ಬೀದರ್: ಅಲಂಕೃತ ವಾಹನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ, ಗಮನ ಸೆಳೆದ ಯುವಕರ ಕೋಲಾಟ ಪ್ರದರ್ಶನ, ಜಯಘೋಷ, ಯುವಕರ ನರ್ತನ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 122ನೇ ಜಯಂತಿ ಪ್ರಯುಕ್ತ ನಗರದಲ್ಲಿ ಭಾನುವಾರ ನಡೆದ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳು ಇವು.
ಮೆರವಣಿಗೆಯಲ್ಲಿ ಅಲಂಕೃತ ವಾಹದಲ್ಲಿ ಡಾ. ಅಂಬೇಡ್ಕರ್ ಅವರ ನಿಂತ ಭಂಗಿಯ ಭಾವಚಿತ್ರದೊಂದಿಗೆ, ಗೌತಮ್ ಬುದ್ಧ ಅವರ ಭಾವಚಿತ್ರವನ್ನು ಇಡಲಾಗಿತ್ತು. ಧ್ವನಿವರ್ಧಕಗಳಿಂದ ಮೊಳಗುತ್ತಿದ್ದ ಗೀತೆಗಳಿಗೆ ಮಕ್ಕಳು, ಯುವಕರು ಕುಣಿದು ಕುಪ್ಪಳಿಸಿದರು.
ನಗರದ ನೌಬಾದ್, ನಾವದಗೇರಿ, ಚಿದ್ರಿ, ಶಾಹಗಂಜ್, ಬೀದರ್ ತಾಲ್ಲೂಕಿನ ಮರಕಲ್ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಡಾ. ಅಂಬೇಡ್ಕರ್ ಅವರ ಭಾವಚಿತ್ರ ಇರಿಸಲಾಗಿದ್ದ ಅಲಂಕೃತ ವಾಹನಗಳು ಡಿಜೆಯೊಂದಿಗೆ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಗೆ ಸೇರ್ಪಡೆಗೊಂಡವು.
ಮೆರವಣಿಗೆಗಳು ನಗರದ ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಚೌಬಾರ್, ಮಹಮ್ಮದ್ ಗವಾನ್ ವೃತ್ತ, ಶಾಹಗಂಜ್ ಕಮಾನ್ ಮೂಲಕ ಪುನಃ ಅಂಬೇಡ್ಕರ್ ವೃತ್ತದ ಬಳಿ ಸಮಾವೇಶಗೊಂಡವು.
ಮೆರವಣಿಗೆ ಉದ್ದಕ್ಕೂ ಯುವಕರು ಕೋಲಾಟ ಪ್ರದರ್ಶಿಸುವ ಮೂಲಕ ಎಲ್ಲರ ಗಮನಸೆಳೆದರು. ಡಿಜೆಯಲ್ಲಿ ಮೂಡಿ ಬಂದ ಹಿಂದಿ ಗೀತೆಗಳ ಮೇಲೆ ಯುವಕರು, ಮಕ್ಕಳು ಖಡಕ ಬಿಸಿನಲ್ಲಿಯೂ ಕುಣಿದು ಸಂಭ್ರಮಿಸುವ ದೃಶ್ಯ ಕಂಡುಬಂತು.