ಹಾಸನ: ಸಾಲ ಮರುಪಾವತಿಗೆ ವಿಳಂಬ ಮಾಡಿದ ರೈತರ ಮನೆಗೆ ಟ್ರ್ಯಾಕ್ಟರ್ ಖರೀದಿಗೆ ಸಾಲ ನೀಡಿದ ಬ್ಯಾಂಕ್ಗಳು ಗೂಂಡಾಗಳನ್ನು ಕಳುಹಿಸಿ ಬೆದರಿಸುತ್ತಿವೆ. ಇವರಿಂದ ನಮಗೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿ ಹಾಸನ ಜಿಲ್ಲಾ ಟ್ರ್ಯಾಕ್ಟರ್ ಮಾಲೀಕರ ಸಂಘದವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬೆಳೆ ನಷ್ಟ ಸಂಭವಿಸಿರುವುದರಿಂದ ಟ್ರ್ಯಾಕ್ಟರ್ ಖರೀದಿಸಿದ ರೈತರು ಸಾಲ ಮರುಪಾವತಿ ಮಾಡಲಾಗದೇ ಪರಿತಪಿಸುತ್ತಿದ್ದಾರೆ. ನಷ್ಟದ ಹೊರತಾಗಿಯೂ ಅವರು ಅಲ್ಪ-ಸ್ವಲ್ಪ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಆದರೆ, ಬ್ಯಾಂಕ್ನವರು ಗೂಂಡಾ ಕಳುಹಿಸಿ ಟ್ರ್ಯಾಕ್ಟರ್ಗಳನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ರೈತರನ್ನು ಪಾರುಮಾಡಬೇಕು ಮತ್ತು ರೈತರಿಂದ ಜಪ್ತಿ ಮಾಡಿರುವ ಟ್ರ್ಯಾಕ್ಟರ್ಗಳನ್ನು ಮರಳಿಸಬೇಕು, ವಶಪಡಿಸಿಕೊಂಡಿರುವ ಟ್ರ್ಯಾಕ್ಟರ್ಗಳನ್ನು ಯಾವ ಕಾರಣಕ್ಕೂ ಹರಾಜು ಮಾಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಮೂಲಕ ಬಂದ ರೈತರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಮೈಲನಹಳ್ಳಿ ಮಂಜೇಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.