ಧಾರವಾಡ: ಸೆಂಟ್ರಲ್ ರೈಲ್ವೆ ಇಲ್ಲಿ ನಡೆದಿರುವ ಅಖಿಲ ಭಾರತ ರೈಲ್ವೆ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ ತಂಡ ಸ್ಪರ್ಧೆಯಲ್ಲಿ ಶನಿವಾರ ಹಾಲಿ ಚಾಂಪಿಯನ್ ಆಗ್ನೇಯ ರೈಲ್ವೆಯನ್ನು 3-1ರ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಸೆಂಟ್ರಲ್ ರೈಲ್ವೆಯ ಓಂಕಾರ್ ಮೊದಲ ಪಂದ್ಯದಲ್ಲಿ 7-11, 11-8, 5-11, 8-11ರಿಂದ ಅನಿರ್ಬನ್ ನಂದಿ ಅವರ ಎದುರು ಪರಾಭವಗೊಂಡು ಆಘಾತ ಅನುಭವಿಸಿದರು.
ಈ ಆಘಾತದಿಂದ ಬಹುಬೇಗ ಚೇತರಿಸಿಕೊಂಡ ಸೆಂಟ್ರಲ್ ರೈಲ್ವೆ, ಉಳಿದ ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಪ್ರಶಸ್ತಿ ಮೇಲೆ ಹಿಡಿತ ಸಾಧಿಸಿತು. ಅಮನ್ ಬಗಲು 11-6, 11-8, 9-11, 11-7ರಿಂದ ಸೌಮ್ಯಜಿತ್ ಸರ್ಕಾರ್ ಅವರನ್ನು; ಮಾರ್ಥನ್ ಬೆನಿವಾಲ್ 11-6, 11-7, 11-9ರಿಂದ ಅಮಿತ್ ದಾಸ್ ಅವರನ್ನು; ಅಮನ್ ಬಗಲು 11-4, 8-11, 11-13, 14-12ರಿಂದ ಅನಿರ್ಬನ್ ನಂದಿ ಅವರನ್ನು ಸೋಲಿಸಿದರು.
ಮಹಿಳೆಯರ ವಿಭಾಗದಲ್ಲಿ ನಾರ್ತ್ ಫ್ರಾಂಟಿಯರ್, ಆಗ್ನೇಯ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ಕ್ರಮವಾಗಿ ಮೊದಲ, ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದರು. ಹಿರಿಯರ ವಿಭಾಗದಲ್ಲಿ ಆಗ್ನೇಯ ರೈಲ್ವೆಯ ನೂಪುರ ಸಂತ್ರಾ 8-11, 11-1, 11-3, 11-3ರಿಂದ ನೈಋತ್ಯ ರೈಲ್ವೆಯ ಬೋನಾ ಥಾಮಸ್ ಅವರ ವಿರುದ್ಧ ಜಯಿಸಿ ಪ್ರಶಸ್ತಿ ಗೆದ್ದುಕೊಂಡರು.