ಜ್ಞಾನಪೀಠ ಪುರಸ್ಕೃತ ಕಂಬಾರರ ಸಾಧನೆ, ಕೊಡುಗೆ, ಕಾಣ್ಕೆಗಳನ್ನು ಅರ್ಥಮಾಡಿಕೊಂಡು ಕೊಂಡಾಡಬೇಕಾದ್ದು ಈಗಿನ ವಿವೇಕ. ಅದು ಬಿಟ್ಟು ಪ್ರಶಸ್ತಿ ಗಿಟ್ಟದ ಯಾರದೋ ಹೆಸರು ಹೇಳಿ ಅವರ ಜಾತಿಯ ಮೇಲೆ ಹರಿಹಾಯುವುದು ಯಾವ ತರ್ಕ?
ನಿಡುಮಾಮಿಡಿಯವರು, ಎಸ್.ಎಲ್.ಭೈರಪ್ಪನವರಿಗೆ ಮರಣೋತ್ತರ ಜ್ಞಾನಪೀಠ ಪ್ರಶಸ್ತಿ ಆಶಿರ್ವದಿಸಿರುವುದರಲ್ಲಿ, ಪ್ರಶಸ್ತಿಗಿಂತ ಹೆಚ್ಚಾಗಿ ಮರಣದ ಹಾರೈಕೆಯೇ ಕಂಡುಬರುತ್ತದೆ! ಬ್ರಾಹ್ಮಣನಾಗಲಿ, ಶೂದ್ರನಾಗಲಿ ವ್ಯಕ್ತಿಯೊಬ್ಬ `ಸಾಯಲಿ~ ಎಂದು ಆಸೆ ಪಡುವುದು ಮನುಷ್ಯನಾಗಿ ಹುಟ್ಟಿದವನ ಲಕ್ಷಣವಾದೀತೇ?
ಜ್ಞಾನಪೀಠವಾಗಲಿ, ಮತ್ತೊಂದಾಗಲಿ, ಯಾವ ಪ್ರಸಸ್ತಿಯೂ ಇಂದು ತನ್ನ ಮರ್ಯಾದೆ ಉಳಿಸಿಕೊಂಡಿಲ್ಲ. ನೈಜ ಮಾನದಂಡದಿಂದಲೋ, ಕಾಕತಾಳೀಯವಾಗಿಯೋ, ಈ ಬಾರಿ ಕಂಬಾರರಿಗೆ ಸಂದ `ಜ್ಞಾನಪೀಠ~ ಸಾರ್ಥಕವಾಗಿರುವುದರಲ್ಲಿ ಎರಡು ಮಾತಿಲ್ಲ. ಉಳಿದಂತೆ, `ಲಾಬಿಕೋರ~ರಿಗೆ ಯಾವ ಪ್ರಶಸ್ತಿ ತಾನೇ ಬಂದರೆಷ್ಟು? ಬಿಟ್ಟರೆಷ್ಟು?
ಚಿನ್ನ-ಬೆಳ್ಳಿ ಅಂಚಿನ ಜರತಾರೀ ಪಂಚೆ ಘನ ವಿದ್ವಾಂಸರ ಪಾಡಿತ್ಯದ ಸಂಕೇತವಾಗಿದ್ದ ಕಾಲವೊಂದಿತ್ತು; ಈಗ ಹದಿನಾರು ಮೊಳದ ಆರು ಬೆಟ್ಟಗಲ ಪ್ಲಾಸ್ಟಿಕ್ ಜರಿಯ ಪಂಚೆಗಳು ಪೇಟೆಯಲ್ಲಿ ಇಟ್ಟಾಡುತ್ತವೆ! ಪಿ. ಎಚ್ಡಿ ಪದವಿ, ವಿಷಯವೊಂದರಲ್ಲಿನ ಮಹೋಪಾಧ್ಯಾಯರಿಗೆ ಮಾತ್ರಾ ಸೀಮಿತವಾಗಿದ್ದಿತ್ತು; ಈಗಲಾದರೊ ಗಲ್ಲಿಗಿಬ್ಬರು ಪಿ.ಎಚ್ಡಿ ಡಾಕ್ಟರುಗಳು ಸಿಗುತ್ತಾರೆ!
ಪ್ರಜಾಸತ್ತೆಗೆ ಅತ್ಯಗತ್ಯವಾದ ಸಾಮಾಜಿಕ ಧ್ಯೇಯಾದರ್ಶದ ಮಾದರಿಗಳು, ಈ ದಬ್ಬಾಳಿಕೆಯಲ್ಲಿ ಮುಚ್ಚಿಹೋಗುತ್ತಿರುವುದು ವಿಷಾದದ ವಿಷಯ. ಚಿಂತನಶೀಲರು (ಬ್ರಾಹ್ಮಣ-ಅಬ್ರಾಹ್ಮಣ ಭೇದವಿಲ್ಲದೆ) ಈ ಬಗ್ಗೆ ಆಲೋಚಿಸಬೇಕು.