ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋತಿಷ್ಯ, ವಾಸ್ತು

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವೈ. ಶೇಖರ, ಬ್ಯಾಡಗಿ: ನಿವೇಶನದ ನಕ್ಷೆ ಕಳಿಸಿದ್ದೆೀನೆ. ಮನೆಕಟ್ಟಲು ಸಲಹೆ ನೀಡಿ.
ಉತ್ತರ: ಇವರ ಜನ್ಮ ನಕ್ಷತ್ರ ತಿಳಿಸಿಲ್ಲ. ಕರ್ಕ. ವೃಶ್ಚಿಕ, ಮೀನ ರಾಶಿಯವರಿಗೆ ಉತ್ತರವೂ, ಮಿಥುನ, ತುಲಾ, ಕುಂಭದವರಿಗೆ ಪಶ್ಚಿಮ ದಿಕ್ಕುಗಳೂ ಶುಭಕರವಾಗುತ್ತದೆ. ಇವರ ನಾಮ ನಕ್ಷತ್ರ ಶ್ರವಣವಾಗಿದ್ದು ಮಕರ ರಾಶಿಯಾಗುತ್ತದೆ. ಇದಕ್ಕೆ ಪಶ್ಚಿಮವೂ ಶುಭಕರ.

ಇವರದು 30X60 ಪಶ್ಚಿಮ ನಿವೇಶನವಾಗಿದ್ದು ಪೂರ್ವಕ್ಕೆ ಹೆಚ್ಚು ಖಾಲಿ ಸ್ಥಳ ಬಿಡಿ. ಉತ್ತರಕ್ಕೆ ದಕ್ಷಿಣಕ್ಕಿಂತ ಹೆಚ್ಚು ಖಾಲಿ ಸ್ಥಳವಿರುವಂತೆ ಆಯತಾಕಾರದಪಾಯ ಮತ್ತು ಶುಭಾಯವನ್ನು ನೋಡಿ ನಿರ್ಮಿಸಿ. ಬಾವಿಯನ್ನು ಅಥವಾ ಸಂಪನ್ನು ಉತ್ತರ, ಈಶಾನ್ಯ ಅಥವಾ ಪೂರ್ವದಲ್ಲಿ ನಿರ್ಮಿಸಿ. ಮನೆಯ ಮುಖ್ಯದ್ವಾರ ಪಶ್ಚಿಮ ವಾಯುವ್ಯದಲ್ಲಿ ಇರಿಸಿ. ಆಗ್ನೇಯದಲ್ಲಿ ಅಡುಗೆ ಮನೆ ನಿರ್ಮಿಸಿ. ನೈರುತ್ಯದಲ್ಲಿ ಯಜಮಾನರ ಕೋಣೆ, ದಕ್ಷಿಣದಲ್ಲಿ ಸ್ನಾನಗೃಹ ಮತ್ತು ಶೌಚಾಲಯ ನಿರ್ಮಿಸಿಕೊಳ್ಳಿ. ಮನೆಗೆ ಸಮ ಸಂಖ್ಯೆಯ (10 ಬಿಟ್ಟು) ಕಿಡಕಿ ಬಾಗಿಲು ಇರುವಂತೆ ನೋಡಿಕೊಳ್ಳಿ. ಮೇಲ್ಮಹಡಿಗೆ ಮೆಟ್ಟಿಲು ಪಶ್ಚಿಮದಲ್ಲಿರಲಿ. ಓವರ್ ಹೆಡ್ ಟ್ಯಾಂಕ್ ನೈರುತ್ಯದಲ್ಲಿರಲಿ. ಪೂಜಾಕೋಣೆ ಈಶಾನ್ಯದಲ್ಲಿರಲಿ.  ವಾಸ್ತು ತಜ್ಞರ ಸಲಹೆ ಪಡೆದು ಮನೆ ಕಟ್ಟುವುದು ಕ್ಷೇಮಕರ.

