ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಸಗಾಯ್ರಾಜ್ ಹಾಗೂ ಬೆಳಗಾವಿಯ ಮೈತ್ರೇಯಿ ಬೇಲೂರು ಭಾನುವಾರ ಇಲ್ಲಿಯ ಡಾ.ಕೆ.ಎಸ್. ಶರ್ಮಾ ಸಭಾಗೃಹದಲ್ಲಿ ಮುಕ್ತಾಯವಾದ ಸಂಜಯ್ ಪೈ ಸ್ಮಾರಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಶನಿವಾರ ಜೂನಿಯರ್ ಬಾಲಕಿಯರು ಹಾಗೂ ಯೂತ್ ವಿಭಾಗದ ಪ್ರಶಸ್ತಿಯನ್ನು ಗೆದ್ದಿದ್ದ ಮೈತ್ರೇಯಿ, ಮಹಿಳಾ ವಿಭಾಗದಲ್ಲೂ ಚಾಂಪಿಯನ್ ಆಗುವ ಮೂಲಕ ಪ್ರಶಸ್ತಿ `ಟ್ರಿಬಲ್~ ಸಾಧನೆ ಮಾಡಿದರು.
ಹುಬ್ಬಳ್ಳಿ ಟೇಬಲ್ ಟೆನಿಸ್ ಸಂಸ್ಥೆ ಹಾಗೂ ಮಹಾರಾಷ್ಟ್ರ ಮಂಡಲ ಜಂಟಿಯಾಗಿ ಆಯೋಜಿಸಿದ್ದ ಟೂರ್ನಿಯ ಪುರುಷರ ವಿಭಾಗದ ಫೈನಲ್ನಲ್ಲಿ ನಾಲ್ಕನೇ ಶ್ರೇಯಾಂಕದ ಸಗಾಯ್ರಾಜ್ 6-11, 11-9, 13-11, 12-14, 11-6, 7-11, 11-4ರಿಂದ ಪ್ರಯಾಸಕರವಾಗಿ ಮೂರನೇ ಶ್ರೇಯಾಂಕದ ಆಟಗಾರ ಕೆನರಾ ಬ್ಯಾಂಕಿನ ಅನಿರ್ಬಾನ್ ತರಫ್ದಾರ್ ವಿರುದ್ಧ ಜಯ ಸಾಧಿಸಿದರು.
ಮಹಿಳೆಯರ ವಿಭಾಗದ ಫೈನಲ್ನಲ್ಲಿ ಮೈತ್ರೇಯಿ 11-9, 11-9, 11-5, 11-8ರಿಂದ ಜೆಟಿಟಿಎಯ ಆರ್. ರಕ್ಷಾ ವಿರುದ್ಧ ಜಯ ಸಾಧಿಸಿದರು. ಹಿರಿಯರ ವಿಭಾಗದಲ್ಲಿ ನೈರುತ್ಯ ರೈಲ್ವೆಯ ಪಿ.ಆರ್. ಅರುಣ್ 11-3, 11-3, 11-4ರಿಂದ ಬೆಂಗಳೂರಿನ ವೈ. ಗಂಗಾಧರ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡರು.
ತಂಡ ವಿಭಾಗದ ಫೈನಲ್ನಲ್ಲಿ ನೈರುತ್ಯ ರೈಲ್ವೆ 3-1ರಿಂದ ಬೆಂಗಳೂರಿನ ಬಿಎನ್ಎಂ ತಂಡವನ್ನು ಸೋಲಿಸಿತು. ಸೆಮಿ ಫೈನಲ್ ಪಂದ್ಯಗಳಲ್ಲಿ ನೈರುತ್ಯ ರೈಲ್ವೆ 3-0ಯಿಂದ ಕೆನರಾ ಯುನಿಯನ್ ತಂಡದ ಮೇಲೂ; ಬಿಎನ್ಎಂ 3-0ಯಿಂದ ಹೊರೈಜಾನ್ ಕ್ಲಬ್ ತಂಡದ ವಿರುದ್ಧವೂ ಜಯ ಸಾಧಿಸಿದವು.