ಬಳ್ಳಾರಿ: ಜಿಲ್ಲೆಯ ಮರಿಯಮ್ಮನಹಳ್ಳಿ ಬಳಿಯ ಡಣಾಪುರ ಗ್ರಾಮದ ಹತ್ತಿರವಿರುವ ಬಿಎಂಎಂ ಕಾರ್ಖಾನೆಯ ನೀರಿನ ಗುಂಡಿಯಲ್ಲಿ ಬಿದ್ದು ಮೃತರಾಗಿರುವ ಇಬ್ಬರು ಬಾಲಕರ ಕುಟುಂಬ ಸದಸ್ಯರಿಗೆ ರೂ 10 ಲಕ್ಷ ಪರಿಹಾರ ಧನ ಹಾಗೂ ಅವಲಂಬಿತರಿಗೆ ಉದ್ಯೋಗ ನೀಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಕೆಂಚಪ್ಪ ಆಗ್ರಹಿಸಿದ್ದಾರೆ.
ಶುಕ್ರವಾರ ಪ್ರಕಟಣೆ ಮೂಲಕ ಈ ಕುರಿತು ಆಗ್ರಹಿಸಿರುವ ಅವರು, ಬಿಎಂಎಂ ಕಾರ್ಖಾನೆಯು ಅಕ್ರಮ ವಾಗಿ ನೀರು ಸಂಗ್ರಹಿಸಿದ್ದು, ಗ್ರಾಮ ಪಂಚಾಯಿತಿ ಪರವಾನಗಿ ಇಲ್ಲದೆ ನೀರಿನ ಗುಂಡಿ ತೆರೆಯಲಾಗಿದೆ.
ರಕ್ಷಣೆ ಇಲ್ಲದಂತೆ ಗುಂಡಿ ನಿರ್ಮಿಸಿ ರುವುದರಿಂದ ಈಜಲು ತೆರಳಿದ ಬಾಲಕರ ಸಾವಿಗೀಡಾಗಿದ್ದು, ಬಿಎಂಎಂ ಕಂಪೆನಿ ಮೃತರ ಅವಲಂಬಿತರಿಗೆ ಪರಿಹಾರ ನೀಡಬೇಕು. ಪರಿಹಾರ ನೀಡದಿದ್ದರೆ, ಸಮಿತಿಯಿಂದ ಕಂಪೆನಿ ಕಾರ್ಖಾನೆ ಎದುರು ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.