ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋತಿಷ ವಾಸ್ತು

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದೂರವಾಣಿ ಸಂಖ್ಯೆ
080-2664 3244
2665 3244 ಬೆಳಿಗ್ಗೆ 9.30ರಿಂದ ಮಧ್ಯಾಹ್ನ 3.30

ಪ್ರಶ್ನೆ ಈ  ವಿಳಾಸಕ್ಕೆ ಕಳುಹಿಸಿ: ಸಂಪಾದಕರು, ಪ್ರಜಾವಾಣಿ, ಜ್ಯೋತಿಷ ವಿಭಾಗ, ನಂ. 75, ಎಂ.ಜಿ. ರಸ್ತೆ, ಬೆಂಗಳೂರು- 01

ಹೆಸರು ಬೇಡ, ತಾಳಗುಪ್ಪ:
ಜನನ   16-6-1971, ಸಮಯ 8-10 ಬೆಳಿಗ್ಗೆ.
ಪ್ರಶ್ನೆ: ಖಾಯಂ ಕೆಲಸ ಸಿಗುವುದೇ? ಬೇರೆ ಏನು ಉದ್ಯೋಗ ಮಾಡಬಹುದು ತಿಳಿಸಿ.
ಉತ್ತರ:
ಇವರದು ಮಿಥುನ ಲಗ್ನ, ಪೂರ್ವಾಭಾದ್ರಪದ ನಕ್ಷತ್ರ ಮೀನರಾಶಿ. ಇವರ ಲಗ್ನವು ದಗ್ಧರಾಶಿಯಾಗಿದ್ದು ಲಗ್ನದಲ್ಲಿ ಯಾವ ಗ್ರಹರೂ ಇಲ್ಲ. ಲಗ್ನಕ್ಕೆ ಯಾವ ಶುಭ ಸಂಬಂಧವೂ ಇಲ್ಲ. ಲಗ್ನಾಧಿಪತಿ ಬುಧರು ವ್ಯಯದಲ್ಲಿ ವೈರಿ ಕುಜ ನಕ್ಷತ್ರದಲ್ಲಿ ರವಿಯೊಡನೆ ಸ್ಥಿತರಿದ್ದಾರೆ. ಇವರನ್ನು ಅವಯೋಗಿ ರಾಹು ವೀಕ್ಷಿಸುತ್ತಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪತಿ ಪೀಡಿತರಾಗಿದ್ದಾರೆ.

ಇವರ ಉದ್ಯೋಗ ಸೂಚಕ ದಶಮವು ಮೀನರಾಶಿಯಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ. ಈ ಸ್ಥಾನವನ್ನು  ವಕ್ರೀ ಗುರು ಮತ್ತು ಕೇತು ವೀಕ್ಷಿಸುತ್ತಾರೆ. ದಶಮಾಧಿಪತಿ ಗುರು ವಕ್ರೀ ಆಗಿ ಶನಿ ನಕ್ಷತ್ರದಲ್ಲಿ ಪಂಚಮಸ್ಥಾನ ಸ್ಥಿತರಿದ್ದಾರೆ. ಇವರನ್ನು ವ್ಯಯಾಧಿಪತಿ ಶುಕ್ರ, ಅಷ್ಟಮಾಧಿಪತಿ ಶನಿ, ವೀಕ್ಷಿಸುತ್ತಾರೆ.

