ಬೆಂಗಳೂರು: ಅಮೋಘ್ ಅಥಣಿ ಹಾಗೂ ಎಂ.ವಿ. ಸ್ಫೂರ್ತಿ ಇಲ್ಲಿ ನಡೆಯುತ್ತಿರುವ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಸಬ್ ಜೂನಿಯರ್ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.
ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿ ಹಾಲ್ನಲ್ಲಿ ಭಾನುವಾರ ನಡೆದ ಬಾಲಕರ ವಿಭಾಗದ ಫೈನಲ್ನಲ್ಲಿ ಎಂಟಿಟಿ ಅಕಾಡೆಮಿಯ ಅಮೋಘ್ 11-9, 7-11, 11-2, 11-7 ರಲ್ಲಿ ಹೊರೈಜನ್ ಕ್ಲಬ್ನ ಜಿ.ಎಸ್. ಸಂಕೇತ್ ವಿರುದ್ಧ ಗೆಲುವು ಪಡೆದರು.
ಸೆಮಿಫೈನಲ್ ಪಂದ್ಯಗಳಲ್ಲಿ ಅಮೋಘ್ 11-8, 11-9, 11-9 ರಲ್ಲಿ ಬಿಎನ್ಎಂನ ಗೌರವ್ ಪುರಿ ವಿರುದ್ಧ ಗೆಲುವು ಪಡೆದಿದ್ದರೆ, ಸಂಕೇತ್ 5-11, 11-7, 9-11, 11-5, 11-5 ರಲ್ಲಿ ಸ್ಟಾರ್ ಅಕಾಡೆಮಿಯ ಸುಚಿತ್ ಪಿ ಶೆಣೈ ಅವರನ್ನು ಮಣಿಸಿದ್ದರು.
ಬಾಲಕಿಯರ ವಿಭಾಗದ ಫೈನಲ್ನಲ್ಲಿ ಪಿಟಿಟಿಎನ ಸ್ಫೂರ್ತಿ 11-9, 11-7, 11-13, 5-11, 11-3 ರಲ್ಲಿ ಸ್ಟಾರ್ ಅಕಾಡೆಮಿಯ ಎನ್. ಐಶ್ವರ್ಯ ವಿರುದ್ಧ ಜಯ ಸಾಧಿಸಿದರು.
ಮೊದಲ ಎರಡು ಗೇಮ್ಗಳನ್ನು ಗೆದ್ದುಕೊಂಡ ಸ್ಫೂರ್ತಿ ಮುಂದಿನ ಎರಡು ಗೇಮ್ಗಳಲ್ಲಿ ಸೋಲು ಅನುಭವಿಸಿದರು. ಆದರೆ ನಿರ್ಣಾಯಕ ಗೇಮ್ನಲ್ಲಿ ಸೊಗಸಾದ ಪ್ರದರ್ಶನ ನೀಡಿ ನೆರದವರ ಮನ ಗೆದ್ದರು.
ನಾಲ್ಕರಘಟ್ಟದ ಪಂದ್ಯಗಳಲ್ಲಿ ಸ್ಫೂರ್ತಿ 11-7, 11-7, 11-7 ರಲ್ಲಿ ಹೊರೈಜನ್ನ ಮೇದಿನಿ ಆರ್ ಭಟ್ ಮೇಲೂ, ಐಶ್ವರ್ಯ 11-8, 3-11, 11-9, 11-8 ರಲ್ಲಿ ಓಂ ಟಿಟಿಐನ ಪ್ರಿಯಾ ರಾವ್ ಎದುರೂ ಜಯ ಸಾಧಿಸಿದ್ದರು.