ಬೆಂಗಳೂರು: ರಾಜ್ಯ ಜ್ಞಾನ ಆಯೋಗದ ಮಹತ್ವಾಕಾಂಕ್ಷೆಯ `ಜ್ಞಾನ ಫೆಲೋಶಿಪ್~ ಯೋಜನೆಯಡಿ ಫೆಲೊಗಳಾಗಿ ಕೆಲಸ ಮಾಡಲು ಆಸಕ್ತಿ ತೋರಿರುವ 48 ಮಂದಿ ಯುವಕರ ಸಂದರ್ಶನ ಶನಿವಾರ ನಡೆದಿದೆ. ಜ್ಞಾನ ಆಯೋಗದ ಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಪ್ರತಿನಿಧಿಗಳು ಈ ಸಂದರ್ಶನವನ್ನು ನಡೆಸಿದರು.
ಈ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ಆಯೋಗದ ಸದಸ್ಯ ಕಾರ್ಯದರ್ಶಿ ಪ್ರೊ.ಎಂ.ಕೆ. ಶ್ರೀಧರ್, `ಜ್ಞಾನ ಫೆಲೊಗಳಾಗಿ ಕೆಲಸ ನಿರ್ವಹಿಸಲು ಆಸಕ್ತಿ ಮತ್ತು ಅರ್ಹತೆ ಇದ್ದ 242 ಮಂದಿ ಲಿಖಿತ ಪರೀಕ್ಷೆ ಬರೆದಿದ್ದರು. ಇವರಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೊದಲ ಐವತ್ತು ಮಂದಿಯನ್ನು ಸಂದರ್ಶನಕ್ಕೆ ಕರೆಯಲಾಗಿತ್ತು~ ಎಂದು ತಿಳಿಸಿದರು.
ಐವತ್ತರಲ್ಲಿ 48 ಮಂದಿ ಮಾತ್ರ ಈ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಫೆಲೊಗಳ ಜೊತೆ ಕೆಲಸ ಮಾಡಲು ಆಸಕ್ತಿ ತೋರಿಸಿರುವ ರಾಜ್ಯ ಸರ್ಕಾರದ 10 ಇಲಾಖೆಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಫೆಲೊಗಳನ್ನು ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.
`ಜ್ಞಾನ ಫೆಲೋಶಿಪ್~ನಲ್ಲಿ ಆಸಕ್ತಿ ತೋರಿಸಿ ಒಟ್ಟು 3,036 ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರ ಪೈಕಿ 408 ಮಂದಿ ಮಾತ್ರ ಆಯೋಗದ ಮಾನದಂಡಗಳಿಗೆ ಹೊಂದಿಕೆಯಾಗುವಂತಿದ್ದರು. ಈ ಅಭ್ಯರ್ಥಿಗಳ ದಾಖಲಾತಿಗಳನ್ನು ಆಗಸ್ಟ್ 21ರಂದು ಪರಿಶೀಲಿಸಿದ ಆಯೋಗ 242 ಮಂದಿಗೆ ಲಿಖಿತ ಪರೀಕ್ಷೆ ನಡೆಸಿತ್ತು.
ಫೆಲೊಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅರ್ಹತೆಯೊಂದೇ ಆಧಾರ ಎಂದ ಅವರು, `ಮೇಲ್ನೋಟಕ್ಕೆ ಕಂಡುಬಂದಂತೆ ಸಂದರ್ಶನದಲ್ಲಿ ಎಲ್ಲ ವರ್ಗ, ಪ್ರದೇಶಗಳ ಅಭ್ಯರ್ಥಿಗಳು ಪಾಲ್ಗೊಂಡಿದ್ದರು~ ಎಂದು ತಿಳಿಸಿದರು.
28ರಿಂದ 40 ವರ್ಷದೊಳಗಿನ ಅರ್ಹರಿಗೆ ಈ ಯೋಜನೆಯಡಿ ಫೆಲೋಶಿಪ್ ನೀಡಿ ಅವರನ್ನು ಸರ್ಕಾರದ ವಿವಿಧ ಇಲಾಖೆಗಳ ಜೊತೆ ಕೆಲಸ ನಿರ್ವಹಿಸುವಂತೆ ಮಾಡಲಾಗುತ್ತದೆ. ಸರ್ಕಾರಿ ಇಲಾಖೆಗಳ ಕಾರ್ಯಶೈಲಿಗೆ ಹೊಸ ಚಿಂತನೆಗಳನ್ನು ತುಂಬುವುದು ಈ ಫೆಲೋಶಿಪ್ನ ಉದ್ದೇಶ ಎನ್ನುವುದು ಆಯೋಗದ ಹೇಳಿಕೆ. ಫೆಲೊಗಳಾಗಿ ಆಯ್ಕೆಯಾಗುವವರಿಗೆ ಮಾಸಿಕ 40 ಸಾವಿರ ರೂಪಾಯಿ ಸ್ಟೈಫಂಡ್ ನೀಡಲಾಗುತ್ತದೆ.
`ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಇದೇ 24ರಂದು ನಡೆಯಲಿರುವ ಆಯೋಗದ ಸಭೆಯಲ್ಲಿ ಫೆಲೊಗಳ ಹೆಸರನ್ನು ಘೋಷಿಸಲಾಗುವುದು. ಈ ಮಾದರಿಯ ಪ್ರಯತ್ನ ರಾಜ್ಯದಲ್ಲಿ ನಡೆಯುತ್ತಿರುವುದು ಇದೇ ಮೊದಲು. ಹಿಂದೆ ಗುಜರಾತ್ನಲ್ಲಿ ಮತ್ತು ವಿದೇಶಾಂಗ ಇಲಾಖೆಯಲ್ಲಿ ಈ ಮಾದರಿಯ ಪ್ರಯತ್ನಗಳು ನಡೆದಿದ್ದವು~ ಎಂದು ಪ್ರೊ. ಶ್ರೀಧರ್ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.