ದಾವಣಗೆರೆ: ವರನಟ ಡಾ.ರಾಜ್ಕುಮಾರ್ ಅವರ 85ನೇ ಹುಟ್ಟು ಹಬ್ಬವನ್ನು ನಗರದಲ್ಲಿ ಬುಧವಾರ ಸರಳವಾಗಿ ಆಚರಿಸಲಾಯಿತು.ನಗರದ ಜಯದೇವ ವೃತ್ತದಲ್ಲಿ ರಾಜ್ಕುಮಾರ್ ಅಭಿಮಾನಿಗಳ ಸಂಘ, ಶಿವರಾಜ್ಕುಮಾರ್ ಸೇನಾ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಡಾ.ರಾಜ್ ಭಾವಚಿತ್ರಕ್ಕೆ ಹೂಮಾಲೆ ಅರ್ಪಿಸಲಾಯಿತು.
ಸಂಘದ ಮುಖಂಡ ಕೆ.ಜಿ. ಶಿವಕುಮಾರ್ ಮಾತನಾಡಿ, ವರನಟ ಡಾ.ರಾಜ್ ವ್ಯಕ್ತಿತ್ವ ಆದರ್ಶವಾದದ್ದು. ಜಯದೇವ ವೃತ್ತದಲ್ಲಿ ರಾಜ್ಕುಮಾರ್ ಅವರ ಕಂಚಿನ ಪ್ರತಿಮೆ ನಿರ್ಮಿಸಬೇಕು. ಇದಕ್ಕಾಗಿ ಹೋರಾಟ ನಡೆಸುವುದಾಗಿ ಹೇಳಿದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಗೋಕಾಕ್ ಚಳವಳಿ ಸಂದರ್ಭ ದಾವಣಗೆರೆಯಲ್ಲಿ ಕನ್ನಡ ಪರ ಹೋರಾಟದ ಕಿಚ್ಚು ಹಚ್ಚಿರುವ ಡಾ.ರಾಜ್ ನಮ್ಮ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.
ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ವಿಶ್ವನಾಥ್, ಮುಖಂಡರಾದ ನಾಗೇಂದ್ರ ಬಂಡೀಕರ್, ಮಂಜುನಾಥ್, ಎ. ನಾಗರಾಜ್, ಪ್ರಕಾಶ್, ಕೆ.ಟಿ. ಗೋಪಾಲಗೌಡ ಇದ್ದರು. ರಾಜ್ಕುಮಾರ್ ಅಭಿಮಾನಿಗಳಿಗೆ ಬಟ್ಟೆ ವಿತರಿಸಲಾಯಿತು.