ರಾಯಚೂರು: ಜಿಲ್ಲೆಯಲ್ಲಿ ಟೊಮೆಟೊ ಬೆಲೆ ಪಾತಾಳ ಕಂಡಿದೆ! ಈ ಬೆಳೆ ಬೆಳೆದ ರೈತ ಬರಗಾಲದಲ್ಲಿ ಆಸರೆಯಾಗುವುದೆಂದು ನಂಬಿದ ರೈತ ಕಂಗಾಲಾಗಿದ್ದಾನೆ.
ಒಂದು ಕೆಜಿ ಟೊಮೆಟೊವನ್ನು 75ಪೈಸೆಗೆ 1ರೂಪಾಯಿವರೆಗೆ ಮಾತ್ರ ಬರುತ್ತದೆ. ತಾಲ್ಲೂಕಿನ ಕಡಗಂದೊಡ್ಡಿ, ಸಿದ್ಧರಾಮಪುರ, ರಾಳದೊಡ್ಡಿ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿನ ರೈತರು ತೋಟಗಾರಿಕೆ ಬೆಳೆಯಾದ ಟೊಮಾಟೊ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಟೊಮೆಟೊ ಇಳುವರಿ ಹೆಚ್ಚಿನ ಪ್ರಮಾಣದಲ್ಲಿ ಬಂದಿದೆ. ಅಲ್ಲದೇ ಟೊಮೆಟೊ ಗುಣಮಟ್ಟವೂ ಉತ್ತಮವಾಗಿದೆ. ಆದರೆ, ಅದೇ ಟಮಾಟೊಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ 5ರಿಂದ 10 ರೂಪಾಯಿಗಳವರೆಗೆ ಲಾಭವನ್ನು ವರ್ತಕರು ಪಡೆಯುತ್ತಾರೆ ಎಂದು ರೈತರು ತಿಳಿಸುತ್ತಾರೆ.
ಪ್ರತಿ ಎಕರೆಗೆ 20ರಿಂದ 25 ಸಾವಿರ ರೂಪಾಯಿಗಳಷ್ಟು ಹಣ ಖರ್ಚು ಮಾಡಿ ಟೊಮೆಟೊ ಬೆಳೆದ ರೈತರಿಗೆ ಮಾತ್ರ ಯಾವುದೇ ರೀತಿಯಲ್ಲಿ ಲಾಭವಾಗುತ್ತಿಲ್ಲ. ಮಧ್ಯವರ್ತಿಗಳಿಗೆ ಹಾಗೂ ವರ್ತಕರಿಗೆ ಮಾತ್ರ ಲಾಭಾಂಶ ದೊರಕುತ್ತದೆ.
ಈ ವರ್ಷ ರೈತರು ಬೆಳೆದಿರುವ ಟೊಮೆಟೊ ಉತ್ತಮ ಗುಣಮಟ್ಟವನ್ನು ಹೊಂದಿದ್ದು, ಸುಮಾರು 15ದಿನಗಳವರೆಗೂ ಕೆಡುವುದಿಲ್ಲ. ಈ ಟೊಮೆಟೊವನ್ನು ಬೇರೆ ರಾಜ್ಯಗಳಿಗೆ ರಪ್ತು ಮಾಡುವುದರ ಮೂಲಕ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಮುಂದಾಗಬೇಕು ಎಂಬುದು ರೈತರ ಒತ್ತಾಯವಾಗಿದೆ.
ಈ ವರ್ಷ ನಾದಾರಿ ಕಂಪನಿಯ ಟೊಮೆಟೊ ಬೀಜವು ಉತ್ತಮ ಇಳುವರಿ ಬಂದಿವೆ. ಆದರೆ, ಸೂಕ್ತ ಬೆಲೆ ದೊರಕಿಸಿಕೊಡಬೇಕು. ಗುಣಮಮಟ್ಟದ ಟಮಾಟೊ ಬೆಳೆಗೆ ಸರ್ಕಾರ ತೋಟಗಾರಿಕೆ ಬೆಂಬಲ ಬೆಲೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.