ಹುಬ್ಬಳ್ಳಿ: ‘ಅದಿರು ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ಹಸಿರು ಪೀಠದಲ್ಲಿರುವ ಹಾಗೂ ಭೂಕಬಳಿಕೆಗೆ ಸಂಬಂಧಿಸಿದಂತೆ ಬೆಂಗಳೂರು ಲೋಕಾಯುಕ್ತ ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣಗಳ ವಿಚಾರಣೆ ಪೂರ್ಣವಾಗುವವರೆಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಸಂಪುಟದಿಂದ ಹೊರಗಿಡಬೇಕು’ ಎಂದು ಧಾರವಾಡ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಸೋಮವಾರ ಇಲ್ಲಿ ಆಗ್ರಹಿಸಿ, ಕೆಲವು ಪೂರಕ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಬಿಡುಗಡೆ ಮಾಡಿದ ಈ ದಾಖಲೆಗಳು, ‘ಆಗಿನ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ ರಕ್ಷಣೆಯಲ್ಲಿ ಮತ್ತು ಧರ್ಮಸಿಂಗ್ ಅವಧಿಯಲ್ಲಿ ಶಿವಕುಮಾರ್ ಅಧಿಕಾರ ದುರುಪಯೋಗ ಪಡಿಸಿಕೊಂಡು ಮೈಸೂರು ಮಿನರಲ್ ಲಿಮಿಟೆಡ್ (ಎಂಎಂಎಲ್) ನಿಂದ 10.80 ಲಕ್ಷ ಟನ್ ಅದಿರನ್ನು ಎಂಟು ಅದಿರು ಕಂಪೆನಿಗಳ ಹೆಸರಿನಲ್ಲಿ ಕಡಿಮೆ ದರದಲ್ಲಿ ಖರೀದಿಸಿ, ಅಕ್ರಮವಾಗಿ ಸಾಗಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದ್ದಾಗಿವೆ.
ಸ್ವತಂತ್ರ ತನಿಖೆಗೆ ಒತ್ತಾಯ: ‘ಕೃಷ್ಣ ಅವಧಿಯಲ್ಲಿ ಆರಂಭಗೊಂಡ ಶಿವಕುಮಾರ್ ಅವರ ಅಕ್ರಮ ವ್ಯವಹಾರವು ಧರ್ಮಸಿಂಗ್ ಮತ್ತು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಮುಂದುವರಿದಿತ್ತು ಎಂಬುದು ಈ ದಾಖಲೆಗಳಿಂದ ಮೇಲ್ನೋಟಕ್ಕೆ ಸಾಬೀತಾಗಿದೆ. ಅವರ ವಿರುದ್ಧದ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ಆರೋಪಗಳ ಕುರಿತು ಪ್ರಾಮಾಣಿಕ, ನಿಷ್ಠಾವಂತ ನ್ಯಾಯಾಧೀಶರಿಂದ ಸ್ವತಂತ್ರ ತನಿಖೆಗೆ ಒಳಪಡಿಸಬೇಕು. ಅಲ್ಲಿಯವರೆಗೆ ಅವರನ್ನು ಸಂಪುಟದಿಂದ ಹೊರಗಿಡಬೇಕು’ ಎಂದೂ ಒತ್ತಾಯಿಸಿದರು.
‘ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ವಯ ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ವರದಿ ಸಲ್ಲಿಸಬೇಕಿತ್ತು. ಆದರೆ ಇನ್ನೂ ಸಿಇಸಿ ವರದಿ ಸಲ್ಲಿಸಿಲ್ಲ. ಈ ವಿಷಯವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಾಗ, ಮರು ಪರಿಶೀಲನಾ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು.
2013ರ ಸೆಪ್ಟೆಂಬರ್ನಲ್ಲಿ ಸಲ್ಲಿಸಲಾದ ಈ ಅರ್ಜಿಯ ವಿಚಾರಣೆ ಬಾಕಿ ಇದೆ. ಶಿವಕುಮಾರ್ ಅವರು ಎಂಎಂಎಲ್ನಿಂದ ಕಡಿಮೆ ದರದಲ್ಲಿ ಅದಿರು ಖರೀದಿಸಿ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟು ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಲಾಗಿದೆ’ ಎಂದರು.
