ಕಾರ್ಗಲ್: ಸಮೀಪದ ಜೋಗದಲ್ಲಿ ಶಕ್ತಿದೇವತೆ ಶ್ರೀದ್ವಿಮುಖ ಚಾಮುಂಡೇಶ್ವರಿ ದೇವಿಯ ಪುನರ್ ಪ್ರತಿಷ್ಠಾಪನೆ, ಅಷ್ಟಬಂಧ ಇನ್ನಿತರ ಧಾರ್ಮಿಕ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಶನಿವಾರ ಬೆಳಿಗ್ಗೆ ಮುಖ್ಯ ಎಂಜಿನಿಯರ್ ಜಿ. ಹನುಮಂತಪ್ಪ ದೇವನಾಂದಿ, ಮಹಾಗಣಪತಿ ಹೋಮ-ಕಾರ್ಯಗಳಿಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಸಂಜೆ ಶೀರೂರು ಕೆರೆಯಿಂದ ಪೂರ್ಣಕುಂಭ ಹೊತ್ತ ಸುಮಂಗಲಿಯರು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡರು.
ಭಾನುವಾರ ಆದಿಶಕ್ತಿ ಶ್ರೀದ್ವಿಮುಖ ಚಾಮುಂಡೇಶ್ವರಿ ದೇವಿಯ ಪುನರ್ಪ್ರತಿಷ್ಠೆ, ಅಷ್ಟಬಂಧ ಹಾಗೂ ನೇತ್ರೋನ್ಮಿಲನ ಕಲಾವೃದ್ಧಿ ಹೋಮ, ವಿಶೇಷ ಅಲಂಕಾರ ಮತ್ತು ಪೂಜೆ ಸಾಂಗವಾಗಿ ನಡೆದವು. ಸಂಜೆ ದುರ್ಗಾ ಪಾರಾಯಣ ಹಾಗೂ ಅಷ್ಟಾವಧಾನ ಸೇವೆಗೆ ಭಕ್ತರು ನೆರೆದಿದ್ದರು.
ಕಾರ್ಯಕ್ರಮದ ಕೊನೆಯ ದಿನ ಸೋಮವಾರ ‘ಮಹಾ ಚಂಡಿಕಾಯಾಗ ಪೂರ್ಣಾಹುತಿ’ ನಡೆಯಲಿದೆ. ಮಹಾ ಅನ್ನದಾನ ಮತ್ತು ವಿಶೇಷ ಪೂಜೆಯೊಂದಿಗೆ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ಕಾರ್ಯಕ್ರಮಗಳು ಕೊನೆಗೊಳ್ಳಲಿವೆ. ನಿರಂತರ ನಿತ್ಯಪೂಜೆ ನಡೆಯುತ್ತಿರುತ್ತದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.