ಶಂಕರ್ ಲಕ್ಷ್ಮಣ ಶಿಂಧೆ, ಧಾರವಾಡ: ಶಾಂತಿ ಇಲ್ಲ. ವಾಸ್ತು ದೋಷವಿದ್ದರೆ ತಿಳಿಸಿ.
ಉತ್ತರ: ಇವರದು ದಕ್ಷಿಣ ನಿವೇಶನ. ಇದು ವೃಷಭ, ಕನ್ಯಾ, ಮಕರ ರಾಶಿಯವರಿಗೆ ಶುಭಕರ.  ಇವರ ಮನೆ ಆಯತಾಕರವಿಲ್ಲ.ಆಗ್ನೇಯ ಮೂಲೆ ಮತ್ತು ವಾಯುವ್ಯ ಮೂಲೆ ಕಡಿತಗೊಂಡಿದೆ. ಇದು ಯುಜಮಾನರಿಗೆ ಅಪಘಾತ, ಜಗಳ ಹೆಣ್ಣುಮಕ್ಕಳಿಗೆ ಸಂಕಷ್ಟಗಳನ್ನು ತರುತ್ತದೆ. ಆದ್ದರಿಂದ ಮನೆಯ ಪಾಯವನ್ನುಆಯತಾಕಾರಗೊಳಿಸಿ ಮನೆಗೆ ಗ್ರಿಲ್ ಮುಂತಾದವುಗಳಿಂದ ಸೇರಿಸಿ.

ಮನೆಯ ಹಿಂಬಾಗಿಲು ನೀಚ ರಾಹು ಸ್ಥಾನದಲ್ಲಿದೆ. ಇದು ಅಶುಭಕರ. ಬೇರೆಕಡೆ ನಿರ್ಮಿಸಲು ಸಾಧ್ಯವಿಲ್ಲದಿದ್ದರೆ ಇದನ್ನು ಮುಚ್ಚುವುದು ಸೂಕ್ತ. ಮೇಲ್ಮಹಡಿಗಳಲ್ಲಿಯೂ ಇದೇ ಬದಲಾವಣೆ ಅವಶ್ಯಕ. ಮನೆಗೆ ಸಮ ಸಂಖ್ಯೆಯ (10 ಬಿಟ್ಟು) ಬಾಗಿಲು ಕಿಡಕಿ ಇರುವಂತೆ ನೋಡಿಕೊಳ್ಳಿ. ಮೇಲ್ಮಹಡಿಗೆ ಹೋಗಲು ಮೆಟ್ಟಿಲು ಪೂರ್ವದಲ್ಲಿದೆ. ಇದು ಅಶುಭಕರ. ಈ ದೋಷ ನಿವಾರಣೆಗೆ ಮುಖ್ಯದ್ವಾರದ ಮೇಲ್ಗಡೆ ಒಂದು ದೊಡ್ಡ ಕನ್ನಡಿ ಹಾಕಿಕೊಳ್ಳಿ. ಮನೆಯ ಸುತ್ತಲಿನ ಖಾಲಿ ಸ್ಥಳದ ವಿವರ ಸರಿಯಾಗಿ ನಮೂದಿಸಿಲ್ಲ. ಇದು ಉತ್ತರ ಮತ್ತು ಪೂರ್ವಕ್ಕೆ ಹೆಚ್ಚು ಇರಬೇಕು. ಬಹು ಮಹಡಿ ಕಟ್ಟಡ ವಾದ್ದರಿಂದ ವಾಸ್ತು ತಜ್ಞರಿಗೆ ಸ್ಥಳ ತೋರಿಸಿ ಬದಲಾವಾವಣೆ ಮಾಡುವುದು ಉತ್ತಮ.

ಷಡಕ್ಷರಿ ತಾಳೆಕೆರೆ: ಜನನ 1-3-2002, ಸಮಯ 5-0 ಬೆಳಿಗ್ಗೆ.
ಪ್ರಶ್ನೆ : ಹುಟ್ಟಿನಿಂದಲೇ ಅನಾರೋಗ್ಯ. ಮುಂದಿನ ಭವಿಷ್ಯ ತಿಳಿಸಿ.

ಉತ್ತರ: ಇವರದು ಮಕರ ಲಗ್ನ, ಉತ್ತರಾ ಫಾಲ್ಗುಣಿ ನಕ್ಷತ್ರ ಕನ್ಯಾರಾಶಿ. ಇವರ ಲಗ್ನದಲ್ಲಿ ರೋಗಾಧಿಪತಿ ಬುಧರು ಮಾರಕಾಧಿಪತಿ ವೈರಿ ಚಂದ್ರ ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ರಾಹು ಪೂರ್ವಪುಣ್ಯ ಸ್ಥಾನದಿಂದ ವೀಕ್ಷಿಸುತ್ತಾರೆ. ಬೇರಾವ ಶುಭ ಸಂಬಂಧವೂ ಇಲ್ಲ.

ಲಗ್ನಾಧಿಪತಿ ಶನಿ ಪಂಚಮದಲ್ಲಿ, ಪುಷ್ಕರ  ನವಾಂಶದಲ್ಲಿ, ವೈರಿ ಚಂದ್ರ ನಕ್ಷತ್ರದಲ್ಲಿ ರಾಹು ಒಡನೆ ಸ್ಥಿತರಿದ್ದಾರೆ. ಇವರನ್ನು ಕೇತು ಬಾಧಕ ಸ್ಥಾನದಿಂದ ವೀಕ್ಷಿಸುತ್ತಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಬಲಹೀನರೂ ಪೀಡಿತರೂ ಆಗಿದ್ದಾರೆ. ಇವು ಇವರ ಆರೋಗ್ಯದ ಸಮಸ್ಯೆಗಳಿಗೆ ಕಾರಣ ವಾಗಿದೆ.

ಇವರ ಆರೋಗ್ಯ ಸ್ಥಾನ ಷಷ್ಟವು ಮಿಥುನರಾಶಿಯಾಗಿದ್ದು ಇಲ್ಲಿ ವಕ್ರೀ ವ್ಯಯಾಧಿಪತಿ ಗುರುಯೋಗಿಯಾಗಿ, ದಗ್ಧ ರಾಶ್ಯಾಧಿಪತಿಯಾಗಿ, ರಾಹು ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ಗುಳಿಕರು ವ್ಯಯಸ್ಥಾನದಿಂದ ವೀಕ್ಷಿಸುತ್ತಾರೆ.ರೋಗಾಧಿಪತಿ ಬುಧರು ಮೇಲೆ ತಿಳಿಸಿದಂತೆ ಲಗ್ನದಲ್ಲಿದ್ದು ಪೀಡಿತರಾಗಿದ್ದಾರೆ.

ಆರೋಗ್ಯಕಾರಕ ರವಿ ಅವಯೋಗಿಯಾಗಿ, ಅಷ್ಟಮಾಧಿಪತಿಯಾಗಿ, ಬಲಹೀನರಾಗಿ, ಪಾಪಿ ರಾಹು ನಕ್ಷತ್ರದಲ್ಲಿ ಪರಮ ವೈರಿ ಶುಕ್ರರೊಡನೆ ದ್ವಿತೀಯ ಸ್ಥಿತರಿದ್ದಾರೆ. ಇವರನ್ನು ಗುರು ರೋಗಸ್ಥಾನದಿಂದ ವೀಕ್ಷಿಸುತ್ತಾರೆ. ಇವು ಶುಭಕರವಲ್ಲ.

ಇವರ ಆರೋಗ್ಯ ಸೂಚಕ ಅಂಶ ಕುಂಡಲಿಯ ಲಗ್ನವು ಮಕರವೇ ಆಗಿದ್ದು ವರ್ಗೋತ್ತಮವಾಗಿದೆ. ಲಗ್ನಾಧಿಪತಿ ಶನಿ ವ್ಯಯಸ್ಥಿತರಿದ್ದಾರೆ. ಜನ್ಮರೋಗಾಧಿಪತಿ ಬುಧರು ದ್ವಿತೀಯ ಸ್ಥಿತರಿದ್ದಾರೆ. ಆರೋಗ್ಯಕಾರಕರವಿ ಸಪ್ತಮ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಅಶುಭ ಸ್ಥಿತರಿದ್ದಾರೆ. ಇದರಿಂದ ಇವರು ಕಣ್ಣಿನ ಸಮಸ್ಯೆ, ಪಿತ್ತಕೋಶದ ತೊಂದರೆ, ಜಾಂಡೀಸ್, ನರಗಳ ದೌರ್ಬಲ್ಯ, ಮಾನಸಿಕ ಒತ್ತಡ, ಜ್ವರ, ಮೂತ್ರಕೋಶದಕಲ್ಲು ಇತ್ಯಾದಿಗಳಿಂದ ಆಯಾದಶಾ ಭುಕ್ತಿ ಕಾಲದಲ್ಲಿ ನರಳ ಬೇಕಾಗುತ್ತದೆ. ಇವು ಸಹಜವಾಗಿ ಇವರ ವಿದ್ಯಾರ್ಜನೆಯ ಮೇಲೆ ಪರಿಣಾಮ ಬೀರುತ್ತವೆ.

