ಶಿಡ್ಲಘಟ್ಟ: ತನ್ನ ಹಿರಿಯ ಸಹೋದರನ ಪ್ರಕರಣಕ್ಕೆ ಸಂಬಂಧಿಸಿದಂತೆ ಪದೇ ಪದೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಮುತ್ತೂರು ಬೀದಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಮುತ್ತೂರು ಬೀದಿ ನಿವಾಸಿ ಪ್ರದೀಪ್ (30) ಆತ್ಮಹತ್ಯೆ ಮಾಡಿಕೊಂಡವವರು. ಅವರು ಪತ್ನಿ ಚಂದ್ರಕಲಾ ಜೊತೆ ಮುತ್ತೂರು ಬೀದಿಯಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರು ಫ್ಯಾನ್ಸಿ ವಸ್ತುಗಳ ಮಾರಾಟ ಮಳಿಗೆಯನ್ನು ಹೊಂದಿದ್ದರು. ಈಗಾಗಲೇ ಮದುವೆ ಮಾಡಿಕೊಂಡಿದ್ದ ಹಿರಿಯ ಸಹೋದರ ಪ್ರಕಾಶ್ ಇತ್ತೀಚೆಗೆ ಯುವತಿಯೊಂದಿಗೆ ಪರಾರಿಯಾಗಿದ್ದ ಪ್ರಕರಣ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇದರ ಹಿನ್ನೆಲೆಯಲ್ಲಿ ಚಿಂತಾಮಣಿ ಪೊಲೀಸರು ಮೂರು-ನಾಲ್ಕು ಸಲ ಪ್ರದೀಪ್ ಅವರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆಗೆ ಒಳಪಡಿಸಿದ್ದರು.
ಈ ಕಾರಣಕ್ಕೆ ಪ್ರದೀಪ್ ಇತ್ತೀಚೆಗೆ ಮಾನಸಿಕವಾಗಿ ನೊಂದುಕೊಂಡಿದ್ದರು. ಅವರು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೆಖೆಯಾಗುತ್ತಿದ್ದ ಕಾರಣ ಕುಟುಂಬ ಸದಸ್ಯರೆಲ್ಲ ಮನೆಯ ಹೊರಗಡೆ ಮಲಗಿದ್ದ ವೇಳೆ ಪ್ರದೀಪ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂತು. ಚಂದ್ರಕಲಾ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.