ನವದೆಹಲಿ (ಪಿಟಿಐ): ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಟಿ-3 ಟರ್ಮಿನಲ್ನಲ್ಲಿ ನೂತನವಾಗಿ ನಿರ್ಮಿಸಿದ್ದ ಭದ್ರತಾ ಉದ್ದೇಶದ ಕಂಪ್ಯೂಟರ್ಗಳ ಮೇಲೆ ವೈರಸ್ ದಾಳಿ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿದೆ.
ವೈರಸ್ ದಾಳಿಯಿಂದಾಗಿ ಈ ವ್ಯವಸ್ಥೆಯ ಕಾರ್ಯಾಚರಣೆಯನ್ನು ಸುಮಾರು ಮೂರು ತಿಂಗಳಿನಿಂದ ನಿಲ್ಲಿಸಲಾಗಿದೆ.ವಿಮಾನಗಳ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ನಿಯಂತ್ರಿಸುವ ಜಾಲದ (ಕಾಮನ್ ಯೂಸ್ ಪ್ಯಾಸೆಂಜರ್ಸ್ ಪ್ರೋಸೆಸಿಂಗ್ ಸಿಸ್ಟಂ) ಮೇಲೆ ದಾಳಿ ನಡೆಸುವ ದುರುದ್ದೇಶಪೂರಿತ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶಂಕಿಸಿರುವುದಾಗಿ ಸಿಬಿಐನ ಮೂಲಗಳು ಹೇಳಿವೆ.
ಇದು ತಾಂತ್ರಿಕ ತೊಂದರೆ ಅಲ್ಲ. ಬದಲು ಸೈಬರ್ ದಾಳಿ ಇರಬಹುದು ಎಂದು ತನಿಖೆ ನಡೆಸುತ್ತಿರುವ ಸಿಬಿಐ ಶಂಕಿಸಿದೆ. ತನಿಖೆಯು ಪ್ರಾಥಮಿಕ ಹಂತದಲ್ಲಿದ್ದು ಸಂಕೇತಗಳನ್ನು ಒಳಗೊಂಡ ವ್ಯವಸ್ಥೆಯ ಮೂಲವನ್ನು ಇನ್ನೂ ಗುರುತಿಸಬೇಕಿದೆ ಎಂದು ಮೂಲಗಳು ಹೇಳಿವೆ.
ಸೈಬರ್ ದಾಳಿಯ ಯತ್ನದಿಂದಾಗಿ ಜೂನ್ 29ರಂದು ಟಿ-3ರಲ್ಲಿನ ಎಲ್ಲಾ ಕೌಂಟರ್ಗಳನ್ನು ಮುಚ್ಚಲಾಗಿತ್ತು.
ವಿಮಾನಗಳು ಆಗಮಿಸುವ ಮತ್ತು ಹೊರಡುವ ವೇಳೆಯನ್ನು ತಿಳಿಸುವ ವ್ಯವಸ್ಥೆಯನ್ನು ಮಾತ್ರ 12 ಗಂಟೆಗಳ ನಂತರ ಸರಿಪಡಿಸಲಾಗಿತ್ತು.ಈ ಬಗ್ಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಟಿ ಕಾಯಿದೆಯಡಿ ಸಿಬಿಐ ಪ್ರಕರಣ ದಾಖಲಿಸಿದೆ.