ಮೈಸೂರು: ಮೈಸೂರಿನ ಉದಯೋನ್ಮುಖ ಪ್ರತಿಭೆಗಳಾದ ಎಸ್.ಡಿ. ಪ್ರಜ್ವಲ್ದೇವ್ ಮತ್ತು ವಸಿಷ್ಠ ವಿನೋದ ಚೆರುಕು ಮೈಸೂರು ಟೆನಿಸ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿರುವ `ಎಂಟಿಸಿ ಕಪ್' ಎಐಟಿಎ ಟ್ಯಾಲೆಂಟ್ ಸೀರಿಸ್ ಟೆನಿಸ್ ಟೂರ್ನಿಯ 18 ವರ್ಷದೊಳಗಿನ ಬಾಲಕರ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲಿದ್ದಾರೆ.
ಬುಧವಾರ ನಡೆದ ಕ್ವಾರ್ಟರ್ಫೈನಲ್ ಸುತ್ತಿನಲ್ಲಿ ಅಗ್ರಶ್ರೇಯಾಂಕದ ಆಟಗಾರ ಪ್ರಜ್ವಲ್ದೇವ್ 6-1, 6-1ರಿಂದ ನೇರ ಸೆಟ್ಗಳಲ್ಲಿ ವಿಘ್ನೇಶ್ ಸುಬ್ರಮಣಿಯನ್ ವಿರುದ್ಧ ಜಯ ಗಳಿಸಿದರು. ಇನ್ನೊಂದು ಪಂದ್ಯದಲ್ಲಿ ಶ್ರೇಯಾಂಕರಹಿತ ಆಟಗಾರ ವಸಿಷ್ಠ ವಿನೋದ ಚೆರುಕು 6-1, 6-1ರಿಂದ ತಮಿಳುನಾಡಿನ ಸಂಯುಕ್ತ್ ಬಾಲಾಜಿ ವಿರುದ್ಧ ಗೆಲುವು ಸಾಧಿಸಿದರು. 16 ವರ್ಷದೊಳಗಿನ ಬಾಲಕರ ವಿಭಾಗದ ಅಗ್ರಶ್ರೇಯಾಂಕದ ಆಟಗಾರರಾಗಿರುವ ವಸಿಷ್ಠ ಮಂಗಳವಾರ ಪ್ರಿಕ್ವಾರ್ಟರ್ಫೈನಲ್ ವಿಭಾಗದಲ್ಲಿ ಸೋಲನುಭವಿಸಿದ್ದರು. ಆದರೆ ಇವತ್ತು 18 ವರ್ಷದೊಳಗಿನ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿ ನಾಲ್ಕರ ಹಂತಕ್ಕೆ ಪ್ರವೇಶಿಸಿದ್ದಾರೆ. ಗುರುವಾರ ಸೆಮಿಫೈನಲ್ ನಡೆಯಲಿದೆ.
ಇನ್ನುಳಿದ ಪಂದ್ಯಗಳಲ್ಲಿ ತಮಿಳುನಾಡಿನ ಗಣೇಶ್ ಶ್ರೀನಿವಾಸನ್ 6-1, 6-1ರಿಂದ ಕರ್ನಾಟಕದ ವರುಣ್ ವೆಂಕಟ್ ವಿರುದ್ಧ, ತಮಿಳುನಾಡಿನ ಪ್ರನಾಶ್ಪ್ರಭು 7-5, 6-3ರಿಂದ ಆಂಧ್ರಪ್ರದೇಶದ ಬಾಬಜಿ ಶಿವ ವಿರುದ್ಧ ಗೆದ್ದು ಸೆಮಿಫೈನಲ್ಗೆ ಪ್ರವೇಶಿಸಿದರು.
ವಿಘ್ನೇಶ್, ಹರೀಶಸಿಂಗ್ ನಾಲ್ಕರ ಹಂತಕ್ಕೆ: 16 ವರ್ಷದ ಬಾಲಕರ ವಿಭಾಗದಲ್ಲಿ ಕರ್ನಾಟಕದ ವಿಘ್ನೇಶ್ ಸುಬ್ರಮಣ್ಯನ್ 6-1, 6-1ರಿಂದ ತಮಿಳುನಾಡಿನ ಎಲನ್ ಇಳಂಗೋವನ್ ವಿರುದ್ಧ ಗೆದ್ದು, ಸೆಮಿಫೈನಲ್ಗೆ ಸಾಗಿದರು.
ಇನ್ನೊಂದು ಕ್ವಾರ್ಟರ್ಫೈನಲ್ನಲ್ಲಿ ಕರ್ನಾಟಕದ ಹರೀಶ್ಸಿಂಗ್ 3-6, 6-3, 7-5ರಿಂದ ಆಂಧ್ರಪ್ರದೇಶದ ತಕೀಯುದ್ದೀನ್ ಮೊಹಮ್ಮದ್ ವಿರುದ್ಧ ಗೆದ್ದರು.ಇನ್ನುಳಿದ ಪಂದ್ಯಗಳಲ್ಲಿ ಕರ್ನಾಟಕದ ಅರ್ಜುನ್ ಮಂಜುನಾಥ್ 6-1, 6-2ರಿಂದ ಎಂ. ಮೋಹಿತ್ ಅವರನ್ನು ಸೋಲಿಸಿದರು. ಆಂಧ್ರದ ಪಿ.ಸಿ. ಅನಿರುಧ್ 6-2, 6-1ರಿಂದ ಕರ್ನಾಟಕದ ಕೆ.ಎಸ್. ಚಿರಂತನ್ ವಿರುದ್ಧ ಗೆಲುವು ಸಾಧಿಸಿದರು.
ಅಗ್ರಶ್ರೇಯಾಂಕದ ಆಟಗಾರ್ತಿ, ಕರ್ನಾಟಕದ ಎಸ್.ಸೋಹಾ 16 ವರ್ಷದ ಕ್ವಾರ್ಟರ್ಫೈನಲ್ನಲ್ಲಿ ಗೆದ್ದರೆ, 18 ವರ್ಷದೊಳಗಿನ ವಿಭಾಗದಲ್ಲಿ ಸೆಮಿಫೈನಲ್ಗೆ ಸಾಗುವ ಅವರ ಕನಸು ಭಗ್ನವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.