ಇವರ ಧನಸ್ಥಾನ ಕರ್ಕವಾಗಿದ್ದು ಇಲ್ಲಿ ಪಾಪಿ ಕೇತು ಯೋಗಿಯಾದರೂ ಬಲಹೀನರಾಗಿ ಸ್ಥಿತರಿದ್ದಾರೆ. ಇವರನ್ನು ಕುಜ ವೀಕ್ಷಿಸುತ್ತಾರೆ. ಧನಾಧಿಪತಿ ಚಂದ್ರರು ಭಾಗ್ಯದಲ್ಲಿ ಬಾಧಕಾಧಿಪತಿ ಗುರು ನಕ್ಷತ್ರದಲ್ಲಿ ಪುಷ್ಕರ ನವಾಂಶ ಸ್ಥಿತರಿದ್ದಾರೆ. ಇವು ಶುಭಕರವಲ್ಲ.
ಇವರ ಉದ್ಯೋಗ ಸೂಚಕ ಅಂಶ ಕುಂಡಲಿಯ ಲಗ್ನವು ಮೀನವಾಗಿದ್ದು ಕರ್ಮಾಂಶದಲ್ಲಿದೆ. ಲಗ್ನಾಧಿಪತಿ ಗುರು ವಕ್ರೀ ಆಗಿ ಷಷ್ಟಸ್ಥಿತರಿದ್ದಾರೆ. ಲಗ್ನದಲ್ಲಿ ವ್ಯಯಾಧಿಪತಿ ಶನಿ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ದುಃಸ್ಥಾನ ಸ್ಥಿತರಿದ್ದಾರೆ. ಇವು ಶುಭಕರವಲ್ಲ. ಬೇರೆ ಯಾವ ಸ್ವತಂತ್ರ ಉದ್ಯೋಗವೂ ಇವರಿಗೆ ಸರಿ ಬರುವುದು ಕಷ್ಟ. ಇಷ್ಟಪಟ್ಟರೆ ವಿದ್ಯೆಗೆ ತಕ್ಕ ಚಿಕ್ಕ ಟ್ಯುಟೊರಿಯಲ್ ಪ್ರಾರಂಭಿಸಬಹುದು.

ಇವರಿಗೆ ಈಗ ಕೇತು ದಶಾ ಚಂದ್ರ ಭುಕ್ತಿ ನಡೆಯುತ್ತಿದ್ದು ಗೋಚಾರದಲ್ಲಿ ಅಷ್ಟಮಶನಿ, ದ್ವಿತೀಯ ಗುರು ಇದ್ದಾರೆ. ಇವು ಶುಭಕರವಲ್ಲ. 2016ರಲ್ಲಿ ಶುಕ್ರದಶಾದಲ್ಲಿ ಇವರು ಪ್ರಯತ್ನಿಸಿದರೆ ಇವರ ಉದ್ಯೋಗ ಖಾಯಂ ಆಗುವುದು.

ಪರಿಹಾರ: ನೀಲಮಣಿ ಧರಿಸಿ. ದುರ್ಗಾತ್ರಿಶತಿ ಪಠಿಸಿ. ಗ್ರಾಮದೇವತೆಯ ಶಾಂತಿ ಮಾಡಿಸಿ. ಶಾರದಾಂಬೆಯನ್ನು ಪೂಜಿಸಿ.

ಪ್ರಣಯ, ಕುಮಟಾ:
ಜನನ 5-1-1994, ಸಮಯ 5-13 ಬೆಳಿಗ್ಗೆ.
ಪ್ರಶ್ನೆ: ಎಸ್‌ಎಸ್‌ಎಲ್‌ಸಿ ಪಾಸಾಗಿದ್ದೆೀನೆ. ಮುಂದಿನ ವಿದ್ಯೆ ಮತ್ತು ಉದ್ಯೋಗದ ಬಗ್ಗೆ ತಿಳಿಸಿ.
ಉತ್ತರ: ಇವರದು ವೃಶ್ಚಿಕ ಲಗ್ನ, ಹಸ್ತಾ ನಕ್ಷತ್ರ ಕನ್ಯಾರಾಶಿ. ಇವರ ಲಗ್ನದಲ್ಲಿ ಯಾವ ಗ್ರಹರೂ ಇಲ್ಲ. ಲಗ್ನಾಧಿಪತಿ ಕುಜರು ಧನ ಸ್ಥಾನದಲ್ಲಿ ಬಲಿಷ್ಟರಾಗಿ ಶುಕ್ರ ನಕ್ಷತ್ರ ಸ್ಥಿತರಿದ್ದಾರೆ. ಲಗ್ನಕ್ಕೆ ಯಾವ ಶುಭ ಸಂಬಂಧವೂ ಇಲ್ಲ. ಇದರಿಂದ ಲಗ್ನ ಸ್ವಲ್ಪ ಪೀಡಿತವಾಗಿದೆ.

