ಹೊಸಪೇಟೆ: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಉರುಳಿಬಿದ್ದ ಪರಿಣಾಮ ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟು 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ತಾಲ್ಲೂಕು ಕಮಲಾಪುರ ಹೋಬಳಿ ವ್ಯಾಪ್ತಿಯ ನಲ್ಲಾಪುರದ ಬಳಿ ಬೆಳಿಗ್ಗೆ 10-30ರ ಸುಮಾರಿಗೆ ಸಂಭವಿಸಿದೆ.
ಘಟನೆಯಲ್ಲಿ ಸೌಮ್ಯ (6), ವಿಕಾಸ (5) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹನುಮಂತಪ್ಪ, ಪರಶುರಾಮ, ಕೆಂಚಮ್ಮ, ಶಾರದಾ, ಮಹೇಶ, ಶಾಂತಾ ಮತ್ತು ದುರುಗೇಶ್ ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸಗೆ ದಾಖಲಿಸಲಾಗಿದೆ.
ಘಟನೆ: ಮೂಲತಃ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೆಂಚಟನಹಳ್ಳಿ ಗ್ರಾಮದ ನಿವಾಸಿಗಳು ತಮ್ಮ ದರೋಜಿ ಬಂಧುಗಳ ಮನೆಯಲ್ಲಿ ಮಗುವಿನ ನಾಮಕರಣಕ್ಕಾಗಿ ತೆರಳಿದ್ದು ಗುರುವಾರ ಕಾರ್ಯಕ್ರಮ ಮುಗಿಸಿಕೊಂಡು ಶುಕ್ರವಾರ ಬೆಳಿಗ್ಗೆ ವಾಪಸ್ ಹೋಗುವಾಗ ಚಾಳಕನ ನಿಯಂತ್ರಣ ತಪ್ಪಿ ಟ್ರ್ಯಾಲಿಯ ಪಟ್ಟಿ ಕಳಚಿದ ಪರಿಣಾಮ ಪ್ರಯಾಣಿಕರಿಂದ ತುಂಬಿದ್ದ ಟ್ರ್ಯಾಲಿ ಉರುಳಿ ಬಿದ್ದು 50ಕ್ಕೂ ಹೆಚ್ಚು ಪ್ರಯಾಣಿಕರನ್ನು ತುಂಬಿದ್ದ ಟ್ರ್ಯಾಕ್ಟರ್ನಲ್ಲಿದ್ದ 6 ವರ್ಷದ ಸೌಮ್ಯ ಹಾಗೂ 5 ವರ್ಷದ ವಿಕಾಸ ಸ್ಥಳದಲ್ಲಿಯೇ ಮತಪಟ್ಟಿದ್ದು ಅನೇಕರು ತೀವ್ರ ತರವಾಗಿ ಗಾಯಗೊಂಡಿದ್ದಾರೆ.
ವಿಷಯ ತಿಳಿಯುತ್ತಲೇ ಕಂಪ್ಲಿ ಇನ್ಸ್ಪೆಕ್ಟರ್ ಹನುಮಂತಪ್ಪ 108 ವಾಹನದಲ್ಲಿ ಪ್ರಯಾಣಿಕರನ್ನು ಹೊಸಪೇಟೆಯ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ 7 ಜನರನ್ನು ಪ್ರಥಮ ಚಿಕಿತ್ಸೆ ನೀಡಿ ಬಳ್ಳಾರಿಯ ವಿಮ್ಸಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಿದ್ದಾರೆ. ಈ ಕುರಿತು ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ.
ನಾಮಕರಣ ಕಾರ್ಯಕ್ರಮಕ್ಕೆ ತೆರಳಿ ವಾಪಸ್ ಆಗುವಾಗ ನಡೆದ ಘಟನೆಯಲ್ಲಿ ಹೆಚ್ಚುಪಾಲು ಮಕ್ಕಳಿದ್ದು ಬಹುತೇಕರು ಗಾಯಗೊಂಡಿರುವುದರಿಂದ ಪಾಲಕರು ಹಾಗೂ ಬಂಧುಗಳ ಆಕ್ರಂಧನ ಮುಗಿಲು ಮುಟ್ಟಿತ್ತು.