ಇವಕ್ಕೆಲ್ಲ ಹಿಂಜರಿಯದೇ ಇವರು ಯೋಗ, ಸೂರ್ಯನಮಸ್ಕಾರ, ಧ್ಯಾನ, ಇವುಗಳನ್ನು ಈಗಿನಿಂದಲೇ ಅಳವಡಿಸಿಕೊಂಡು ಹೋಮಿಯೋಪತಿ ಔಷಧದ ಸಹಾಯದಿಂದ ದೀರ್ಘಕಾಲ ಪ್ರಯತ್ನಿಸಿದರೆ ಆರೋಗ್ಯ ಮತ್ತು ಉತ್ತಮ ವಿದ್ಯೆ ಗಳಿಸಬಲ್ಲರು. ಅಲ್ಲದೇ ಉತ್ತಮ    ಉದ್ಯೋಗವನ್ನೂ ಗಳಿಸಬಲ್ಲರು.

ಇವರಿಗೆ ಈಗ ಚಂದ್ರ ದಶಾ ಶುಕ್ರ ಭುಕ್ತಿ ನಡೆಯುತ್ತಿದ್ದು ಗೋಚಾರದಲ್ಲಿ ಅಷ್ಟಮ ಗುರು, ಸಾಡೆಸಾತಿ ನಡೆಯುತ್ತಿದೆ. ಇವು ಶುಭಕರವಲ್ಲ. ಸೂಕ್ತ ಚಿಕಿತ್ಸೆಯಿಂದ 2014ರನಂತರ ಇವರ ಆರೋಗ್ಯ ಸುಧಾರಿಸುವುದು.

ಪರಿಹಾರ: ನೀಲಮಣಿ ಧರಿಸಿ. ಸರ್ಪದೋಷ ಶಾಂತಿ ಮಾಡಿಸಿ. ಸುಬ್ರಮಣ್ಯ  ಅಷ್ಟೋತ್ತರ ಪಠಿಸಿ. ಆದಿತ್ಯ ಹೃದಯ ಕವಚ ಸಹಿತ ಪಠಿಸಿ. ದುರ್ಗಾಮಾತೆಯನ್ನು ಪೂಜಿಸಿ. ಗುರುವಾರ ಸಾಯಿಬಾಬಾರನ್ನು ಪೂಜಿಸಿ.

ಹೆಸರು ಬೇಡ, ಶಿವಮೊಗ್ಗ: ಜನನ   22-5-1985, ಸಮಯ 7-28 ಸಂಜೆ.
ಪ್ರಶ್ನೆ:ಉದ್ಯೋಗ ಸಿಗುತ್ತಿಲ್ಲ. ಮದುವೆ ಸಮಸ್ಯೆ,   ಪರಿಹಾರ ತಿಳಿಸಿ.

