ಸರ್ಕಾರಿ ಪದವಿ ಕಾಲೇಜುಗಳ 2,900ಕ್ಕೂ ಹೆಚ್ಚು ಹುದ್ದೆಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಳ್ಳುವ ನಿರ್ಧಾರವನ್ನು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ಪ್ರಕಟಿಸಿದ್ದಾರೆ. ಈ ನಿರ್ಧಾರ ಅತ್ಯಂತ ಸ್ವಾಗತಾರ್ಹ. ಈ ನಿರ್ಧಾರದ ಮೂಲಕ, ಅಧ್ಯಾಪಕರ ನೇಮಕಾತಿ ಸಂದರ್ಭದಲ್ಲಿ ಎದುರಾಗುವ ಭ್ರಷ್ಟಾಚಾರದ ಜೊತೆಜೊತೆಗೆ ವಿಶ್ವವಿದ್ಯಾಲಯಗಳ ಅಂಕಗಳ ತರತಮಗಳ ರಾಜಕಾರಣಕ್ಕೂ ಕೊನೆ ಹೇಳಬಹುದಾಗಿದೆ.
ಅದೇ ವೇಳೆಗೆ, ಈ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಕೇವಲ ಯಾಂತ್ರಿಕ ನೆನಪಿನ ಆಧಾರದಲ್ಲಿ ಉತ್ತರಿಸಬಹುದಾದ ಒಂದು ಅಂಕದ ಪ್ರಶ್ನೆಗಳನ್ನು ಮಾತ್ರ ಒಳಗೊಳ್ಳದೆ, ವಿದ್ಯಾರ್ಥಿಗಳು ಆಯಾ ವಿಷಯದಲ್ಲಿ ಗಳಿಸಿರುವ ಜ್ಞಾನದ ನಿಜವಾದ ಪರೀಕ್ಷೆಯಾಗುವಂತಾಗಬೇಕು.
ಈ ಪರೀಕ್ಷೆ ಸಾಮಾಜಿಕ ನ್ಯಾಯದ ಖಚಿತ ಅಳತೆಗೋಲನ್ನು ಒಳಗೊಂಡು ಪ್ರತಿಭೆಯನ್ನು ಗುರುತಿಸುವ ದಿಕ್ಕಿನಲ್ಲಿ ಪಾರದರ್ಶಕವಾಗಿ ನಡೆದರೆ, ಎಲ್ಲ ಜಾತಿ, ವರ್ಗಗಳ ನಿಜವಾದ ಪ್ರತಿಭಾವಂತರಿಗೆ ನ್ಯಾಯ ದೊರಕುತ್ತದೆ.