ಮೈಸೂರು: ಭಾರತವು ವೈವಿಧ್ಯತೆಗಳ ದೇಶ. ಪ್ರತಿಯೊಂದು ಭಾಷೆ ಮತ್ತು ರಾಜ್ಯಗಳಲ್ಲಿರುವ ಜ್ಞಾನವನ್ನು ಪರಸ್ಪರ ಹಂಚಿಕೊಂಡಾಗ ಮಾತ್ರ ದೇಶದ ಸಮಗ್ರ ಪ್ರಗತಿ ಸಾಧ್ಯ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಹೇಳಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿವಿ ಆಶ್ರಯ ದಲ್ಲಿ ಭಾನುವಾರ ಆಯೋಜಿಸಲಾಗಿದ್ದ `ವಚನ ಸಾಹಿತ್ಯ ಮತ್ತು ಗುರುಗ್ರಂಥ ಸಾಹಿಬ್; ಒಂದು ತೌಲನಿಕ ಅಧ್ಯಯನ~ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿಮಾತನಾಡಿದರು.
`ಎಲ್ಲ ಧರ್ಮಗಳ ಸಂತರೂ ಮಾನವೀಯತೆಯ ನೆಲೆಗಟ್ಟಿನ ಮೇಲೆ ತತ್ವಗಳನ್ನು ನಿರೂಪಿಸಿದ್ದಾರೆ. ಗುರು ನಾನಕ್, ಬಸವಣ್ಣ, ಅಲ್ಲಮಪ್ರಭು ಮತ್ತಿತರ ಸಂತ, ಶರಣರಿಗೆ ಮನುಕುಲದ ನೆಮ್ಮದಿ ಮತ್ತು ಸಮಾ ನತೆಯೇ ದೊಡ್ಡ ಆಶಯವಾಗಿತ್ತು. ಭಾಷೆ ಬೇರೆ ಇರಬಹುದು. ಆದರೆ ಅವರೆಲ್ಲರ ಭಾವನೆಗಳು ಒಂದೇ ಆಗಿದ್ದವು~ ಎಂದು ಹೇಳಿದರು.
`ಬಸವಣ್ಣನವರು ಆರಂಭಿಸಿದ ಅನುಭವ ಮಂಟಪ ಕೇವಲ ಕಟ್ಟಡವಲ್ಲ. ಅದು ಜಗತ್ತಿನ ಪ್ರಥಮ ಮುಕ್ತ ವಿಶ್ವವಿದ್ಯಾಲಯ. ಜಾತಿ, ವರ್ಣ, ಧರ್ಮಗಳ ಸಮಾನತೆ ಸಾರಿದ ವಿಶ್ವವಿದ್ಯಾಲಯವದು. ಅಲ್ಲಿಯ ಶೂನ್ಯ ಸಿಂಹಾಸನದ ಪರಿಕಲ್ಪನೆಯೇ ಅತ್ಯದ್ಭುತ. ಪ್ರತಿಯೊಬ್ಬರೂ ಇನ್ನೊಬ್ಬ ವ್ಯಕ್ತಿಗಳ ಪರಂಪರೆಯನ್ನು ತಿಳಿದುಕೊಳ್ಳಬೇಕು~ ಎಂದು ಹೇಳಿದರು.
ಮುಖ್ಯ ಅತಿಥಿ, ಕನ್ನಡ ಸಲಹಾ ಮಂಡಳಿ ಸಂಚಾಲಕ ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿ, `ಆಧುನಿಕ ತಂತ್ರಜ್ಞಾನಗಳ ಸಹಾಯದಿಂದ ಪಂಜಾಬಿ ಸಾಹಿತ್ಯದ ಕಾವ್ಯ, ಕಥೆ, ಸಾಹಿತ್ಯಗಳನ್ನು ಕನ್ನಡಕ್ಕೆ ಮತ್ತು ಕನ್ನಡದ ಸಾಹಿತ್ಯ ಪಂಜಾಬಿಗೆ ಅನುವಾದ ಮಾಡುವ ಅಗತ್ಯವಿದೆ~ ಎಂದು ಅಭಿಪ್ರಾಯಪಟ್ಟರು.
