ಚಿತ್ರದುರ್ಗ: ಉಪ್ಪಾರ ಜನಾಂಗಕ್ಕೆ ಸೇರಿದ ಜಾಗವನ್ನು ಟಿಟಿಎಲ್ ಟ್ರಸ್ಟ್ಗೆ ನೀಡಿರುವ ಮೈಸೂರು ಜಿಲ್ಲಾಧಿಕಾರಿ ಕ್ರಮವನ್ನು ಖಂಡಿಸಿ ಭಗೀರಥ ಜಿಲ್ಲಾ ಉಪ್ಪಾರ ಸಮಾಜದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ನೀಲಕಂಠೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಾಜದ ಮುಖಂಡರು ಮೈಸೂರು ಜಿಲ್ಲಾಧಿಕಾರಿ ವಸ್ತ್ರದ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೈಸೂರು ಜಿಲ್ಲಾಧಿಕಾರಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ)ದ ಆದೇಶ ಉಲ್ಲಂಘಿಸಿ ಈ ಆದೇಶ ಹೊರಡಿಸಿರುವುದು ಖಂಡನೀಯ ಎಂದರು.ಮೂಡಾ ಆದೇಶದ ಪ್ರಕಾರ ಜಾಗವನ್ನು ಉಪ್ಪಾರ ಸಮಾಜ ತೆಗೆದುಕೊಂಡಿತ್ತು. ಆದರೆ, ಈಗಿನ ಜಿಲ್ಲಾಧಿಕಾರಿ ಹಿಂದಿನ ಆದೇಶ ಉಲ್ಲಂಘಿಸಿ ರಾತ್ರೋರಾತ್ರಿ ಪೂರ್ಣ ಜಾಗವನ್ನು ಟಿಟಿಎಲ್ ಟ್ರಸ್ಟ್ಗೆ ಸೇರಿದೆ ಎಂದು ಆದೇಶ ಹೊರಡಿಸಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಉಪ್ಪಾರ ಸಮಾಜದ ಅಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಎನ್. ಬಸವರಾಜ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.