ಘಟಪ್ರಭಾ (ಗೋಕಾಕ): ಇಲ್ಲಿಯ ಕರ್ನಾಟಕ ಆರೋಗ್ಯ ಧಾಮದ ಹೆಸರಾಂತ ವೈದ್ಯ ಹಾಗೂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕಿರಣ ಮಾಧವರಾವ ವೈದ್ಯ (60) ಗುರುವಾರ ಬೆಳಿಗ್ಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಅವರಿಗೆ ಪುತ್ರ ಮತ್ತು ಪುತ್ರಿ ಇದ್ದಾರೆ. ಕೆಲವು ದಿನಗಳಿಂದ ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಾರ್ಥಿವ ಶರೀರವನ್ನು ಗುರುವಾರ ರಾತ್ರಿ ಇಲ್ಲಿಗೆ ತಂದು ಶುಕ್ರವಾರ ಬೆಳಿಗ್ಗೆ 8 ರಿಂದ 10ರವರೆಗೆ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುವುದು. ನಂತರ 11ಕ್ಕೆ ಧಾಮದ ಆವರಣದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.