`ದಸರಾ ಸಂದರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಬರಲಿದ್ದಾರೆ. ಆ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡುವುದು ಪಾಲಿಕೆಯ ಆದ್ಯ ಕರ್ತವ್ಯ. ದಸರಾ ವೇಳೆ ಸ್ವಚ್ಛತೆಗೆ ವಿಶೇಷ ಗಮನ ಹರಿಸಲಾಗುವುದು' ಎಂದು ತಿಳಿಸಿದರು.
`ದಸರಾ ಕಾಮಗಾರಿಗಳನ್ನು ಕಳಪೆ ಮಾಡಿದ ಗುತ್ತಿಗೆದಾರರನ್ನು ಈ ಹಿಂದೆ ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಈ ಬಾರಿ ಕಳಪೆ ಕಾಮಗಾರಿ ಮಾಡಿದವರನ್ನು ಸಹ ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಹಿಂದೆಯೂ ಪಾಲಿಕೆ ಆಯುಕ್ತರಾಗಿದ್ದ ರವಿ ಅವರನ್ನು ಪಾಲಿಕೆ ಚುನಾವಣೆ ನಿಮಿತ್ತ ಶಿವಮೊಗ್ಗ ನಗರಸಭೆ ಆಯಕ್ತರಾಗಿ ವರ್ಗಾವಣೆ ಮಾಡಲಾಗಿತ್ತು. ಅಲ್ಲಿನ ಆಯುಕ್ತರಾಗಿದ್ದ ಪಿ.ಜಿ. ರಮೇಶ್ ಅವರನ್ನು ಮೈಸೂರಿನ ಪಾಲಿಕೆಗೆ ಆಯುಕ್ತರಾಗಿ ಸರ್ಕಾರ ವರ್ಗಾವಣೆ ಮಾಡಿತ್ತು.
ವಿಧಾನಸಭೆ ಚುನಾವಣೆ ವೇಳೆ ಬೆಳಗಾವಿ ವಿಶೇಷ ಜಿಲ್ಲಾಧಿಕಾರಿಯಾಗಿ ಅವರು ಸೇವೆ ಸಲ್ಲಿಸಿದ್ದರು. ಮೈಸೂರಿನ ಸ್ಥಳೀಯ ಆಂಗ್ಲ ಪತ್ರಿಕೆಯಲ್ಲಿ ಪತ್ರಕರ್ತರಾಗಿ, ಕೋಲಾರದಲ್ಲಿ ಉಪನ್ಯಾಸಕರಾಗಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾಗಿ, ಉನ್ನತ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ, ಕೊಡಗು ಜಿಲ್ಲೆ ಉಪ ವಿಭಾಗಾಧಿಕಾರಿಯಾಗಿ ಹಾಗೂ ಒಮ್ಮೆ ದಸರಾ ಉಪ ವಿಶೇಷಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ.