ಬೆಂಗಳೂರು: `ಜನರಲ್ಲಿ ಶಿಸ್ತು ಸಂಯಮ ಬೆಳೆಸುವಲ್ಲಿ ಭಾರತ ಸೇವಾ ದಳದ ಪಾತ್ರ ಪ್ರಮುಖವಾಗಿದೆ~ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದರು.ನಗರದ ಸೇವಾ ದಳ ಕೇಂದ್ರದಲ್ಲಿ ಸೋಮವಾರ ನಡೆದ ಡಾ.ನಾ.ಸು. ಹರ್ಡೀಕರ್ ಅವರ 123 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಸೇವಾ ದಳದ ಸಂಸ್ಥಾಪಕ ನಾ.ಸು. ಹರ್ಡೀಕರ್ ಅವರು ಶಿಸ್ತು ಸಂಯಮಕ್ಕೆ ಹೆಸರಾಗಿದ್ದರು. ಅಂತಹ ವ್ಯಕ್ತಿಗಳನ್ನು ಪ್ರಸ್ತುತ ದಿನಗಳಲ್ಲಿ ಕಾಣುವುದು ಅಪರೂಪ~ ಎಂದು ಹೇಳಿದರು.
`ದೇಶದಲ್ಲಿ ಅಭಿವೃದ್ಧಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಇಂದಿನ ರಾಜಕಾರಣಿಗಳು ಕೇವಲ ಭಾಷಣದಲ್ಲಿ ನಿರತರಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ದೇಶಕ್ಕಾಗಿ ಕೆಲಸ ಮಾಡುವ ಉತ್ಸಾಹಿ ಯುವ ಪಡೆಯನ್ನು ಸೃಷ್ಟಿಸಬೇಕಿದೆ~ ಎಂದು ಹೇಳಿದರು.
ಸೇವಾ ದಳದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಶಿವಶರಣಪ್ಪ ವಾಲಿ, `ಮಾರ್ಗದರ್ಶನ ಮಾಡುವವರು ತತ್ವಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಮಾರ್ಗದರ್ಶನ ಮಾಡಿದರೂ ನಿಷ್ಪ್ರಯೋಜಕ~ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೇವಾ ದಳದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ವೂಡೇ ಪಿ.ಕೃಷ್ಣ, ಸಮಿತಿ ಸಂಘಟನಾ ಕಾರ್ಯದರ್ಶಿ ಕಲ್ಪನಾ ಶಿವಣ್ಣ, ಸ್ವಾತಂತ್ರ್ಯ ಹೋರಾಟಗಾರ ಎಸ್.ವಿ. ಮಂಜುನಾಥ್ ಉಪಸ್ಥಿತರಿದ್ದರು.