ಇವರ ಉನ್ನತ ವಿದ್ಯಾಸೂಚಕ ಪಂಚಮವು ಮೀನರಾಶಿಯಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ. ಈ ಸ್ಥಾನವನ್ನು ಭಾಗ್ಯಾಧಿಪತಿ, ಯೋಗಿ ಚಂದ್ರ ಮತ್ತು ಲಗ್ನಾಧಿಪತಿ ಕುಜ ವೀಕ್ಷಿಸುತ್ತಾರೆ. ಪಂಚಮಾಧಿಪತಿ ಗುರು ವ್ಯಯದಲ್ಲಿ ರಾಹು ನಕ್ಷತ್ರದಲ್ಲಿ ವೈರಿ ಕ್ಷೇತ್ರ ಸ್ಥಿತರಿದ್ದಾರೆ. ಇವರಿಗೆ ಯಾವ ಶುಭಸಂಬಂಧವೂ ಇಲ್ಲ. ಕಾರಕ ಬುಧರು ಅವಯೋಗಿಯಾಗಿ, ದಗ್ಧರಾಶ್ಯಾಧಿಪರಾಗಿ, ಪುಷ್ಕರನವಾಂಶದಲ್ಲಿ ದ್ವಿತೀಯದಲ್ಲಿ ರವಿ, ಶುಕ್ರ ಮತ್ತು ಕುಜರೊಡನೆ ಸ್ಥಿತರಿದ್ದಾರೆ.

ಇವರ ಉನ್ನತ ವಿದ್ಯಾ ಸೂಚಕ ಅಂಶಕುಂಡಲಿಯ ಲಗ್ನವು ಮೀನವಾಗಿದ್ದು ಪುಣ್ಯಾಂಶದಲ್ಲಿದೆ. ಲಗ್ನಾಧಿಪತಿ ಗುರು ಸಪ್ತದಲ್ಲಿದ್ದು, ಲಗ್ನವನ್ನು ವೀಕ್ಷಿಸುತ್ತಾರೆ. ಹೆಚ್ಚಿನ ಗ್ರಹರು ದುಃಸ್ಥಾನ ಸ್ಥಿತರಿದ್ದು ಕಾರಕ ಬುಧರು ಲಾಭ ಸ್ಥಿತರಿದ್ದರೂ ರಾಹು, ಕೇತು ಪೀಡಿತರಾಗಿದ್ದಾರೆ. ಇವು ಇವರಿಗೆ ಉನ್ನತ ವಿದ್ಯೆಯಲ್ಲಿ ಸಾಕಷ್ಟು ಅಡೆತಡೆಗಳ ಸೂಚಕವಾಗಿದೆ.

ಇವರ ವೃತ್ತಿ ಶಿಕ್ಷಣ ಸ್ಥಾನ ಷಷ್ಟವು ಮೇಷವಾಗಿದ್ದು ಇಲ್ಲಿ ಬಲಹೀನ ಕೇತು ಸ್ಥಿತರಿದ್ದಾರೆ. ಈ ಸ್ಥಾನವನ್ನು ಗುರು ವೀಕ್ಷಿಸುತ್ತಾರೆ. ಷಷ್ಟಾಧಿಪತಿ ಕುಜರು ಬಲಯುತರಾಗಿ ದ್ವಿತೀಯದಲ್ಲಿದ್ದು, ಶುಕ್ರರೊಡನೆ ಗ್ರಹ ಯುದ್ಧದಲ್ಲಿದ್ದಾರೆ.  ಇವು ಇವರು ಎಂಜನಿಯರಿಂಗ್ ಡಿಪ್ಲೊಮಾ ಮಾಡಬಲ್ಲರು ಎಂಬುದನ್ನು ಸೂಚಿಸುತ್ತದೆ.

