ಗೌರಿಬಿದನೂರು: ಜೋಳಕ್ಕೆ ಬೆಂಬಲ ಬೆಲೆಗೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನವೂ ಮುಂದುವರೆಯಿತು. ರೈತರು ಎರಡು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದರೂ; ಅಧಿಕಾರಿಗಳಿಗೆ ಸಮಸ್ಯೆ ಕೇಳುವ ಸೌಜನ್ಯವು ಇಲ್ಲದಂತಾಗಿದೆ.
ರಾಜಕಾರಣಿಗಳು ಅಧಿಕಾರ ಸ್ವೀಕರಿಸುವಾಗ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ರೈತರಿಗೆ ಸೌಲಭ್ಯ ಒದಗಿಸಿಕೊಡುವ ಭರವಸೆ ನೀಡುತ್ತಾರೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿಲ್ಲ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ಲಕ್ಷ್ಮೀನಾರಾಯಣ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಕಚೇರಿ ಮುಂದೆ ಊಟ ತಯಾರಿಸಿ ಸೇವಿಸಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ಗೌಡ, ರೈತ ಸಂಘದ ಕಾರ್ಯದರ್ಶಿ ಸನತ್ ಕುಮಾರ್, ಪದಾಧಿಕಾರಿಗಳಾದ ರಾಜಣ್ಣ, ಮುದ್ದರಂಗಪ್ಪ, ಅಶ್ವತ್ಥಪ್ಪ, ವೆಂಕಟೇಶ್, ಸುರೇಶ್ ರೆಡ್ಡಿ, ದೇವನಹಳ್ಳಿ ಶ್ರೀನಿವಾಸ್, ಆನಂದ್, ನಾರಾಯಣಪ್ಪ, ಮಂಜುನಾಥ್, ಆದಿ ನಾರಾಯಣಪ್ಪಇತರರಿದ್ದರು.
ಚಿಕ್ಕಬಳ್ಳಾಪುರ: ನಗರಸಭೆಯಲ್ಲಿ ಪೌರಾಯುಕ್ತರಿಂದ ಹಣ ಮತ್ತು ಅಧಿಕಾರದ ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ಕರುನಾಡ ಸೇನೆಯ ಸದಸ್ಯರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ಹಲ ವಾಣಿಜ್ಯ ವಹಿವಾಟುಗಳನ್ನು ನೋಂದಣಿ ಮಾಡಿಸದೆ ನಡೆಸಲಾಗುತ್ತಿದೆ. ನೋಂದಣಿ ಮಾಡಿಸುವಾಗ ಕಾನೂನು ಪಾಲಿಸುತ್ತಿಲ್ಲ ಎಂದು ದೂರಿದರು.
ಹಳೆ ಬಸ್ ನಿಲ್ದಾಣದಲ್ಲಿ ನಡೆದಿರುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದರ ಬಗ್ಗೆ ತನಿಖೆ ನಡೆಯಬೇಕು. ನಡೆಯದ ಕಾಮಗಾರಿಗೆ ಬಿಲ್ ಪಾವತಿಸಿರುವುದರ ಬಗ್ಗೆಯೂ ತನಿಖೆ ನಡೆಯಬೇಕು. 2012 ರಿಂದ ಇದುವರೆಗೂ 60 ಲಕ್ಷ ಮೊತ್ತದ ರಸ್ತೆ ದುರಸ್ತಿ ಟೆಂಡರ್ ಕರೆದಿದ್ದು, ಕಾಮಗಾರಿ ನಡೆದಿಲ್ಲ.
ಪ್ಲಾಸ್ಟಿಕ್ ನಿಯಂತ್ರಣ ಮಾಡಿಲ್ಲ. ಹಲ ಸಮಸ್ಯೆಗಳ ಬಗ್ಗೆ ಈಗಾಗಲೇ ಮನವಿಪತ್ರ ನೀಡಿದ್ದರೂ ಕ್ರಮ ಕೈಗೊಳ್ಳದಿರುವುರಿಂದ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮನವಿಪತ್ರವನ್ನು ಸಲ್ಲಿಸಿದರು. ಕರುನಾಡ ಸೇನೆ ಅಧ್ಯಕ್ಷ ಶ್ರೀರಾಮಗೌಡ, ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಬಾಲು, ರವಿಕುಮಾರ್, ಮುನಿರಾಜು, ತಿಲಕ್ಕುಮಾರ್, ಬಾಲಸುಬ್ರಮಣಿ, ಹೇಮಗಿರಿ, ರಾಜೇಶ್, ಮೂರ್ತಿ, ಚೇತನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.