ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜ್ಞಾನಿಗಳ ಜ್ಞಾನಕ್ಕೆ ಪ್ರಸನ್ನನಾಗುವ ಭಗವಂತ'

Last Updated 6 ಡಿಸೆಂಬರ್ 2012, 6:36 IST
ಅಕ್ಷರ ಗಾತ್ರ

ಧಾರವಾಡ: `ಭಗವಂತ ಜ್ಞಾನಿಗಳ ಜ್ಞಾನಕ್ಕೆ ಪ್ರಸನ್ನನಾಗಿ ವೈಕುಂಠದ ಬಾಗಿಲನ್ನೇ ತೆರೆಯುತ್ತಾನೆ. ನಾವು ದೇವರ ಹತ್ತಿರ ಹೋಗಬೆಕಾದದ್ದು ಧರ್ಮ. ನಾವು ಎಷ್ಟರ ಮಟ್ಟಿಗೆ ಪರಿಪೂರ್ಣವಾಗಿ ಆತ್ಮಾರ್ಪಣ, ಸಮರ್ಪಣ ಬುದ್ಧಿಯಿಂದ ಅವನ ಹತ್ತಿರ ಹೋಗುತ್ತೇವೆಯೋ ಅಷ್ಟು ಪ್ರೀತಿ, ಸಂತೋಷದಿಂದ ಆತ ನಮ್ಮನ್ನು ಹತ್ತಿರ ಬರಮಾಡಿಕೊಳ್ಳಬೇಕು ಎಂದು ಉತ್ತರಾದಿಮಠದ ಸತ್ಯಾತ್ಮತೀರ್ಥ ಸ್ವಾಮೀಜಿ ನುಡಿದರು.

ಸತ್ಯಪ್ರಮೋದತೀರ್ಥರ 15ನೇಯ ಪಾದುಕಾ ಮಹಾಸಮಾರಾಧನೆಯ ಅಂಗವಾಗಿ ಬುಧವಾರ ನಗರದ ರಂಗಾಯಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿ, `ಯತಿಗಳು, ಜ್ಞಾನಿಗಳು ಹೋದ ದಾರಿಯಲ್ಲಿ ನಮಗೆ ಹೋಗಲು ಸಾಧ್ಯವಾಗದೇ ಹೋದರೂ ನಮ್ಮ ಸತ್ಪ್ರಯತ್ನದಿಂದ ಈ ಜನರ ಹಾದಿಯಲ್ಲಿ ನಡೆಯಲು ಪ್ರಯತ್ನಿಸಬೇಕು.

ಸತ್ಯಸಂಧತೀರ್ಥ ಶ್ರೀಪಾದಂಗಳವರ ಜೀವನವನ್ನು ನಾವು ಅವಲೋಕಿಸಬೇಕು. ಬಹಳಷ್ಟು ವರ್ಷಗಳ ಕಾಲ ಈ ಯತಿಗಳು ಹೊಳೆನರಸಿಪುರದಲ್ಲಿ ತಪಸ್ಸು, ಪಾಠ, ಪ್ರವಚನ ಮಾಡಿಕೊಂಡು ಇದ್ದರು. ಒಂದು ದಿನ ಅಲ್ಲಿಯ ದೇವಸ್ಥಾನದ ಬಾಗಿಲು ಹಾಕಿದ್ದಾಗ ಸ್ವತಃ ನರಸಿಂಹದೇವರು ಬಾಗಿಲು ತೆರೆದು ಲಕ್ಷ್ಮೀನರಸಿಂಹದೇವರ ದರ್ಶನ ಅವಕಾಶ ನೀಡಿದರಂತೆ.

ಈ ಎಲ್ಲ ಭಕ್ತರನ್ನು ದೇವರು ಬರಮಾಡಿಕೊಂಡರು. ಸ್ವತಃ ದೇವರು ಬರಮಾಡಿಕೊಳ್ಳುವಷ್ಟು ತಪಸ್ಸು, ಜ್ಞಾನ ಮತ್ತು ಸಿದ್ಧಿ ಇವರದಾಗಿತ್ತು. ನಾನೇ ವಶಿಷ್ಠ, ವಿಶ್ವಾಮಿತ್ರನಾಗಬೇಕು ಎಂಬುವ ಭಯಕ್ಕೆ ಪೂಜೆ ಮಾಡುವದು ಸರಿಯಲ್ಲ. ಬಿಟ್ಟರೆ ಏನಾದರೂ ಆಗಬಹುದು ಎಂಬ ಕಾರಣಕ್ಕೆ ಪೂಜೆ ಮಾಡುವದಲ್ಲ. ನಾವು ಹತ್ತಾರು ಬಾರಿ ಹತ್ತಿರ ಹೋದರು ಭಗವಂತ ನಮ್ಮನ್ನು ಬರಮಾಡಿಕೊಳ್ಳುವದಿಲ್ಲ. ಮನೆಯಲ್ಲಿ ಮಾಡುವ ನಿತ್ಯದ ಕಾರ್ಯವನ್ನೇ ಭಕ್ತಿಂದ ಮಾಡಬೇಕು' ಎಂದರು.

`ಭಗವಂತ ತಂದೆ-ತಾಯಿಗಳಲ್ಲಿ ಸನ್ನಿಹಿತನಾಗಿರುತ್ತಾನೆ ಎಂಬುದನ್ನು ಮರೆಯಬಾರದು. ಈ ದೇಹ ಸಾಧನ ಶರೀರ. ಸುಮ್ಮನೆ ತಂದೆ-ತಾಯಿಗಳಿಗೆ ಭಕ್ತಿಂದ ನಮಸ್ಕಾರ ಮಾಡಿದರೆ ಸಾಕು, ಕೋಟಿ ಪುಣ್ಯ ಬರುತ್ತದೆ' ಎಂದು ಹೇಳಿದರು.

ವಿಶ್ವ ಮಧ್ವ ಪಾರಾಯಣ ಮಂಡಳಿ ವತಿಯಿಂದ ವಿದ್ಯಾ ಪಾಟೀಲರ ನೇತೃತ್ವದಲ್ಲಿ ಕೋಲಾಟ ನಡೆಯಿತು. ನಂತರ ರಾಧಿಕಾ ಕಾಖಂಡಿಕಿ ದಾಸವಾಣಿಯನ್ನು ಪ್ರಸ್ತುತಪಡಿಸಿದರು. ತಬಲಾದಲ್ಲಿ ಶ್ರೀಪಾದ ಮುಳಗುಂದ, ಹಾರ್ಮೋನಿಯಂನಲ್ಲಿ ಗೋಪಾಲ ಕುಲಕರ್ಣಿ, ತಾಳದಲ್ಲಿ ದಾಮೋದರ ಪಾಮಡಿ ಸಾಥ್ ನೀಡಿದರು.

ಪಂ.ವೇಣುಗೋಪಾಲಚಾರ್ಯ ಗುಡಿ, ಮಹಾಭಾರತ ತಾತ್ಪರ್ಯ ನಿರ್ಣಯ ಕುರಿತು ಪ್ರವಚನ ಮಾಡಿದರು. ಇದು ಹೆಸರಿಗೆ ಮಾತ್ರ ತಾತ್ಪರ್ಯ ನಿರ್ಣಯ, ಆದರೆ 18 ಪುರಾಣಗಳನ್ನು ನಿರ್ಣಯ ಮಾಡಿದ ಗ್ರಂಥ. ತಾವೇ ಪ್ರಶ್ನೆ ಹಾಕಿಕೊಂಡು ಆಚಾರ್ಯರು ಎಲ್ಲ ಪ್ರಶ್ನೆಗಳಿಗೆ ಖಚಿತ ಉತ್ತರ ನೀಡಿದ್ದಾರೆ ಎಂದು ಪ್ರವಚನದಲ್ಲಿ ವಿವರಿಸಿದರು. ಶೂರ್ಪಾಲಿಯ ಸದಾನಂದ ಮಠದ ಜ್ಞಾನಾತ್ಮ ತೀರ್ಥರು ಇದ್ದರು. ಪಂ. ಭೀಮಸೇನಾಚಾರ್ಯ ಮಳಗಿ ಮತ್ತು ಪಂ.ಶ್ರೀಶಾಚಾರ್ಯ ನಾಮಾವಳಿ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT