ಬೆಂಗಳೂರು: ‘ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ವತಿಯಿಂದ ಡಿ. 29ರಂದು ಕುವೆಂಪು ಅವರ 109ನೇ ಜನ್ಮದಿನಾಚರಣೆ ಮತ್ತು ‘ಕುವೆಂಪು ರಾಷ್ಟ್ರಮಟ್ಟದ ಪ್ರಶಸ್ತಿ’ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಹಂಪ ನಾಗರಾಜಯ್ಯ ಹೇಳಿದರು. ಕುಪ್ಪಳಿಯ ಶತಮಾನೋತ್ಸವ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಸಚಿವ ದಿ. ಎಂ.ಚಂದ್ರಶೇಖರ್ ಅವರ ಅವರ ಪುತ್ರ ನರೇಂದ್ರ ಅವರು ‘ಕುವೆಂಪು ರಾಷ್ಟ್ರಮಟ್ಟದ ಪುರಸ್ಕಾರ’ ನೀಡಲು ಪ್ರತಿಷ್ಠಾನಕ್ಕೆ ₨60 ಲಕ್ಷ ದೇಣಿಗೆ ನೀಡಿದ್ದಾರೆ. ಅದರ ನೆರವಿನಿಂದ ಪ್ರತಿ ವರ್ಷ ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ ಸಾಹಿತಿಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದರು.
ಪ್ರಸಕ್ತ ಸಾಲಿನ ಪ್ರಶಸ್ತಿಗೆ ಮಲಯಾಳಂ ಸಾಹಿತಿ ಕೆ.ಸಚ್ಚಿದಾನಂದ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₨5 ಲಕ್ಷ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು. ಇದೇ ವೇಳೆ ಕುವೆಂಪು ಅವರ ‘ರಾಮಾಯಣ ದರ್ಶನಂ’ ಮಹಾಕಾವ್ಯದ 80 ಗಂಟೆಗಳ ಅವಧಿಯ ವಾಚನ ಮತ್ತು ವ್ಯಾಖ್ಯಾನ ಇರುವ ಸಿ.ಡಿ ಮತ್ತು ಡಿವಿಡಿಗಳನ್ನು ಬಿಡುಗಡೆ ಮಾಡಲಾಗುವುದು. ಲಹರಿ ರೆಕಾರ್ಡಿಂಗ್ ಕಂಪೆನಿಯು ಇದನ್ನು ಹೊರತಂದಿದೆ. ಸಿಡಿ ಹಾಗೂ ಡಿವಿಡಿಗಳ ಬೆಲೆ ₨500 ಆಗಿದ್ದು, ಕಾರ್ಯಕ್ರಮದ ದಿನ ₨400 ಮಾರಾಟ ಮಾಡಲಾಗುವುದು ಎಂದು ಅವರು ಹೇಳಿದರು.