ಉತ್ತರ: ಇವರದು ವೃಶ್ಚಿಕ ಲಗ್ನ, ಆರಿದ್ರಾ ನಕ್ಷತ್ರ ಮಿಥುನರಾಶಿ. ಇವರ ಲಗ್ನದಲ್ಲಿ ಯಾವ ಗ್ರಹರೂ    ಇಲ್ಲ. ಲಗ್ನವನ್ನು ರವಿ ಮತ್ತು ಲಗ್ನಾಧಿಪತಿಕುಜ ವೀಕ್ಷಿಸುತ್ತಾರೆ. ಲಗ್ನಾಧಿಪತಿ ಕುಜರು ಸಪ್ತಮದಲ್ಲಿ ಸ್ವನಕ್ಷತ್ರದಲ್ಲಿ ರವಿಯೊಡನೆ ಸ್ಥಿತರಿದ್ದಾರೆ. ಇವರನ್ನು ನೀಚಗುರು ದಗ್ಧರಾಶಿಯಿಂದ ವೀಕ್ಷಿಸುತ್ತಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.
ಇವರು ಇವರ ವಿದ್ಯಾರ್ಹತೆ ತಿಳಿಸಿಲ್ಲ. ಇವರ ಕರ್ಮಸ್ಥಾನ ದಶಮವು ಸಿಂಹರಾಶಿಯಾಗಿದ್ದು, ದಗ್ಧವಾಗಿದೆ. ಈ ಸ್ಥಾನವನ್ನು ಯೋಗಿರಾಹು ಮತ್ತು ವಕ್ರೀ ಶನಿ ವೀಕ್ಷಿಸುತ್ತಾರೆ. ದಶಮಾಧಿಪತಿರವಿ ಸ್ವನಕ್ಷತ್ರದಲ್ಲಿ ಪುಷ್ಕರ ನವಾಂಶದಲ್ಲಿ ಸಪ್ತಮದಲ್ಲಿ, ಶತ್ರುಕ್ಷೇತ್ರದಲ್ಲಿ ಕುಜರೊಡನೆ ಸ್ಥಿತರಿದ್ದಾರೆ. ಇವರನ್ನು ನೀಚ ಗುರು ದಗ್ಧರಾಶಿಯಿಂದ ವೀಕ್ಷಿಸುತ್ತಾರೆ.

ಇವರ ಉದ್ಯೋಗ ಸೂಚಕ ದಶಾಂಶ ಕುಂಡಲಿಯ ಲಗ್ನವು ಧನು ಆಗಿದ್ದು ಧನಾಂಶದಲ್ಲಿದೆ. ಲಗ್ನದಲ್ಲಿ ರಾಹು ಸ್ಥಿತರಿದ್ದು ಲಗ್ನಾಧಿಪತಿಗುರು ಪಂಚಮ ಸ್ಥಿತರಿದ್ದಾರೆ. ಜನ್ಮ ಲಗ್ನಾಧಿಪತಿ ಕುಜರು ದಶಮದಲ್ಲಿ ವೈರಿಕ್ಷೇತ್ರದಲ್ಲಿ ಗುಳಿಕರೊಡನೆ ಸ್ಥಿತರಿದ್ದಾರೆ. ಜನ್ಮದಶಮಾಧಿಪತಿ ಸುಖ ಸ್ಥಾನ ಸ್ಥಿತರಿದ್ದಾರೆ. ಇದರಿಂದ ಇವರು ಹೆಚ್ಚಿನ ಪ್ರಯತ್ನ ಮಾಡಿದರೆ ಸರಕಾರಿ ಉದ್ಯೋಗ ಗಳಿಸಿಕೊಳ್ಳಬಲ್ಲರು.

ಇವರ ಕಳತ್ರಸ್ಥಾನ ಸಪ್ತಮವು ವೃಷಭರಾಶಿಯಾಗಿದ್ದು ಇಲ್ಲಿ ದಗ್ಧರಾಶ್ಯಾಧಿಪತಿರವಿ ಮತ್ತುಕುಜರು ಸ್ಥಿತರಿದ್ದಾರೆ. ಸಪ್ತಮಾಧಿಪತಿ ಮತ್ತು ಕಳತ್ರಕಾರಕ ಶುಕ್ರರುಉಚ್ಛರಾಗಿ, ಅವಯೋಗಿಯಾಗಿ, ಪಂಚಮದಲ್ಲಿ ಅಷ್ಟಮಾಧಿಪತಿ ಬುಧ ನಕ್ಷತ್ರ ಸ್ಥಿತರಿದ್ದಾರೆ. ಯಾವ ಶುಭ ಸಂಬಂಧವೂ ಇಲ್ಲ. ಇವು ಇವರ ಮದುವೆ ನಿಧಾನ ವಾಗಲು ಕಾರಣವಾಗಿದೆ.

