ರಾಳೆಗಣ ಸಿದ್ಧಿ(ಪಿಟಿಐ): ಮಹಾರಾಷ್ಟ್ರ ಸರ್ಕಾರ ತಮಗೆ ನೀಡಿದ್ದ `ಝೆಡ್~ ಶ್ರೇಣಿಯ ಭದ್ರತೆಯನ್ನು ಗಾಂಧಿವಾದಿ ಅಣ್ಣಾ ಹಜಾರೆ ಒಲ್ಲೆ ಎಂದಿದ್ದಾರೆ.
`ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಭಗತ್ ಸಿಂಗ್, ರಾಜಗುರು ಮತ್ತಿತರರಿಗೆ ಯಾವ ಭದ್ರತೆ ಇತ್ತು? ಈಗ ನನಗಾದರೂ ಏಕೆ ವಿಶೇಷ ಭದ್ರತೆ ಬೇಕು; ಅಗತ್ಯವಿಲ್ಲ ಎಂದು ಅಣ್ಣಾ ಹಜಾರೆ ತಮ್ಮ ಸ್ವಗ್ರಾಮ ರಾಳೆಗಣ ಸಿದ್ಧಿಯಲ್ಲಿ ಭಾನುವಾರ ಸುದ್ದಿಗಾರರಿಗೆ ಹೇಳಿದರು.
`ನನಗೆ ಜನರಿಂದ ಯಾವುದೇ ಜೀವ ಭಯವಿಲ್ಲ. ಭದ್ರತೆ ನೀಡುವುದರಿಂದ ಅನಗತ್ಯವಾಗಿ ರಾಷ್ಟ್ರದ ಮೇಲೆ ಆರ್ಥಿಕ ಹೊರೆ ಬೀಳುತ್ತದೆ~ ಎಂದರು.
`ತಪ್ಪು ಸಂದೇಶ ಬೇಡ~
ರಾಳೆಗಣ ಸಿದ್ಧಿ(ಪಿಟಿಐ): ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ತಮ್ಮ ಜೊತೆಗಿದ್ದವರಲ್ಲಿ ಕೆಲವರಿಗೆ ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ. ಇದರಿಂದ ಅಶಾಂತಿ ಉಂಟಾಗಬಹುದು ಎಂದು ಅಣ್ಣಾ ಹಜಾರೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಂಸದರು ಹಕ್ಕು ಚ್ಯುತಿಯಡಿ ಮತ್ತು ಆದಾಯ ತೆರಿಗೆ ಇಲಾಖೆಯುವರು ನೋಟಿಸ್ ನೀಡಿ ಕಿರುಕುಳ ನೀಡ ತೊಡಗಿದ್ದಾರೆ. ಸರ್ಕಾರ ತನ್ನ ಪ್ರತೀಕಾರದ ಬುದ್ಧಿಯನ್ನು ಈ ಮೂಲಕ ತೋರಿಸಿ ತಪ್ಪು ಸಂದೇಶ ರವಾನಿಸುತ್ತಿದೆ~ ಎಂದು ಅವರು ಸರ್ಕಾರದ ಕಿವಿ ಹಿಂಡಿದ್ದಾರೆ.
`ಅರವಿಂದ ಕೇಜ್ರಿವಾಲ್ ಸರ್ಕಾರಿ ನೌಕರಿಯನ್ನು ಬಿಟ್ಟ ತರುವಾಯ ಮತ್ತು ಆಂದೋಲನಗಳಲ್ಲಿ ಸಕ್ರಿಯರಾದ ನಂತರ ಆದಾಯ ಕರ ಕಟ್ಟಿಲ್ಲ ಎಂದು ನೋಟಿಸ್ ನೀಡಿರುವುದರ ಹಿಂದೆ ಇರುವ ದುರುದ್ದೇಶ ಜನರಿಗೆ ಅರ್ಥವಾಗುತ್ತದೆ. ಇದರಿಂದ ಅಶಾಂತಿ ಉಂಟಾದೀತು ಎಚ್ಚರ~ ಎಂದು ಹಜಾರೆ ಹೇಳಿದ್ದಾರೆ.
`ಸರ್ಕಾರ ಇಂತಹ ಸೇಡಿನ ಕ್ರಮವನ್ನು ಬಿಟ್ಟು ದೇಶವನ್ನು ಸಶಕ್ತ ರಾಷ್ಟ್ರವನ್ನಾಗಿಸಲು ಎಲ್ಲರನ್ನು ಒಗ್ಗೂಡಿಸಲಿ~ ಎಂದು ಎಂದು ವಿನಂತಿಸಿಕೊಂಡಿದ್ದಾರೆ.
ಸಂಸದರನ್ನು ಹೀಯಾಳಿಸಿ ಭಾಷಣ ಮಾಡಿದ ಆರೋಪಕ್ಕೆ ಕಿರಣ್ ಬೇಡಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿರುವ ಸಂಸತ್ ಸದಸ್ಯರು, ಈಗ ಅಣ್ಣಾ ತಂಡದ ಪ್ರಶಾಂತ್ ಭೂಷಣ್, ಅರವಿಂದ ಕೇಜ್ರಿವಾಲ್ ಅವರಿಗೂ ಇಂತಹದ್ದೇ ನೋಟಿಸ್ ನೀಡಿದ್ದಾರೆ.