‘2005ರಲ್ಲಿ ಧರ್ಮಸಿಂಗ್ ಅವರಿಗೆ ಪತ್ರ ಬರೆದಿದ್ದ ಶಿವಕುಮಾರ್, ಸಹೋದರ ಡಿ.ಕೆ. ಸುರೇಶ್ಕುಮಾರ್ (ಹಾಲಿ ಸಂಸದ) ಪಾಲುದಾರನಾಗಿದ್ದ ವಿಕ್ಟರಿ ಎಕ್ಸ್ಪೋರ್ಟ್ ಸಹಿತ ಎಂಟು ಕಂಪೆನಿಗಳಿಗೆ ಎಂಎಂಎಲ್ನಿಂದ ಅದಿರು ಪೂರೈಸುವಂತೆ ಮನವಿ ಮಾಡಿದ್ದರು. ಎಂಎಂಎಲ್ನಿಂದ 2003ರವರೆಗೆ ಈ ಕಂಪೆನಿಗಳು 10.80 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅತಿ ಕಡಿಮೆ ದರದಲ್ಲಿ ಖರೀದಿಸಿವೆ. ಸಚಿವರಾಗಿದ್ದ ವಿ. ಮುನಿಯಪ್ಪ ಮತ್ತು ಪಿ.ಜಿ.ಆರ್. ಸಿಂಧ್ಯಾ ಹಾಗೂ ಎಂಎಂಎಲ್ನ ಉನ್ನತ ಅಧಿಕಾರಿಗಳೂ ಈ ಅಕ್ರಮ ಅದಿರು ಸಾಗಣೆಗೆ ಕೈಜೋಡಿಸಿದ್ದಾರೆ’ ಎಂದು ಆರೋಪಿಸಿದರು.
ಭೂ ಕಬಳಿಕೆ: ಶಿವಕುಮಾರ್ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಬೆಂಗಳೂರಿನ ಕೆ.ಆರ್,ಪುರ ಬಳಿಯ ಬೆನ್ನಿಗಾನಹಳ್ಳಿಯಲ್ಲಿ ಬಿ.ಕೆ. ಶ್ರೀನಿವಾಸ ಎಂಬುವವರ ಹೆಸರಿನಲ್ಲಿದ್ದ 4.20 ಎಕರೆಯನ್ನು 1986 ಡಿಸೆಂಬರ್ 18ರಂದು ಸರ್ಕಾರ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತ್ತು. ರಾಜ್ಯ ಭೂಕಂದಾಯ ಕಾಯ್ದೆ ಉಲ್ಲಂಘಿಸಿ ಈ ಜಾಗ ಖರೀದಿ ಒಪ್ಪಂದ ಮಾಡಿಕೊಂಡು 2003 ಡಿಸೆಂಬರ್ 18ರಂದು ಶಿವಕುಮಾರ್ ಖರೀದಿಸಿದ್ದರು.
‘ಕೈಗಾರಿಕೆಗೆ ಮೀಸಲಿಟ್ಟಿದ್ದ ಈ ಜಾಗವನ್ನು ಖರೀದಿಸಿದ ಎರಡೇ ತಿಂಗಳ ಒಳಗೆ (2004 ಫೆಬ್ರುವರಿ 17) ವಿಶೇಷ ಜಿಲ್ಲಾಧಿಕಾರಿ ಮೂಲಕ ಬಡಾವಣೆ ರಚನೆಗೆ ಶಿವಕುಮಾರ್ ಭೂಮಿ ಪರಿವರ್ತನೆ ಮಾಡಿಸಿಕೊಂಡಿದ್ದರು.
2004ರಲ್ಲಿ ಬಿ.ಕೆ. ಶ್ರೀನಿವಾಸ ನಿಧನರಾಗಿದ್ದರೂ ಅವರ ಹೆಸರಿನಲ್ಲೇ ಇದ್ದ ಈ ಜಾಗವನ್ನು 2010ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಡಿನೋಟಿಫೈ ಮಾಡಲಾಗಿತ್ತು. ಈ ಪ್ರಕರಣ ಲೋಕಾಯುಕ್ತ ಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇದೆ’ ಎಂದು ಹಿರೇಮಠ ಹೇಳಿದರು.
ಇನ್ನಷ್ಟು ಸುದ್ದಿ:
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.