ಇವರ ದಾಂಪತ್ಯ ಸೂಚಕ ನವಾಂಶ ಕುಂಡಲಿಯ ಲಗ್ನವು ಧನು ಆಗಿದ್ದು ಇಲ್ಲಿ ಅಷ್ಟಮಾಧಿಪತಿ ಚಂದ್ರರು ಸ್ಥಿತರಿದ್ದಾರೆ. ಲಗ್ನಾಧಿಪತಿ ಗುರು ಉಚ್ಛರಾಗಿ ಅಷ್ಟಮ ಸ್ಥಿತರಿದ್ದು ಪರಿವರ್ತನಯೋಗದಲ್ಲಿದ್ದಾರೆ. ಕಾರಕ ಶುಕ್ರರು ತೃತೀಯದಲ್ಲಿದ್ದಾರೆ. ಹೆಚ್ಚಿನ ಗ್ರಹರು ದುಃಸ್ಥಾನ ಸ್ಥಿತರಿದ್ದಾರೆ. ಇವು ದಾಂಪತ್ಯದಲ್ಲಿ ಸಂಕಷ್ಟಗಳ ಸೂಚಕವಾಗಿದೆ. ಇವರಿಗೆ ದಕ್ಷಿಣ ಅಥವಾ ಪೂರ್ವದಿಕ್ಕಿನ ವರರನ್ನು ಸೂಚಿಸುತ್ತದೆ.

ಇವರಿಗೆ ಈಗ ಗುರು ದಶಾ ಅವಯೋಗಿ ಶುಕ್ರ ಭುಕ್ತಿ ನಡೆಯುತ್ತಿದೆ. ಗೋಚಾರದಲ್ಲಿ ಪಂಚಮಶನಿ, ಲಾಭ   ಗುರು ಇದ್ದಾರೆ. ಅಡೆತಡೆಗಳಿದ್ದರೂ ಮೇ 2012ರ ಒಳಗೆ ಇವರ ಮದುವೆ ನೆರವೇರುವ ಸಾಧ್ಯತೆ ಇದೆ. 2014 ರಲ್ಲಿ ಖಂಡಿತಾ ನೆರವೇರುವುದು.

ಪರಿಹಾರ: ಕನಕ ಪುಷ್ಯರಾಗ ಧರಿಸಿ.ಕಾಳಿಕಾ ಅಷ್ಟೋತ್ತರ ಪಠಿಸಿ. ಲಲಿತಾ ತ್ರಿಶತಿ ಪಠಿಸಿ. ಸ್ವರ್ಣಗೌರಿ ವ್ರತಮಾಡಿ.ವಿನಾಯಕ ಶಾಂತಿ ಮಾಡಿಸಿ.


ಬಿ.ಶಿವಸ್ವಾಮಿ, ಚಿತ್ರದುರ್ಗ: ಜನನ   18-4-1990. ಸಮಯ 9-30 ರಾತ್ರಿ.
ಪ್ರಶ್ನೆ: ಬಿ.ಇ. ಓದುತ್ತಿದ್ದೆೀನೆ. ಯಶಸ್ಸು ಸಿಗುತ್ತಿಲ್ಲ. ಬೇರೆ ಯಾವ ವಿಷಯ ಓದಬಹುದು ತಿಳಿಸಿ.

ಉತ್ತರ: ಇವರದು ವೃಶ್ಚಿಕ ಲಗ್ನ, ಉತ್ತರಾಷಾಢ ನಕ್ಷತ್ರ ಮಕರ ರಾಶಿ. ಇವರ ಲಗ್ನಾಧಿಪತಿ ಕುಜರು ಚತುರ್ಥದಲ್ಲಿ  ಸ್ವನಕ್ಷತ್ರದಲ್ಲಿ ಸಪ್ತಮಾಧಿಪತಿಯೋಗಿ ಶುಕ್ರರೊಡನೆ ಸ್ಥಿತರಿದ್ದಾರೆ. ಇವರನ್ನು ದಗ್ಧರಾಶಿಯಿಂದ ಅವಯೋಗಿಗುರು ವೀಕ್ಷಿಸುತ್ತಾರೆ. ಲಗ್ನದಲ್ಲಿ ಯಾವ ಗ್ರಹರೂ ಇಲ್ಲ. ಲಗ್ನವನ್ನು ಕೇತು ವೀಕ್ಷಿಸುತ್ತಾರೆ.ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.

ಇವರ ಉನ್ನತ ವಿದ್ಯಾ ಸೂಚಕ ಪಂಚಮವು ಮೀನರಾಶಿಯಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ. ಈ ಸ್ಥಾನವನ್ನುಕೇತು ಮತ್ತು ಶನಿ ವೀಕ್ಷಿಸುತ್ತಾರೆ. ಪಂಚಮಾಧಿಪತಿ ಗುರು ಅವಯೋಗಿಯಾಗಿ ದಗ್ಧರಾಶಿಯಲ್ಲಿ ರಾಹು ನಕ್ಷತ್ರದಲ್ಲಿ, ವೈರಿಕ್ಷೇತ್ರದಲ್ಲಿ, ಅಷ್ಟಮ ಸ್ಥಿತರಿದ್ದಾರೆ. ಇವರಿಗೆಯಾವ ಶುಭ ಸಂಬಂಧವೂ ಇಲ್ಲ. ಇವು ಉನ್ನತ ವಿದ್ಯೆಗೆ ಪೂರಕವಲ್ಲ.

ಇವರ ವೃತ್ತಿ ಶಿಕ್ಷಣ ಸ್ಥಾನ ಷಷ್ಟವು ಮೇಷರಾಶಿಯಾಗಿದ್ದು ಇಲ್ಲಿ ಉಚ್ಛರವಿ ಮತ್ತು ಅಷ್ಟಮಾಧಿಪತಿ, ದಗ್ಧರಾಶ್ಯಾಧಿಪತಿ ಬುಧರು ಸ್ಥಿತರಿದ್ದಾರೆ. ಷಷ್ಟಾಧಿಪತಿಕುಜರು ಚತುರ್ಥದಲ್ಲಿ ಸ್ಥಿತರಿದ್ದು ಮೇಲೆ ತಿಳಿಸಿದಂತೆ ಪೀಡಿತರಾಗಿದ್ದಾರೆ.

ಇವರ ಉನ್ನತ ವಿದ್ಯಾಸೂಚಕ ಅಂಶಕುಂಡಲಿಯ ಲಗ್ನವು ಕರ್ಕಾಟಕವಾಗಿದ್ದು ಭಾಗ್ಯಾಂಶದಲ್ಲಿದೆ. ಲಗ್ನಾಧಿಪತಿ ಚಂದ್ರರು ವಿದ್ಯಾಕಾರಕ ಬುಧರೊಡನೆ  ಅಷ್ಟಮ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭ ಸ್ಥಿತರಿದ್ದಾರೆ. ಇದರಿಂದ ಇವರು   ಎಲೆಕ್ಟ್ರಿಕಲ್, ಅಥವಾ ಸಿವಿಲ್ ಎಂಜನಿಯರಿಂಗ್ ಮಾಡಬಹುದು. ಎಲ್ಲಕ್ಕಿಂತ ಇವರು ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ ಓದಿದ್ದರೆ ಯಶಸ್ಸು ಇವರದಾಗುತ್ತಿತ್ತು. ಆದರೂ ನಿರಾಶರಾಗದೆ ಮನಸ್ಸನ್ನು ನಿಯಂತ್ರಿಸಲು ಯೋಗ ಧ್ಯಾನಗಳ ಮೊರೆ ಹೋದರೆ 2015ರ ಹೊತ್ತಿಗೆ ಉತ್ತಮ ಯಶಸ್ಸು ಸಿಗುವುದು. ಇವರಿಗೆ ಈಗ ರಾಹುದಶಾ ಅವಯೋಗಿ ಗುರು ಭುಕ್ತಿ ನಡೆಯುತ್ತಿದ್ದುಗೋಚಾರದಲ್ಲಿ ದಶಮ ಶನಿ, ಚತುರ್ಥಗುರು ಇದ್ದಾರೆ.ಇವು ಶುಭಾಶುಭಕರ.

ಪರಿಹಾರ: ಕನಕ ಪುಷ್ಯರಾಗ ಧರಿಸಿ. ಸಾಯಿಬಾಬಾ ಅಷ್ಟೋತ್ತರ ಪಠಿಸಿ. ಶಾರದಾಂಬೆಯನ್ನು ಪೂಜಿಸಿ. ರುದ್ರಾಭಿಷೇಕ ಮಾಡಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT