ಮುಜಾಫರ್ ನಗರ (ಪಿಟಿಐ): ಡಿಐಜಿಯೊಬ್ಬರ ಅನುಚಿತ ಹೇಳಿಕೆಗೆ ಕಾರಣಳಾಗಿದ್ದ ಇಲ್ಲಿನ ಕಾಸೆರ್ವಾ ಗ್ರಾಮದ ಬಾಲಕಿ ಶುಕ್ರವಾರ ಪತ್ತೆಯಾಗಿದ್ದಾಳೆ. 15 ವರ್ಷದ ಈ ಬಾಲಕಿ ತನ್ನ 22 ವರ್ಷದ ಪ್ರಿಯಕರನೊಂದಿಗೆ ನಾಪತ್ತೆಯಾಗಿದ್ದಳು ಎನ್ನಲಾಗಿದೆ.
ತಂಗಿ ಕಾಣೆಯಾಗಿದ್ದ ಬಗ್ಗೆ ಸಹೋದರ ದೂರು ನೀಡಲು ಹೋದಾಗ ಸ್ಥಳೀಯ ಪೊಲೀಸರು ಅದನ್ನು ಸ್ವೀಕರಿಸಿರಲಿಲ್ಲ. ಆಗ ಆಕೆಯ ತಂದೆ ಮಗಳನ್ನು ಹುಡುಕಿಕೊಡಿ ಎಂದು ಸಹರನ್ಪುರ ಡಿಐಜಿ ಎಸ್.ಕೆ.ಮಾಥೂರ್ ಅವರ ಬಳಿ ಹೋಗಿದ್ದರು. ಆಗ ಮಾಥುರ್, `ನಾನೇನಾದರೂ ನಿನ್ನ ಜಾಗದಲ್ಲಿ ಇದ್ದಿದ್ದರೆ ಹೀಗೆ ಓಡಿಹೋದ ಮಗಳನ್ನು ಗುಂಡಿಟ್ಟು ಕೊಲ್ಲುತ್ತಿದ್ದೆ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ~ ಎಂದು ಹೇಳಿದ್ದರು.
ಈ ದೃಶ್ಯ ಟಿ.ವಿ ವಾಹಿನಿಗಳಲ್ಲಿ ಪ್ರಸಾರವಾಗಿ ರಾಷ್ಟ್ರ ಮಟ್ಟದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಹೇಳಿಕೆ ದಾಖಲಿಸಿಕೊಳ್ಳಲು ಬಾಲಕಿಯನ್ನು ಶೀಘ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎಸ್ಪಿ ಅಮಿತ್ ವರ್ಮಾ ತಿಳಿಸಿದ್ದಾರೆ.