ನವದೆಹಲಿ (ಪಿಟಿಐ): ಖಾಸಗಿ ಚಾನೆಲ್ನಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಹಿಂದಿ ಧಾರಾವಾಹಿ `ಜೋಧಾ ಅಕ್ಬರ್' ಪ್ರಸಾರವನ್ನು ನಿಷೇಧಿಸುವಂತೆ ರಾಜ್ಯಸಭೆಯ ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದರು.
ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯೆ ನಜ್ಮಾ ಹೆಪ್ತುಲ್ಲಾ, ಖಾಸಗಿ ಚಾನೆಲ್ನಲ್ಲಿ ಪ್ರಸಾರವಾಗುತ್ತಿರುವ `ಜೋಧಾ ಅಕ್ಬರ್' ಹಿಂದಿ ಧಾರಾವಾಹಿಯಲ್ಲಿ ದೇಶದ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿದರು.
ಜೋಧಾಳನ್ನು ಬಲವಂತವಾಗಿ ಕೂಡಿ ಹಾಕಿದ ಕ್ರೂರಿ ಹಾಗೂ ಮಹಿಳಾ ಪೀಡಕನಂತೆ ಅಕ್ಬರ್ನನ್ನು ಈ ಧಾರಾವಾಹಿಯಲ್ಲಿ ತೋರಿಸಲಾಗಿದೆ. ಇದು ಅಕ್ಬರ್ ಕುರಿತು ನಕಾರಾತ್ಮಕ ಧೋರಣೆ ಬೆಳೆಸುತ್ತದೆ ಎಂದು ನಜ್ಮಾ ಹೇಳಿದ್ದಾರೆ.
ಟಿಪ್ಪು ಸುಲ್ತಾನ್, ಶಿವಾಜಿ, ಮಹಾರಾಣಾ ಪ್ರತಾಪ್ ಸಿಂಹ ಅವರ ಜೀವನ ಚರಿತ್ರೆಗಳನ್ನು ಪ್ರಸಾರ ಮಾಡಿದ ಗುಣಾತ್ಮಕ ಧಾರಾವಾಹಿಗಳು ಉತ್ತಮ ಸಂದೇಶ ನೀಡಿವೆ. ಆದರೆ, ಈ ಬಾರಿ ಖಾಸಗಿ ಟಿಲಿವಿಷನ್ ಧಾರಾವಾಹಿ ಅಕ್ಬರ್ನನ್ನು ನಿರಂಕುಶ ಹಾಗೂ ಪ್ರಜಾಪೀಡಕ ಚಕ್ರವರ್ತಿಯಂತೆ ಚಿತ್ರೀಕರಿಸಿರುವುದು ಸರಿಯಲ್ಲ. ಕೂಡಲೇ ಈ ಧಾರಾವಾಹಿಯ ಪ್ರಸಾರ ನಿಷೇಧಿಸಬೇಕು ಎಂದು ಪ್ರತಿಪಾದಿಸಿದರು.
ಜೆಡಿಯು ಸದಸ್ಯ ಶಿವಾನಂದ ತಿವಾರಿ, ಕಾಂಗ್ರೆಸ್ನ ಹುಸೇನ್ ದಳವಾಯಿ, ಬಿಜೆಪಿಯ ರವಿಶಂಕರ್ ಪ್ರಸಾದ್ ಸೇರಿದಂತೆ ಅನೇಕರು ನಜ್ಮಾ ಬೆಂಬಲಕ್ಕೆ ನಿಂತರು. ರಾಷ್ಟ್ರ ವಿರೋಧಿ ಭಾವನೆ ಬಿತ್ತುವ ಮತ್ತು ಇತಿಹಾಸವನ್ನು ತಿರುಚುವ ಇಂಥ ಧಾರಾವಾಹಿ ಪ್ರಸಾರದ ಮೇಲೆ ನಿಗಾ ಇಡುವುದು ಸರ್ಕಾರದ ಕೆಲಸ ಎಂದು ಉಪ ಸಭಾಪತಿ ಪಿ.ಜೆ. ಕುರಿಯನ್ ಅಭಿಪ್ರಾಯಪಟ್ಟರು.