ಬೆಂಗಳೂರು: ದಕ್ಷಿಣ ಕೋರಿಯಾದಲ್ಲಿ ನಡೆದ ಟೇಕ್ವಾಂಡೊ ಪ್ರದರ್ಶನದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀಡಿದ ಆರ್ಥಿಕ ನೆರವಿನಿಂದ ಪಾಲ್ಗೊಂಡಿದ್ದ ನಗರದ ಯುವಕ ವಿ.ನಾಗರಾಜ್ ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ತಲಾ ಒಂದು ಬಂಗಾರ ಹಾಗೂ ಕಂಚಿನ ಪದಕ ಪಡೆದಿದ್ದಾರೆ.
ಭಾರತದಿಂದ ಪಾಲ್ಗೊಂಡಿದ್ದ 45 ಜನರಲ್ಲಿ ನಾಗರಾಜ್ ಕೂಡ ಒಬ್ಬರಾಗಿದ್ದರು. ಬಡ ಕುಟುಂಬದಿಂದ ಬಂದ ಅವರು, ದಕ್ಷಿಣ ಕೋರಿಯಾಕ್ಕೆ ಹೋಗಲು ಬಿಬಿಎಂಪಿಯಿಂದ ಆರ್ಥಿಕ ನೆರವು ಪಡೆದಿದ್ದರು. ಪ್ರವಾಸಕ್ಕಾಗಿ ವೆಚ್ಚವಾದ ರೂ1.25 ಲಕ್ಷದಲ್ಲಿ ರೂ 60,000 ಬಿಬಿಎಂಪಿ ನೀಡಿದರೆ, ಮಿಕ್ಕ ಮೊತ್ತವನ್ನು ಸ್ವಯಂಸೇವಾ ಸಂಸ್ಥೆಗಳು ಭರಿಸಿದ್ದವು. ಮುಂಬೈ ಮೂಲದ ಜಲನ್ವಾಲಾ ಕ್ರೀಡಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ಈ ಪ್ರವಾಸ ಆಯೋಜಿಸಿತ್ತು.
`ದಕ್ಷಿಣ ಕೋರಿಯಾದ ಪ್ರವಾಸದಿಂದ ಸಾಕಷ್ಟು ವಿಷಯಗಳು ಗೊತ್ತಾದವು. ಅಲ್ಲಿಯ ಕೋಚ್ಗಳಿಂದ ಮಾರ್ಗದರ್ಶನವನ್ನೂ ಪಡೆದೆವು. ಪುಣೆಯಲ್ಲಿ ನಡೆಯಲಿರುವ ಟೇಕ್ವಾಂಡೊ ಪ್ರದರ್ಶನದಲ್ಲೂ ಪಾಲ್ಗೊಳ್ಳಲು ಉದ್ದೇಶಿಸಿದ್ದೇನೆ' ಎಂದು ನಾಗರಾಜ್ ತಿಳಿಸಿದರು.