ಇವರ ದಶಮಾಧಿಪತಿ ರವಿ ಧನಸ್ಥಾನದಲ್ಲಿ ಅವಯೋಗಿ ಬುಧ, ವ್ಯಯಾಧಿಪತಿ ಶುಕ್ರ, ಮತ್ತು ಕುಜರೊಡನೆ ಸ್ಥಿತರಿದ್ದಾರೆ. ಇವರ ಉದ್ಯೋಗ ಸೂಚಕ ಅಂಶ ಕುಂಡಲಿಯಲ್ಲೂ ಗ್ರಹರು ಶುಭಾಶುಭ ಸ್ಥಿತರಿದ್ದಾರೆ. ಇದರಿಂದ ಇವರಿಗೆ ವಿದ್ಯೆಗೆ ತಕ್ಕ ಅರೆಸರಕಾರಿ ಉದ್ಯೋಗ ಸಿಗುವ ಸಾಧ್ಯತೆ ಇದೆ.

ಇವರಿಗೆ ಈಗ ವ್ಯಯಸ್ಥಿತ ರಾಹುದಶಾ ಅವಯೋಗಿ ಬುಧ ಭುಕ್ತಿ ನಡೆಯುತ್ತಿದ್ದು, ಗೋಚಾರದಲ್ಲಿ ಸಾಡೆಸಾತಿ ಅಷ್ಟಮ ಗುರು ಇದ್ದಾರೆ. ಇವು ಅಶುಭಕರ. ಆದ್ದರಿಂದ ತಾತ್ಕಾಲಿಕ ಹಿನ್ನೆಡೆಗಳಿಂದ ಧೈರ್ಯಗೆಡದೆ ಹೆಚ್ಚಿನ ಶ್ರದ್ಧೆ ಮತ್ತು ಪ್ರಯತ್ನದಿಂದ ವಿದ್ಯೆ ಗಳಿಸಿ ಕೊಳ್ಳಿ.

ಪರಿಹಾರ:
ಮುತ್ತು ಧರಿಸಿ. ಕಾಮಾಕ್ಷಿ ಅಷ್ಟೋತ್ತರ ಪಠಿಸಿ. ಸಾಯಿಬಾಬಾ ಚಾಲೀಸ ಪಠಿಸಿ. ರುದ್ರಾಭಿಷೇಕ ಮಾಡಿಸಿ.

ಕೆ.ಎಂ.ರವಿ, ದೊಡ್ಡಬಳ್ಳಾಪುರ: 
ಜನನ 4-2-1983, ಸಮಯ 6-45 ಸಂಜೆ.
ಪ್ರಶ್ನೆ: ಸರಕಾರಿ ಕೆಲಸ ಮತ್ತು ಮದುವೆ ಬಗ್ಗೆ ತಿಳಿಸಿ.
ಉತ್ತರ: ಇವರದು ಕರ್ಕಾಟಕ ಲಗ್ನ, ಸ್ವಾತಿ ನಕ್ಷತ್ರ, ತುಲಾರಾಶಿ. ಇವರ ಲಗ್ನದಲ್ಲಿ ಯಾವ ಗ್ರಹರೂ ಇಲ್ಲ. ಲಗ್ನವನ್ನು ರವಿ ವೀಕ್ಷಿಸುತ್ತಾರೆ. ಲಗ್ನಾಧಿಪತಿ ಚಂದ್ರರು ಪುಷ್ಕರನವಾಂಶದಲ್ಲಿ ಅವಯೋಗಿ ಯಾಗಿ ಸುಖಸ್ಥಾನದಲ್ಲಿ ರಾಹು ನಕ್ಷತ್ರ ಸ್ಥಿತರಿದ್ದಾರೆ.  ಇವರು ಪಾಪ ಕರ್ತರಿಗೆ ಒಳಗಾಗಿದ್ದು ಯಾವ ಶುಭ ಸಂಬಂಧವೂ ಇಲ್ಲ. ಇದರಿಂದ ಲಗ್ನ ಮತ್ತು ಲಗ್ನಾಧಿಪತಿ ಪೀಡಿತರಾಗಿದ್ದಾರೆ.

ಇವರ ಉದ್ಯೋಗ ಸೂಚಕ ದಶಮವು ಮೇಷರಾಶಿಯಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ. ಈ ಸ್ಥಾನವನ್ನು ಕೇತು, ಅವಯೊಗಿ ಚಂದ್ರ ಮತ್ತು ಯೋಗಿ ಉಚ್ಛಶನಿ ವೀಕ್ಷಿಸುತ್ತಾರೆ. ದಶಮಾಧಿಪತಿ ಕುಜರು ಗುರು ನಕ್ಷತ್ರದಲ್ಲಿ ಅಷ್ಟಮದಲ್ಲಿ ಶುಕ್ರರೊಡನೆ ಸ್ವನವಾಂಶ ಸ್ಥಿತರಿದ್ದಾರೆ. ಸರಕಾರಿ ಉದ್ಯೋಗ ಕಾರಕ ರವಿ ಸಪ್ತಮದಲ್ಲಿ ವೈರಿ ಕ್ಷೇತ್ರದಲ್ಲಿ ಅವಯೋಗಿ ಚಂದ್ರ ನಕ್ಷತ್ರದಲ್ಲಿ ಸ್ಥಿತರಿದ್ದಾರೆ. ಯಾವ ಶುಭ ಸಂಬಂಧವೂ ಇಲ್ಲ.

ಇವರ ಉದ್ಯೋಗ ಸೂಚಕ ಅಂಶ ಕುಂಡಲಿಯ ಲಗ್ನವು ಧನು ಆಗಿದ್ದು ಷಷ್ಟಾಂಶದಲ್ಲಿದೆ. ಲಗ್ನಾಧಿಪತಿ ಗುರು ವ್ಯಯಸ್ಥಿತರಿದ್ದಾರೆ. ಕಾರಕ ರವಿ ಉಚ್ಛರಾಗಿ ಪಂಚಮದಲ್ಲಿ ಅಷ್ಟಮಾಧಿಪತಿ ಚಂದ್ರರೊಡನೆ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭ ಸ್ಥಿತರಿದ್ದಾರೆ. ಇವು ಸರಕಾರಿ ಉದ್ಯೋಗ ಸಿಗುವ ಸಾಧ್ಯತೆ ಸೂಚಿಸುತ್ತದೆ.

ಇವರ ಕಳತ್ರ ಸ್ಥಾನ ಸಪ್ತಮವು ಮಕರ ರಾಶಿಯಾಗಿದ್ದು ಇಲ್ಲಿ ಕುಟುಂಬಾಧಿಪತಿ ರವಿ ಸ್ಥಿತರಿದ್ದಾರೆ. ಸಪ್ತಮಾಧಿಪತಿ ಶನಿ ತೃತೀಯದಲ್ಲಿ ಯೋಗಿಯಾಗಿ ರಾಹು ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ರಾಹು ವೀಕ್ಷಿಸುತ್ತಾರೆ. ಇವು ಮದುವೆಯಲ್ಲಿ ವಿಘ್ನಗಳ ಸೂಚಕವಾಗಿದೆ. ಇವರ ದಾಂಪತ್ಯ ಸೂಚಕ ನವಾಂಶ ಕುಂಡಲಿಯ ಲಗ್ನವು ಮೀನವಾಗಿದ್ದು ಭಾಗ್ಯಾಂಶದಲ್ಲಿದೆ. ಲಗ್ನದಲ್ಲಿ ಜನ್ಮಲಗ್ನಾಧಿಪತಿ ಚಂದ್ರರು ಸ್ಥಿತರಿದ್ದಾರೆ.

ಕಾರಕ ಶುಕ್ರರು ವ್ಯಯಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭಾಶುಭ ಸ್ಥಿತರಿದ್ದಾರೆ. ಇವು ದಾಂಪತ್ಯದಲ್ಲಿ ಏರು ಪೇರುಗಳ ಸೂಚಕವಾಗಿದೆ. ಇವರಿಗೆ ಈಗ ಶನಿದಶಾ ಚಂದ್ರ ಭುಕ್ತಿ ನಡೆಯುತ್ತಿದೆ. ಗೋಚಾರದಲ್ಲಿ ಜನ್ಮ ಶನಿ ಸಪ್ತಮ ಗುರು ಇದ್ದಾರೆ. ಇವು ಇವರಿಗೆ ಮದುವೆಗೆ ಸಕಾಲ ಎಂಬುದನ್ನು ಸೂಚಿಸುತ್ತದೆ. ಅಲ್ಲದೇ ಹೆಚ್ಚಿನ ಪ್ರಯತ್ನದಿಂದ 2013ರ ಹೊತ್ತಿಗೆ ಇವರಿಗೆ ಸರಕಾರಿ ಉದ್ಯೋಗವೂ ಸಿಗುವುದು.

ಪರಿಹಾರ: ಹವಳ ಧರಿಸಿ. ಕಾಳಿಕಾ ಅಷ್ಟೋತ್ತರ ಪಠಿಸಿ. ಸಾಯಿಬಾಬಾರನ್ನು ಪೂಜಿಸಿ.

ಸ್ವಾಮಿ ಎಸ್. ಬಿ.ಜಿ ಕೆರೆ:
ಮನೆಯ ನಕ್ಷೆ ಕಳಿಸಿದ್ದೇನೆ. ವಾಸ್ತು ದೋಷವಿದ್ದರೆ ತಿಳಿಸಿ.
ಉತ್ತರ: ನಿಮ್ಮ ಮನೆಯ ಸುತ್ತ ಕಂಪೌಂಡನಲ್ಲಿ ದಕ್ಷಿಣಕ್ಕೆ ಉತ್ತರಕ್ಕಿಂತ ಹೆಚ್ಚು ಖಾಲಿ ಸ್ಥಳವಿದೆ. ಪಶ್ಚಿಮಕ್ಕೆ ಖಾಲಿ ಸ್ಥಳವಿಲ್ಲ. ಇದರಿಂದ ಪಿಶಾಚ ವೀಧಿ ಇಲ್ಲ. ಅಲ್ಲದೇ ದಕ್ಷಿಣದ ಯಮನ ಸ್ಥಾನ ಹೆಚ್ಚಿರುವುದು ಅಶುಭಕರ. ಆದ್ದರಿಂದ ಮನೆಯ ಉತ್ತರ ಗೋಡೆಗೆ ವಾಸ್ತು ಯಂತ್ರ, ಅಷ್ಟದಿಗ್ಬಂಧನ ಯಂತ್ರ ಮತ್ತು ಮತ್ಸ್ಯ ಯಂತ್ರಗಳನ್ನು ಪೂಜಿಸಿ ಸ್ಥಾಪಿಸಿ. ದಕ್ಷಿಣದಲ್ಲಿ ಉತ್ತರಕ್ಕಿಂತ ಕಡಿಮೆ ಸ್ಥಳವಾಗುವಂತೆ ಮಣ್ಣು ಹಾಕಿ ಎತ್ತರಿಸಿ ಹೂಗಿಡಗಳನ್ನು ಬೆಳೆಸಿ.

ಸ್ನಾನಗೃಹ ಮತ್ತು ಶೌಚಾಲಯ ದಿಂದಾಗಿ ಮನೆಯ ಪಾಯ ವಾಯುವ್ಯದಲ್ಲಿ ಬೆಳೆದಂತಾಗಿದ್ದು, ಈಶಾನ್ಯ ಕಡಿತಗೊಂಡಂತಾಗುತ್ತದೆ. ಇದು ಯಜಮಾನರಿಗೆ ಆರ್ಥಿಕ ಮುಗ್ಗಟ್ಟು ತರಬಲ್ಲದು.

