ನವದೆಹಲಿ (ಪಿಟಿಐ): 2001ರಿಂದ ದೂರಸಂಪರ್ಕ ನೀತಿಯಲ್ಲಿನ ಸಂಭಾವ್ಯ ಅಪರಾಧಿ ಅಂಶಗಳ ಬಗೆಗಿನ ತನಿಖೆಗೆ ಸಂಬಂಧಿಸಿದಂತೆ ಮಾಜಿ ದೂರಸಂಪರ್ಕ ಸಚಿವ ಅರುಣ್ ಶೌರಿ ಅವರು ಮುಂದಿನವಾರ ಸಿಬಿಐ ಮುಂದೆ ಹಾಜರಾಗಲಿದ್ದಾರೆ.
ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಸಂಸ್ಥೆಯು ದಾಖಲಿಸಿಕೊಂಡಿರುವ ಪ್ರಾಥಮಿಕ ತನಿಖೆಗೆ ಸಂಬಂಧಿಸಿದಂತೆ ತನ್ನ ಮುಂದೆ ಹಾಜರಾಗುವಂತೆ ಶೌರಿ ಅವರಿಗೆ ಸಿಬಿಐ ಕಳೆದ ವಾರ ಸೂಚಿಸಿತ್ತು.
ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸಚಿವ ಸಂಪುಟವು ಅಂಗೀಕರಿಸಿದ್ದ ~ಮೊದಲು ಬಂದವರಿಗೆ ಆದ್ಯತೆ~ ಸೂತರವನ್ನು ಪಾಲಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ~ಅಪರಿಚಿತ ವ್ಯಕ್ತಿಗಳ~ ವಿರುದ್ಧ ಪ್ರಾಥಮಿಕ ತನಿಖೆಯನ್ನು ಸಿಬಿಐ ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ಇಲ್ಲಿ ತಿಳಿಸಿದರು.
ಅದೇನಿದ್ದರೂ, ತಾನು ಮನೆಯಿಂದ ಹೊರಗಿದ್ದಾಗ ಕಳೆದ ವಾರ ಯಾರೋ ಒಬ್ಬರು ಮನೆಗೆ ದೂರವಾಣಿ ಮಾಡಿದ್ದರು. ನಂತರ ತಾನು 21ರಂದು ಕೋಲ್ಕತ್ತಾ ಭೇಟಿಯಿಂದ ವಾಪಸಾದ ಬಳಿಕ ಸಂಸ್ಥೆಯ ಮುಂದೆ ಹಾಜರಾಗುವುದಾಗಿ ತಿಳಿಸಿರುವುದಾಗಿ ಶೌರಿ ಹೇಳಿದರು.