ಬೆಂಗಳೂರು: ವಿಧಾನಸಭೆಯ ಮೊದಲ ಮತ್ತು ಎರಡನೆಯ ಮಹಡಿಯ ನವೀಕರಣ ಕಾಮಗಾರಿಗೆ ಸಂಜಯ ಮಾರ್ಕೆಟಿಂಗ್ ಅಂಡ್ ಪಬ್ಲಿಸಿಟಿ ಸರ್ವಿಸಸ್ ಕಂಪೆನಿ ಸಲ್ಲಿಸಿರುವ ಆರ್ಥಿಕ ಟೆಂಡರ್ ಬಿಡ್ ಪರಿಶೀಲನೆಗೆ ತೆಗೆದುಕೊಳ್ಳಬೇಕು ಎಂದು ಟೆಂಡರ್ ಸ್ವೀಕೃತಿ ಪ್ರಾಧಿಕಾರಕ್ಕೆ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
ಕಂಪೆನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು ಆದೇಶ ಕಾಯ್ದಿರಿಸಿದ್ದರು.
‘ಸಂಜಯ ಮಾರ್ಕೆಟಿಂಗ್ ಮತ್ತು ಬಿಎಸ್ಆರ್ ಇನ್ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್ ಕಂಪೆನಿಗಳೆರಡೂ ಈ ಕಾಮಗಾರಿ ಕೈಗೆತ್ತಿಕೊಳ್ಳಲು ತಾಂತ್ರಿಕವಾಗಿ ಸಮರ್ಥವಾಗಿವೆ ಎಂದು ಪ್ರಾಧಿಕಾರವು ಪರಿಗಣಿಸಬೇಕು. ಹೊಸದಾಗಿ ಕರೆದಿರುವ ಟೆಂಡರ್ಗೆ ಈ ಎರಡೂ ಕಂಪೆನಿಗಳು ಸಲ್ಲಿಸಿರುವ ಬಿಡ್ಅನ್ನು ಪ್ರಾಧಿಕಾರ ಪರಿಗಣನೆಗೆ ತೆಗೆದುಕೊಳ್ಳಬೇಕು’ ಎಂದು ನ್ಯಾ. ಬೋಪಣ್ಣ ಅವರು ಆದೇಶದಲ್ಲಿ ಹೇಳಿದ್ದಾರೆ.
ಬಿಎಸ್ಆರ್ ಇನ್ಫ್ರಾಟೆಕ್ ಕಂಪೆನಿ ಮಾತ್ರ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ತಾಂತ್ರಿಕವಾಗಿ ಸಮರ್ಥವಾಗಿದೆ ಎಂದು ತಾಂತ್ರಿಕ ಪರಿಶೀಲನಾ ಸಮಿತಿಯು 2012ರ ಅಕ್ಟೋಬರ್ 17ರಂದು ಶಿಫಾರಸು ಮಾಡಿತ್ತು.
ಈ ಶಿಫಾರಸು ಏಕಪಕ್ಷೀಯವಾಗಿದೆ ಎಂದು ದೂರಿ ಸಂಜಯ ಮಾರ್ಕೆಟಿಂಗ್ ಕಂಪೆನಿ ಹೈಕೋರ್ಟ್ಗೆ ಅರ್ಜಿಯನ್ನು
ಸಲ್ಲಿಸಿತ್ತು.
ಮೇಲ್ಮನವಿ ಪ್ರಾಧಿಕಾರ ನೀಡಿದ್ದ ಆದೇಶದ ಅನ್ವಯ, ಈ ಕಾಮಗಾರಿಗೆ ಮರು ಟೆಂಡರ್ ಕರೆಯಲಾಗಿತ್ತು. ಆದರೆ ಅದರಲ್ಲಿ ಪಾಲ್ಗೊಳ್ಳುವಾಗ ಬಿಎಸ್ಆರ್ ಇನ್ಫ್ರಾಟೆಕ್ ಕಂಪೆನಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ, ಟೆಂಡರ್ನಲ್ಲಿ ಕೆಲವು ಬದಲಾವಣೆಗಳನ್ನು ತರಲಾಯಿತು ಎಂದು ಅರ್ಜಿಯಲ್ಲಿ ದೂರಲಾಗಿತ್ತು.