ಮುಂಡಗೋಡ (ಉ.ಕ.ಜಿಲ್ಲೆ): ಈಶಾನ್ಯ ರಾಜ್ಯಗಳಲ್ಲಿ ಜನಾಂಗೀಯ ದಾಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂಡಗೋಡ ತಾಲ್ಲೂಕಿನಲ್ಲಿರುವ ಟಿಬೆಟನ್ನರ ಕ್ಯಾಂಪ್ಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಅಲ್ಲಿಗೆ ಹೋಗುವ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ಒಟ್ಟು 9 ಕ್ಯಾಂಪ್ಗಳಿದ್ದು ಅಂದಾಜು 25ರಿಂದ 30 ಸಾವಿರ ಜನ ನಿರಾಶ್ರಿತರಿದ್ದಾರೆ. ಎಲ್ಲ ಕ್ಯಾಂಪ್ಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಮಣಿಪುರ ಮೂಲದ ಇಬ್ಬರ ಮೇಲೆ ದಾಳಿ ನಡೆದಿದೆ ಎನ್ನುವ ಸುದ್ದಿ ಹರಡಿರುವ ಹಿನ್ನೆಲೆಯಲ್ಲಿ ಲಾಮಾಗಳು ಹುಬ್ಬಳ್ಳಿಗೆ ಹೋಗುವುದನ್ನು ಕಡಿಮೆ ಮಾಡಿದ್ದಾರೆ.
ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ದಾಳಿಗೂ ಇಲ್ಲಿಯ ಟಿಬೆಟನ್ನರಿಗೂ ಯಾವುದೇ ಸಂಬಂಧವಿಲ್ಲ. ಲಾಮಾಗಳು ಪ್ರತಿನಿತ್ಯ ಹುಬ್ಬಳ್ಳಿ ಮಾರುಕಟ್ಟೆಗೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಹುಬ್ಬಳಿ-ಧಾರವಾಡ ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
`ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ~ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ `ಪ್ರಜಾವಾಣಿ~ ತಿಳಿಸಿದರು.