ಗೌರಿಬಿದನೂರು:ಕ್ವಿಂಟಲ್ ಮೆಕ್ಕೆಜೋಳಕ್ಕೆ ₨ 1800 ಬೆಂಬಲ ಬೆಲೆ ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಗುರುವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
ತಾಲ್ಲೂಕಿನಲ್ಲಿ ಮೆಕ್ಕೆಜೋಳವನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಜೋಳಕ್ಕೆ ಬೆಂಬಲ ಬೆಲೆ ಇಲ್ಲದೆ ರೈತರು ನಷ್ಟ ಅನುಭವಿಸುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಆರ್.ಲಕ್ಷ್ಮೀನಾರಾಯಣ ಹೇಳಿದರು.
ರೈತರು ಬೆಳೆದ ಎಲ್ಲ ಬೆಳೆಗಳಿಗೂ ಸೂಕ್ತ ಬೆಲೆ ನಿಗದಿಗೊಳಿಸಬೇಕು, ಬ್ಯಾಂಕ್ಗಳು ಬಡ್ಡಿ ರಹಿತ ಬೆಳೆ ಸಾಲವನ್ನು ನೀಡಬೇಕು, ರೈತರು ಬೆಳೆದಿರುವ ಎಲ್ಲ ಉತ್ಪನ್ನಗಳ ಖರೀದಿ ವ್ಯವಹಾರ ಎಪಿಎಂಸಿ ಆವರಣದಲ್ಲಿಯೇ ನಡೆಯಬೇಕು, ಬೆಳೆ ವಿಮಾ ಯೋಜನೆ ವಿಸ್ತರಿಸಿ ರೈತರ ಆರ್ಥಿಕ ನಷ್ಟ ಭರಿಸಬೇಕು ಎಂದು ಅವರು ಒತ್ತಾಯಿಸಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ಗೌಡ ಮಾತನಾಡಿ, ರೈತರು ಬೆಳೆದಿರುವ ಮೆಕ್ಕೆ ಜೋಳಕ್ಕೆ ನವೆಂಬರ್ ತಿಂಗಳಿನಲ್ಲಿಯೇ ಖರೀದಿ ಕೇಂದ್ರ ಸ್ಥಾಪಿಸಬೇಕಿತ್ತು. ಸರ್ಕಾರ ವಿಳಂಬ ಮಾಡಿದ್ದರಿಂದ ಸಂಗ್ರಹಣೆ ಮಾಡಿಕೊಳ್ಳಲು ಸ್ಥಳಾವಕಾಶವಿಲ್ಲದೆ, ಸಾಲ ತೀರಿಸಲು ಕಡಿಮೆ ಬೆಲೆಗೆ ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದರು.
ರೈತ ಸಂಘದ ಕಾರ್ಯದರ್ಶಿ ಸನತ್ ಕುಮಾರ್, ಮುಖಂಡರಾದ ರಾಜಣ್ಣ, ಮುದ್ದರಂಗಪ್ಪ, ಅಶ್ವತ್ಥಪ್ಪ, ವೆಂಕಟೇಶ್, ದೇವನಹಳ್ಳಿ ಶ್ರೀನಿವಾಸ್, ಆನಂದ್, ನಾರಾಯಣಪ್ಪ ಇತರರಿದ್ದರು.