ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಬಿಂಗ್ ವಿರುದ್ಧ ಶಿವರಾಜ್ ಗುಡುಗು: ಮೂರನೇ ಕಣ್ಣು ಬಿಟ್ಟರೆ ನೆಟ್ಟಗಾಗದು

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಡಬ್ಬಿಂಗ್ ವಿರೋಧಿ ನಿಲುವು ತಳೆದ ಕಾರಣಕ್ಕೆ ನನ್ನ ವಿರುದ್ಧ ಬೇರೆ ಬೇರೆ ರೂಪದಲ್ಲಿ ದಾಳಿ ನಡೆಯುತ್ತಿದೆ. ಇದನ್ನು ಸಹಿಸುವುದು ಸಾಧ್ಯವಿಲ್ಲ. `ಶಿವ~ ಮೂರನೇ ಕಣ್ಣು ಬಿಟ್ಟರೆ ಪರಿಣಾಮ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ~ ಎಂದು ನಟ ಶಿವರಾಜ್‌ಕುಮಾರ್ ಗುಡುಗಿದರು.

ನಗರದಲ್ಲಿ ಸೋಮವಾರ `ಅಂದರ್ ಬಾಹರ್~ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರವೊಂದಕ್ಕೆ ನೀಡಲಾದ ಮುಂಗಡ ಹಣ ಹಿಂತಿರುಗಿಸಿಲ್ಲ ಎಂದು ನಿರ್ಮಾಪಕ ಸೂರಪ್ಪ ಬಾಬು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿರುವುದರ ಕುರಿತು ಪ್ರತಿಕ್ರಿಯೆ ನೀಡಿದರು. `ಡಾ.ರಾಜ್ ಹುಟ್ಟುಹಬ್ಬದ ದಿನ ಡಬ್ಬಿಂಗ್ ವಿರುದ್ಧವಾಗಿ ಮಾತನಾಡಿದೆ. ಕನ್ನಡ ಚಿತ್ರರಂಗದ ಉಳಿವಿನ ಸಂಬಂಧ ಈ ನಿಲುವು ತೆಗೆದುಕೊಂಡಿದ್ದೇನೆ. ಆದರೆ, ಇದನ್ನೇ ನೆಪವಾಗಿರಿಸಿಕೊಂಡು ಪರೋಕ್ಷವಾಗಿ ನನ್ನ ಮೇಲೆ ದಾಳಿ ನಡೆಸಲಾಗುತ್ತಿದೆ~ ಎಂದು ಆರೋಪಿಸಿದರು.

`ಬಾಬು ಅವರ ಅಸಮಾಧಾನದ ವಿಚಾರವಾಗಿ ನಟ ಅಂಬರೀಷ್ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಮ್ಮುಖದಲ್ಲಿ ಈಗಾಗಲೇ ಚರ್ಚೆ ನಡೆಸಲಾಗಿದೆ. ಪರಸ್ಪರ ಚರ್ಚಿಸಿ ಒಮ್ಮತಕ್ಕೆ ಬರಬಹುದಿತ್ತು. ಆದರೆ ವಿನಾಕಾರಣ ಸಮಸ್ಯೆ ಸೃಷ್ಟಿಸಲಾಗಿದೆ~ ಎಂದರು.

ನಟ ತೂಗುದೀಪ ಶ್ರೀನಿವಾಸ್ ವಿರುದ್ಧ ಬಾಬು ನೀಡಿದ್ದಾರೆ ಎನ್ನಲಾದ ಅವಹೇಳನಕಾರಿ ಹೇಳಿಕೆ ಕುರಿತು ಪ್ರಸ್ತಾಪಿಸಿದ ಅವರು, `ವಿವಾದದಲ್ಲಿ ವಿನಾಕಾರಣ ನನ್ನ ಹೆಸರನ್ನು ಪ್ರಸ್ತಾಪಿಸಲಾಗುತ್ತಿದೆ. ಬಾಬು ಅವರ ತೇಜೋವಧೆ ಮಾಡುವಂತಹ ಕೀಳು ವ್ಯಕ್ತಿ ನಾನಲ್ಲ. ಅವಹೇಳನಕಾರಿ ವಿಡಿಯೊವನ್ನು ಪ್ರಚುರಪಡಿಸುವಷ್ಟು ತಂತ್ರಜ್ಞಾನವೂ ನನಗೆ ಗೊತ್ತಿಲ್ಲ. ಅವರು ನಿರ್ಮಾಪಕರು ಎನ್ನುವ ಗೌರವ ನನಗೆ ಈಗಲೂ ಇದೆ. ನಟ ತೂಗುದೀಪರ ಕುರಿತು ಚಿಕ್ಕಂದಿನಿಂದಲೂ ಅಭಿಮಾನವಿದೆ~ ಎಂದು ಹೇಳಿದರು.

`ಸುಮಾರು ನೂರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇವುಗಳಲ್ಲಿ 20-25 ಚಿತ್ರಗಳಲ್ಲಿ ನನಗೆ ಇನ್ನೂ ಹಣ ಸಂದಾಯವಾಗಬೇಕಿದೆ. ಮುಂಗಡ ನೀಡಿ ಏಳು ವರ್ಷದ ಬಳಿಕ ಅಣ್ಣ ತಂಗಿ ಚಿತ್ರ ತಯಾರಾಯಿತು~ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT