ಚಿಕ್ಕೋಡಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಗ್ರಾಮದ ಕನ್ನಡದ ಕಟ್ಟಾಳು, ಸಾಹಿತಿ ಡಾ. ಅನಿಲ್ ಕಮತಿ (58) ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
ಇವರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ. ಸ್ವಗ್ರಾಮ ಯಕ್ಸಂಬಾದಲ್ಲಿ ಸೋಮವಾರ ಅಂತ್ಯಕ್ರಿಯೆ ನಡೆಯಿತು.
ವೈದ್ಯರಾಗಿದ್ದ ಅನಿಲ್ ಕಮತಿ ಅವರು ಗಡಿಭಾಗದಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದರು. ಯಕ್ಸಂಬಾದಲ್ಲಿ ಕನ್ನಡ ಬಳಗವನ್ನು ಕಟ್ಟಿದ್ದ ಅವರು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು 25 ವರ್ಷಗಳಿಂದ ಕನ್ನಡೋತ್ಸವವನ್ನಾಗಿ ಆಚರಿಸಿದ್ದಾರೆ.