ಮನೆಯ ಮುಖ್ಯದ್ವಾರ ದಕ್ಷಿಣ ಮಧ್ಯದಲ್ಲಿದೆ. ದಕ್ಷಿಣವು ವೃಷಭ, ಕನ್ಯಾ ಮಕರ ರಾಶಿಯವರಿಗೆ ಮಾತ್ರ ಶುಭಕರ. ರೂಮುಗಳ ಅಳತೆ ಲಭ್ಯವಿಲ್ಲ. ಇದು ಉಚ್ಛಬುಧನ ಸ್ಥಾನದಲ್ಲಿ ಬರುವಂತೆ ನೋಡಿಕೊಳ್ಳಿ. ಮನೆಗೆ ಐದು ಬಾಗಿಲು ಇದೆ. ಇದು ಅಪಘಾತ ಸೂಚಕ. ಬಾಗಿಲು ಮತ್ತು ಕಿಡಕಿ  ಸಮಸಂಖ್ಯೆಯಲ್ಲಿ ಇರಬೇಕು.

ದೇವರ ಮನೆಯನ್ನು ಕೊನೆ ರೂಮಿನ ಈಶಾನ್ಯದಲ್ಲಿ ನಿರ್ಮಿಸಿ. ಮಧ್ಯದ ರೂಮನ್ನು ಯಜಮಾನರ ರೂಮಾಗಿ ಬಳಿಸಿ. ಉಳಿದಂತೆ ನಿಮ್ಮ ನಕ್ಷೆ ವಾಸ್ತು ಪ್ರಕಾರ ಸರಿಯಾಗಿದೆ. 

ಪ್ರವೀಣ ಕುಮಾರ, ಹರಿಹರ:
 ಮನೆಯ ನಕ್ಷೆ ಕಳಿಸಿದ್ದೇನೆ. ವಾಸ್ತು ದೋಷವಿದ್ದರೆ ತಿಳಿಸಿ.
ಉತ್ತರ: ಇವರು ಕಳಿಸಿದ ನಕ್ಷೆಯಂತೆ ನಿಮ್ಮದು ದಕ್ಷಿಣದ ನಿವೇಶನ. ಮುಖ್ಯದ್ವಾರ ದಕ್ಷಿಣ ಆಗ್ನೇಯಕ್ಕಿದೆ. ಇದು ಶುಭಕರ. ಆದರೆ ದಕ್ಷಿಣ ದಿಕ್ಕು ವೃಷಭ, ಕನ್ಯಾ, ಮಕರ ರಾಶಿಯವರಿಗೆ ಶುಭಕರ. ಪೋರ್ಟಿಕೋದಿಂದಾಗಿ ಆಗ್ನೇಯ ಕಡಿತಗೊಂಡಿದೆ. ಇದು ಮನೆಯ ಹೆಣ್ಣುಮಕ್ಕಳಿಗೆ ಅನಾರೋಗ್ಯ, ಜಗಳ ತರುತ್ತದೆ. ಆದ್ದರಿಂದ ಪಾಯ ಆಯತಾಕಾರ ಗೊಳಿಸಿ, ಮನೆಗೆ ಸೇರಿಸಿ.

ಉತ್ತರದಲ್ಲಿ ಶೌಚಾಲಯವಿದೆ. ಇದು ಅಶುಭಕರ. ಇದನ್ನು ಸ್ನಾನಗೃಹದ ಒಳಗೆ ದಕ್ಷಿಣದಲ್ಲಿ ನಿರ್ಮಿಸಿ ಈ ಸ್ನಾನಗೃಹಕ್ಕೆ ಬಾಗಿಲು ಇಲ್ಲಿ ನಿರ್ಮಿಸಿ. ಇವರ ಮನೆಗೆ 11 ಬಾಗಿಲು ಇದೆ. ಇದು ಮನೆಯ ಹೆಣ್ಣುಮಕ್ಕಳಲ್ಲಿ ಜಗಳ ತರುತ್ತದೆ. ಆದ್ದರಿಂದ 10 ಬಿಟ್ಟು ಸಮಸಂಖ್ಯೆಯ ಬಾಗಿಲು ಚೌಕಟ್ಟು ಇರುವಂತೆ ನೋಡಿಕೊಳ್ಳಿ. ಉಳಿದಂತೆ ನಿಮ್ಮ ನಕ್ಷೆ ವಾಸ್ತು ಪ್ರಕಾರ ಸರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT