ಕೋಲ್ಕತ್ತ: ದೀಪಾವಳಿ ಹಬ್ಬದ ಕಾರಣ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಟಗಾರರಿಗೆ ಎರಡು ದಿನಗಳ ಮಟ್ಟಿಗೆ ರಜೆ ನೀಡಿದೆ.
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶನಿವಾರ ಇಂಗ್ಲೆಂಡ್ ವಿರುದ್ಧ ಟ್ವೆಂಟಿ-20 ಕ್ರಿಕೆಟ್ ಪಂದ್ಯವಿರುವ ಕಾರಣ ಈ ಮೊದಲು ಕೋಲ್ಕತ್ತದಲ್ಲಿಯೇ ಇರಲು ಆಟಗಾರರಿಗೆ ಸೂಚಿಸಲಾಗಿತ್ತು. ಆದರೆ ಕೆಲ ಆಟಗಾರರು ವಿನಂತಿ ಮಾಡಿಕೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.
ಹಾಗಾಗಿ ಆಟಗಾರರು ಬುಧವಾರ ಬೆಳಿಗ್ಗೆ ತಮ್ಮೂರಿಗೆ ತೆರಳಿದರು. ಶುಕ್ರವಾರ ಬೆಳಿಗ್ಗೆ ಮತ್ತೆ ಕೋಲ್ಕತ್ತಕ್ಕೆ ಹಿಂತಿರುಗಲಿದ್ದಾರೆ. ಬಳಿಕ ಅಭ್ಯಾಸ ನಡೆಸಲಿದ್ದಾರೆ.
`ಹೌದು, ನಮಗೆ ಎರಡು ದಿನ ಬಿಡುವು ಲಭಿಸಿದೆ. ನಾನು ರಾಂಚಿಗೆ ತೆರಳಲಿದ್ದೇನೆ. ಪೋಷಕರನ್ನು ಭೇಟಿಯಾಗಿ ಒಂದು ತಿಂಗಳಾಯಿತು~ ಎಂದು ನಾಯಕ ದೋನಿ ನುಡಿದರು.