ಮುಂಬೈ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇದೇ 18ರಂದು ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ ಪ್ರಕಟಿಸಲಿದೆ. ನಂತರವೇ ಸ್ಥಿರ ಠೇವಣಿ ಬಡ್ಡಿ ದರ ಕಡಿತ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರಿ ಸ್ವಾಮ್ಯದ ಮಧ್ಯಮ ಗಾತ್ರದ ಬ್ಯಾಂಕುಗಳು ಹೇಳಿವೆ.
`ಆರ್ಬಿಐ ಮಧ್ಯಂತರ ಹಣಕಾಸು ನೀತಿ ಪ್ರಕಟಣೆವರೆಗೆ ಕಾಯಲು ನಿರ್ಧರಿಸಿದ್ದೇವೆ. ನಂತರ ಸ್ಥಿರ ಠೇವಣಿ ಬಡ್ಡಿ ದರ ತಗ್ಗಿಸಬೇಕೇ ಬೇಡವೇ~ ಎನ್ನುವುದನ್ನು ನಿರ್ಧರಿಸುತ್ತೇವೆ ಎಂದು ವಿಜಯ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕಿ ಸುಬ್ಬಲಕ್ಷ್ಮಿ ಫಾನ್ಸೆ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಒಟ್ಟಾರೆ ಠೇವಣಿ ಪ್ರಗತಿ ಮತ್ತು ಒಟ್ಟಾರೆ ವೆಚ್ಚ ಮತ್ತಿತರ ಸಂಗತಿ ಗಮನಿಸಿ ಬಡ್ಡಿ ದರ ಪರಿಷ್ಕರಿಸಬೇಕಾಗುತ್ತದೆ. ಅದಕ್ಕಾಗಿ ಇನ್ನೊಂದು ವಾರದವರೆಗೆ ಕಾಯುವುದು ಅನಿವಾರ್ಯ ಎಂದಿದ್ದಾರೆ.
ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಹಣದುಬ್ಬರ ಹೆಚ್ಚಳದಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಪ್ರಗತಿ ಕುಂಠಿತಗೊಂಡಿದೆ. 2011-12ನೇ ಹಣಕಾಸು ವರ್ಷದಲ್ಲಿ ಒಟ್ಟಾರೆ ಠೇವಣಿ ಸಂಗ್ರಹದಲ್ಲಿ ಶೇ 13.4ರಷ್ಟು ಪ್ರಗತಿ ಕಂಡಿದೆ. ಆದರೆ, ಇದು `ಆರ್ಬಿಐ~ ನಿಗದಿಪಡಿಸಿರುವ (ಶೇ 17) ಮಿತಿಗಿಂತ ಇದು ಕಡಿಮೆ ಇದೆ.
ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಕಳೆದ ವಾರ ಆಯ್ದ ಸ್ಥಿರ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ 0.25ರಷ್ಟು ತಗ್ಗಿಸಿದೆ.
`ಆಯಾ ಬ್ಯಾಂಕುಗಳ ಠೇವಣಿ ನಿರ್ವಹಣೆ ಸಾಮರ್ಥ್ಯ ಆಧರಿಸಿ ಬಡ್ಡಿ ದರ ತಗ್ಗಿಸಲಾಗುತ್ತದೆ~ ಎಂದು ದೇನಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಸುಧೀರ್ ಕುಮಾರ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.
ಸೆಂಟ್ರಲ್ ಬ್ಯಾಂಕ್ ಇಂಡಿಯ ವ್ಯವಸ್ಥಾಪಕ ನಿರ್ದೇಶಕ ಎಂ.ವಿ ಟಂಕಸಾಲೆ ಮತ್ತು ಕಾರ್ಪೊರೇಷನ್ ಬ್ಯಾಂಕ್ ಅಧ್ಯಕ್ಷ ಅಜಯ್ ಕುಮಾರ್ ಸಹ ಇದೇ 18ರವರೆಗೆ ಕಾದು ನೋಡುವುದಾಗಿ ಹೇಳಿದ್ದಾರೆ.
ಸದ್ಯ ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಗದು ಕೊರತೆ ್ಙ1 ಲಕ್ಷ ಕೋಟಿಯಷ್ಟಿದೆ. `ಆರ್ಬಿಐ~ ನಿಗದಿ ಮಾಡಿರುವ ಹಿತಕರ ಮಟ್ಟ ್ಙ60 ಸಾವಿರ ಕೋಟಿಗಿಂತಲೂ ಇದು ಹೆಚ್ಚಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.