`ನಮ್ಮ ಬಸವ, ದ.ರಾ. ಬೇಂದ್ರೆ, ಕುವೆಂಪು ಅವರ ಉತ್ಕೃಷ್ಟ ಕೃತಿಗಳು ಹಿಂದಿ , ಇಂಗ್ಲಿಷ್ ಅಥವಾ ಪಂಜಾಬಿ ಭಾಷೆಗಳ ಮೂಲಕ ಪಂಜಾಬಿಗಳಿಗೆ ಸಿಗಬೇಕು. ಈ ವಿಚಾರ ಸಂಕಿರಣದ ಮುಕ್ತಾಯದೊಂದಿಗೆ ಈ ರೂಢಿ ಆರಂಭವಾಗಬೇಕು. ಕರ್ನಾಟಕದ ್ಲಲಿರುವ ಬೀದರ್ ಪಂಜಾಬಿಗಳ ಶ್ರದ್ಧಾಕೇಂದ್ರ, ಕನ್ನಡಿಗರು ಮತ್ತು ಪಂಜಾಬಿಗಳು ಮೊದಲಿನಿಂದಲೂ ಅವಿನಾಭವದಿಂದ ಇದ್ದಾರೆ. ಇದರ ಪ್ರಯೋಜನ ಸಾಹಿತ್ಯ ಕ್ಷೇತ್ರಕ್ಕೆ ಆಗಬೇಕು~ ಎಂದು ಹೇಳಿದರು.
`ಬಸವಣ್ಣ ಪ್ರತಿಪಾದಿಸಿದ ಕಾಯಕವೇ ಕೈಲಾಸ, ದಾಸೋಹ ತತ್ವಗಳು ಪಂಜಾಬ್ ನೆಲದವರಿಗೂ ಗೊತ್ತಾಗಬೇಕು. ಗುರು ನಾನಕ್, ಗುರು ಗೋವಿಂದ ಸಿಂಗ್ ಅವರಂತಹ ಸಂತರ ಗುರುಬಾನಿಗಳು ನಮ್ಮ ಜನರಿಗೂ ತಿಳಿಯಬೇಕು~ ಎಂದು ಹೇಳಿದರು.
ಮುಖ್ಯ ಅತಿಥಿ ಪಂಜಾಬ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಸ್ಪಾಲ್ಸಿಂಗ್, `ಬೇರೆ ಬೇರೆ ಭಾಷಿ ಕರೊಂದಿಗೆ ಚರ್ಚೆಗಳನ್ನು ನಡೆಸುವುದೇ ಅವರಿಬ್ಬರಲ್ಲಿರುವ ಸಾಮ್ಯತೆಯನ್ನು ತಿಳಿದುಕೊಳ್ಳುವ ಸಲುವಾಗಿ. ಭಾಷೆ, ಆಚಾರ, ವಿಚಾರ ಬೇರೆಯಾದರೂ ಒಬ್ಬರನ್ನೊಬ್ಬರು ಅರಿಯುವುದೇ ಮೂಲ ಉದ್ದೇಶವಾಗಿರುತ್ತದೆ~ ಎಂದು ಹೇಳಿದರು.
`ಕನ್ನಡದಲ್ಲಿ ವಚನ ಸಾಹಿತ್ಯವಿದೆ. ಅದೇ ರೀತಿ ಪಂಜಾಬಿನಲ್ಲಿ ಬಾನಿ ಸಾಹಿತ್ಯವಿದೆ. ನಮ್ಮ ಗುರುಗಳು, ಸಂತರು, ಧರ್ಮವನ್ನು ರಕ್ಷಿಸಲು ಮತ್ತು ಮಾನವೀಯತೆ ಶ್ರೇಷ್ಠ ಎಂದು ಪ್ರತಿಪಾದಿಸಿದರು. ಅದೇ ಕೆಲಸವನ್ನು ಬಸವಣ್ಣ, ಅಲ್ಲಮಪ್ರಭುಗಳು ಇಲ್ಲಿ ಮಾಡಿದ ಮಹಾಪುರುಷರು ಈ ಎರಡೂ ಸಾಹಿತ್ಯದ ಕುರಿತು ಹೆಚ್ಚಿನ ಕೆಲಸವಾಗಬೇಕು~ ಎಂದು ಅಭಿಪ್ರಾಯಪಟ್ಟರು.
ಪಂಜಾಬಿ ಸಲಹಾ ಮಂಡಳಿಯ ಸಂಚಾಲಕ ದೀಪಕ್ ಮನಮೋಹನಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮ ವಿಶೇಷಾಧಿಕಾರಿ ಜೆ. ಪೊನ್ನುದುರೈ ಸ್ವಾಗತಿಸಿದರು. ಕರಾಮುವಿ ನಿರ್ದೇಶಕ ಡಾ. ಎ. ರಂಗಸ್ವಾಮಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.