ನವದೆಹಲಿ (ಪಿಟಿಐ): ತನ್ನ ಮಿತ್ರಪಕ್ಷ ಡಿಎಂಕೆ ಜೊತೆಗಿನ ಸಂಬಂಧವನ್ನು ಕಡಿದುಕೊಂಡರೆ ಆ ಬಳಿಕ ಕಾಂಗ್ರೆಸ್ ಜೊತೆಗಿನ ಮೈತ್ರಿ ಸಾಧ್ಯತೆಯನ್ನು ಪರಿಶೀಲಿಸುವ ಸುಳಿವನ್ನು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಮಂಗಳವಾರ ಇಲ್ಲಿ ನೀಡಿದರು.
ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ಡಿಎಂಕೆ ಇನ್ನೂ ಮಿತ್ರ ಪಕ್ಷಗಳಾಗಿರುವುದರಿಂದ ಮತ್ತು ಅವುಗಳು ಕೇಂದ್ರದಲ್ಲಿ ಇನ್ನೂ ಅಧಿಕಾರ ಹಂಚಿಕೆ ಮುಂದುವರೆಸಿರುವುದರಿಂದ ಸೋನಿಯಾ ಗಾಂಧಿ ಅವರನ್ನು ತಾವು ಭೇಟಿ ಮಾಡುವುದು ಸರಿಯಾಗುವುದಿಲ್ಲ ಎಂದು ಹೇಳಿದರು.
~ಕಾಂಗ್ರೆಸ್ ದುರ್ಬಲವಾಗಿರುವುದರಿಂದ ಅದರ ಜೊತೆಗೆ ಮೈತ್ರಿಗೆ ನೀವು ಹಿಂದೇಟು ಹಾಕುತ್ತಿದ್ದೀರಾ?~ ಎಂಬುದಾಗಿ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ~ಯಾರಿಗಾದರೂ ನನ್ನ ಬೆಂಬಲ ಬೇಕಾಗಿದ್ದರೆ, ಅವರು ನನ್ನನ್ನು ಕೇಳಬೇಕು. ನೀವು ಅವರ ಪರವಾಗಿ ಕೇಳುವಂತಿಲ್ಲ~ ಎಂದು ಜಯಲಲಿತಾ ಉತ್ತರಿಸಿದರು.
ಕಳೆದ ತಿಂಗಳು ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲಿಯೇ ಸೋನಿಯಾಗಾಂಧಿಯವರು ಜಯಲಲಿತಾ ಅವರನ್ನು ಸಂಪರ್ಕಿಸಿ ಅಭಿನಂದನೆಗಳನ್ನು ಹೇಳಿದ್ದರಿಂದ ಕೇಳಿಬಂದ ರಾಜಕೀಯ ಊಹಾಪೋಹಗಳ ಕಾರಣ ಪತ್ರಕರ್ತರು ಉಭಯ ಪಕ್ಷಗಳ ಮೈತ್ರಿ ಸಾಧ್ಯತೆ ಬಗ್ಗೆ ಜಯಲಲಿತಾಗೆ ಪ್ರಶ್ನೆಗಳ ಸುರಿಮಳೆಗೈದರು.