ದಾವಣಗೆರೆ: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸುವ ಮೂಲಕ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸಂಸತ್ ಸದಸ್ಯ ಹಾಗೂ ಬಿಎಸ್ಸೆನ್ನೆಲ್ ಸಲಹಾ ಸಮಿತಿ ಉಪಾಧ್ಯಕ್ಷ ಜಿ.ಎಂ. ಸಿದ್ದೇಶ್ವರ ಸೂಚನೆ ನೀಡಿದರು.
ನಗರದ ಬಿಎಸ್ಸೆನ್ನೆಲ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಟೆಲಿಕಾಂ ಸಲಹಾ ಸಮಿತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಮೊಬೈಲ್ ಸೇವೆ ಮತ್ತು ಟವರ್ ಸಮಸ್ಯೆ ಬಗ್ಗೆ ಗ್ರಾಹಕರಿಂದ ದೂರು ಕೇಳಿಬರುತ್ತಿವೆ. ಗ್ರಾಹಕರು ಹೇಳುವಂತೆ, ಅನುಭವಕ್ಕೆ ಬಂದಿರುವಂತೆ ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಕಳಪೆಯಾಗಿದೆ. ಗುಣಮಟ್ಟದ ಸೇವೆ ನೀಡಿದರೆ ಮಾತ್ರ ಆದಾಯ ನಿರೀಕ್ಷೆ ಸಾಧ್ಯ ಎಂದರು.
ನಲ್ಕುಂದ ಗ್ರಾಮದಲ್ಲಿ ಟವರ್ ನಿರ್ಮಾಣಕ್ಕೆ ಸ್ಥಳದ ಕೊರತೆ ಕಂಡುಬಂದಿದೆ. ಅಲ್ಲದೇ, ಗ್ರಾಮಸ್ಥರಿಂದಲೂ ಆಕ್ಷೇಪಣೆ ಬಂದಿದೆ. ಗ್ರಾಮಸ್ಥರೊಂದಿಗೆ ಚರ್ಚೆ ನಡೆಸುವ ಮೂಲಕ ಸಮಸ್ಯೆ ನಿವಾರಣೆ ಮಾಡಲಾಗುವುದು. ಅಲ್ಲದೇ ಚನ್ನಗಿರಿ, ಹೊನ್ನಾಳಿ, ಹರಪನಹಳ್ಳಿ ತಾಲ್ಲೂಕುಗಳು ಚಿತ್ರದುರ್ಗ ಟೆಲಿಕಾಂ ವಲಯ ವ್ಯಾಪ್ತಿಗೆ ಒಳಪಟ್ಟಿಲ್ಲ. ನಮ್ಮ ಜಿಲ್ಲೆಯ ಈ ತಾಲ್ಲೂಕುಗಳನ್ನು ವಲಯ ವ್ಯಾಪ್ತಿಗೆ ಸೇರಿಸಿದರೆ ಉತ್ತಮ ಗುಣಮಟ್ಟದ ಸೇವೆಯನ್ನು ಅಲ್ಲಿಯೂ ಒದಗಿಸಬಹುದು. ಟೆಲಿಕಾಂ ತನಿಖಾ ತಂಡ ಮತ್ತಷ್ಟೂ ಚುರುಕಾದರೆ ಗುಣಮಟ್ಟ ಸೇವೆ ಸುಧಾರಣೆಯಾಗಲಿದೆ ಎಂದರು.
ಟೆಲಿಕಾಂ ಪ್ರಧಾನ ವ್ಯವಸ್ಥಾಪಕ ವೈ. ಶಿವಶಂಕರ್ ರೆಡ್ಡಿ, ಟೆಲಿಕಾಂ ಉಪ ಪ್ರಧಾನ ವ್ಯವಸ್ಥಾಪಕ ಎಂ.ಒ. ಪ್ರಶಾಂತ್, ಸಹಾಯಕ ವ್ಯವಸ್ಥಾಪಕ ಕದರಮಂಡಲಗಿ, ಸಲಹಾ ಸಮಿತಿಯ ಸದಸ್ಯರಾದ ಕುಮಾರ್ ಎಂ. ಘಾಟ್ಗೆ, ಕೆ.ಸಿ.ಎನ್. ರಾಜು, ಎಂ.ವೈ. ಮಹೇಂದ್ರ, ಸಿದ್ದಪ್ಪ, ಜಿ. ಶಶಿಕಲಾ ಉಪಸ್ಥಿತರಿದ್ದರು.