲಿ ಇಲ್ಲಿ ಪೈಪುಗಳನು್ನ ಜೋಡಿಸಿ ದರೆ, ನೀರನು್ನ ಪಂಪ್ ಮಾಡುವ ಮೋಟಾರು ಗಳನ್ನ ಕೂರಿಸಿದರೆ, ಇಲ್ಲವೇ ಬಂಡೆ ಬೋರ್ ಮಾಡಿದರೆ, ಅಗೆದರೆ ನಾಲೆ, ಸುರಂಗ ತೆಗೆದರೆ ಇದರಿಂದ ಇಲ್ಲಿಯ ಬಂಡೆಗಳಿಗೆ ಏನೂ ಧಕ್ಕೆ ಆಗುವುದಿಲ್ಲ ಅನ್ನುವ ಖಾತರಿ ಇದೆಯೇ? ಇದೆಲ್ಲ ಮಾಡುವುದರಿಂದ ಜಲಪಾತದ ಚೆಲುವಿಗೆ ಧಕ್ಕೆ ಆಗುವುದಿಲ್ಲ ಅನ್ನುವ ನಂಬಿಕೆ ಇದೆಯೇ?

ನೀರನು್ನ ಕೆಳಗಿನ ಕಣಿವೆಯಿಂದ ಮೇಲಿನ ಘಟ್ಟಕ್ಕೆ ಪಂಪ್ ಮಾಡುವಾಗ ಆಗಬಹುದಾದ ನೀರಿನ ‘ಸವಕಳಿ’ಯ ಬಗ್ಗೆ ಯೋಚಿಸಿದ್ದೀರಾ? ಎಷ್ಟು ನೀರು ಈ ವ್ಯವಹಾರದಲಿ್ಲ ಪೋಲಾಗ ಬಹುದು ಅನ್ನುವ ಲೆಕ್ಕ ಹಾಕಿರುವಿರಾ?

ಪ್ರಾಧಿಕಾರ ಒಂದು ಸತ್ಯವನು್ನ ಅರ್ಥ ಮಾಡಿ ಕೊಳ್ಳಬೇಕು. ಜೋಗದಲ್ಲಿ ನೀರಿಲ್ಲ ಅಂದರೆ ಜಲ ಪಾತವಿಲ್ಲ. ಜಲಪಾತ ಇಲ್ಲ ಅಂದರೆ ಜನ ಇಲ್ಲ. ಇಲ್ಲಿಗೆ ಜನ ಬರುವುದು ದೋಣಿವಿಹಾರಕ್ಕೆ ಅಲ್ಲ, ಸಂಗೀತ ಕಾರಂಜಿ ನೋಡಲು ಅಲ್ಲ, ಮತ್ತೇನೋ ನೋಡಲು ಅಲ್ಲ. ಪ್ರಧಾನವಾಗಿ ಅವರಿಗೆ ಬೇಕು ವೈವಿಧ್ಯಮಯವಾದ ಒಂದು  ಜಲಪಾತ. ಈ ಪ್ರಾಧಿಕಾರ ಮೊದಲು ಇದನು್ನ ಅರ್ಥ ಮಾಡಿ ಕೊಳ್ಳಬೇಕು. ಜಲಪಾತ ನೋಡಲು ಬಂದ ಜನ ರಿಗೆ ಉಳಿದುದನು್ನ  ತೋರಿಸಲಿ, ಆದರೆ ಅದೇ ಪ್ರಧಾನವಾಗಬಾರದು. ಈ ಕಾರಣಕ್ಕಾಗಿ ಜಲ ಪಾತ ಪ್ರೇಮಿಗಳ ವಿನಂತಿ ಅಂದರೆ ಇದೀಗ ನೀವು ಏನು ಪಟ್ಟಿಗಳನು್ನ ಪ್ರಕಟಿಸಿದ್ದೀರಿ ಅದೆಲ್ಲವನೂ್ನ ಜೋಗಕ್ಕೆ ಮರುಜೀವ ಬಂದ ನಂತರ ಮಾಡಿ. ಎಲ್ಲದಕ್ಕೂ ಮೊದಲು ಜಲಪಾತ ಉಳಿಸಿ.

ದಿವಂಗತ ಎಂ.ಪಿ. ಪ್ರಕಾಶ್ ಅವರು ಪ್ರವಾಸೋದ್ಯಮ ಮಂತ್ರಿಗಳಾಗಿದ್ದಾಗ ಜೋಗಕ್ಕೆ ಬಂದಿದ್ದರು. ಆಗ ಕೆಲ ಅಧಿಕಾರಿಗಳು ಅವರ ಮುಂದೆ ಒಂದು ಪ್ರಸ್ತಾವ ಇರಿಸಿದ್ದರು. ಅದು ಜಲಪಾತದ ಮೇಲ್ ಬದಿಯಲ್ಲಿ ಅಣೆಕಟ್ಟನು್ನ ನಿರ್ಮಿಸುವುದು. ಮಳೆಗಾಲದಲ್ಲಿ ವ್ಯರ್ಥವಾಗಿ  ನದಿಗೆ ಹರಿಯುವ ನೀರನು್ನ ಈ ಅಣೆಕಟ್ಟೆಯಲ್ಲಿ ಸಂಗ್ರಹಿಸಿ ಇಡುವುದು, ಈ ನೀರನು್ನ ನಿಯಮಿತ ಅವಧಿಯಲ್ಲಿ ಜಲಪಾತಕ್ಕೆ ಬಿಡುವುದು. ಇದು ಒಂದು ಯೋಚಿಸಬೇಕಾದ ವಿಷಯ.

20 ವರ್ಷಗಳ ಹಿಂದೆ ಪ್ರವಾಸೋದ್ಯಮ ಇಲಾಖೆ ವಿದ್ಯುತ್ ನಿಗಮದೊಂದಿಗೆ  ಒಪ್ಪಂದ ಮಾಡಿಕೊಂಡು ತಿಂಗಳ ಪ್ರತೀ ಭಾನುವಾರ ಜಲ ಪಾತಕ್ಕೆ ನಿಶ್ಚಿತ ಅವಧಿಯಲ್ಲಿ ನೀರು  ಬಿಡುತ್ತಿತ್ತು. ಆಗಲೂ ತುಂಬ ಜನ ಬಂದು ಜಲಪಾತ  ನೋಡುತ್ತಿದ್ದರು. 

ಈಗ ಮಳೆಗಾಲ ಪ್ರಾರಂಭವಾದ ಕೂಡಲೇ ಸಹಸ್ರಾರು ಜನರು ಜಲಪಾತಕ್ಕೆ ಬರುತ್ತಾರೆ. ಒಂದೆರಡು ತಿಂಗಳ ಅವಧಿಯಲ್ಲಿ ಈ ಜನ ಬಂದು ಜಲಪಾತಕ್ಕೆ ಮುಕುರಿಕೊಳ್ಳುವುದು ಸಮಂಜಸ ವಲ್ಲ. ಈ ಸಂದರ್ಭದಲ್ಲಿ ಪ್ರಶಾಂತವಾಗಿ ಕುಳಿತು ಜಲಪಾತದ ಸೌಂದರ್ಯ ಆಸ್ವಾ ದಿಸಲಾಗದು. ಉಳಿದ ತಿಂಗಳುಗಳಲ್ಲಿ ಇತ್ತ ಜನ ಬರುವುದೇ ಇಲ್ಲ. ಹೀಗೆ ದಂಡಿಯಾಗಿ ಬರುವ ಈ ಜನ ಕೂಡ ಹಿಂದಿನ ಹಾಗೆ ಪ್ರಕೃತಿ ಪ್ರಿಯರಲ್ಲ. ಈಗಾಗಲೇ ಅದರ ಸುತ್ತ ಎಲ್ಲ ಇಲಾಖೆಗಳ ಬಂಗಲೆಗಳು, ಗೋಪುರಗಳು, ರಸ್ತೆಗಳು, ರೆಸಾರ್ಟ್‌ಗಳು ಎದ್ದು ನಿಂತಿವೆ. ಮೊನ್ನೆ ನಡೆದ ಸಭೆಯ ವರದಿ ನೋಡಿದರೆ ಅಲ್ಲಿ ಮತ್ತೂ ಕೆಲವು ಕಟ್ಟಡಗಳು ಬರುವ ಸಾಧ್ಯತೆ ಇದೆ. ಜೋಗ ನಿರ್ವಹಣಾ ಪ್ರಾಧಿಕಾರ ಜೋಗ ಸರ್ವನಾಶಾ ಪ್ರಾಧಿಕಾರ ಆಗದಿರಲಿ ಅಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT