ಶಿವಮೊಗ್ಗ: ಅನುವಾದ ಎನ್ನುವುದು ವಿಶ್ವದಲ್ಲಿ ನಿರಂತರ ಪ್ರಕ್ರಿಯೆ. ವಿವಿಧ ಪ್ರದೇಶ, ಭಾಷೆಗಳನ್ನು ಒಗ್ಗೂಡಿಸುವ ಶಕ್ತಿ ಅದಕ್ಕಿದೆ. ಹಾಗಾಗಿ, ಅನುವಾದ ವಿಶ್ವವ್ಯಾಪಕವಾದದ್ದು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ. ಬಾರಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಸಾರಾಂಗ, ರಾಷ್ಟ್ರೀಯ ಅನುವಾದ ಮಿಷನ್, ಮೈಸೂರಿನ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರದಿಂದ ಹಮ್ಮಿಕೊಂಡಿರುವ ನಾಲ್ಕು ದಿನಗಳ `ಕನ್ನಡ ಅನುವಾದಕರ ತರಬೇತಿ ಶಿಬಿರ~ ಉದ್ಘಾಟಿಸಿ ಅವರು ಮಾತನಾಡಿದರು.
ಅನುವಾದ ಪ್ರಕ್ರಿಯೆ ಹಲವು ವಲಯಗಳಲ್ಲಿ ನಡೆದುಕೊಂಡು ಬಂದಿದೆ. ಪ್ರಚಲಿತದಲ್ಲಿ ಅನುವಾದ ಕ್ಷೇತ್ರಕ್ಕೆ ತುಂಬಾ ಮಹತ್ವವಿದೆ ಎಂದು ಅವರು ಪ್ರತಿಪಾದಿಸಿದರು.
ಆಶಯ ಭಾಷಣ ಮಾಡಿದ ಪ್ರೊ.ರಾಜೇಂದ್ರ ಚೆನ್ನಿ, ಅನುವಾದ ಎನ್ನುವುದು ಇಂದು ಉದ್ಯಮವಾಗಿ ಬೆಳೆಯುತ್ತಿದೆ. ಜಾಗತೀಕರಣದ ಸನ್ನಿವೇಶದಲ್ಲಿ ಜ್ಞಾನಾಧಾರಿತ ಪಠ್ಯಗಳನ್ನು ಅನುವಾದ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಅನುವಾದದಲ್ಲಿ ಸ್ವಾತಂತ್ರ್ಯ ಅತಿ ಕಡಿಮೆ. ಇದು ಚರಿತ್ರೆಯ ಸಾಂದರ್ಭಿಕ ಒತ್ತಡಗಳಿಗೆ ಬದ್ಧವಾಗಿರುತ್ತದೆ. ಇವತ್ತಿನ ಅಧುನಿಕ ವ್ಯಕ್ತಿಯ ಪ್ರತಿಕ್ಷಣವು ಅನುವಾದದ ಆವರಣದಲ್ಲಿರುತ್ತದೆ ಎಂದು ವಿಶ್ಲೇಷಿಸಿದರು.
ನಾವು ಬದುಕುತ್ತಿರುವ ಜಗತ್ತು ಅನುವಾದದ ಮೂಲಕ ನಡೆಯುತ್ತಿದೆ. ಅನುವಾದ ಎನ್ನುವುದರ ಮೇಲೆಯೇ ವಿಶ್ವದ ಇಡೀ ವಿದ್ಯಮಾನ ನಿಂತಿದೆ ಎಂದರು.
ಎಸ್.ವಿ. ಪುರುಷೋತ್ತಮ್ ಪ್ರಾರ್ಥಿಸಿದರು. ಪ್ರಸಾರಾಂಗ ನಿರ್ದೇಶಕ ಡಾ.ಜಿ. ಪ್ರಶಾಂತ ನಾಯಕ್ ಸ್ವಾಗತಿಸಿದರು. ರಾಷ್ಟ್ರೀಯ ಅನುವಾದ ಮಿಷನ್ನ ಹಿರಿಯ ಸಂಯೋಜಕರಾದ ಡಾ.ಎಲ್.ಮಂಜುಳಾಕ್ಷಿ ವಂದಿಸಿದರು. ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಕಾರ್ಯಕ್ರಮ ನಿರೂಪಿಸಿದರು.