ಬೆಂಗಳೂರು: ಡಿಪ್ಲೊಮಾ ವಿದ್ಯಾರ್ಥಿಗಳಿಗೆ ನೀಡುತ್ತಿರುವ `ಕ್ಯಾರಿ ಓವರ್' ಸೌಲಭ್ಯದ ಮಿತಿಯನ್ನು ವಿಸ್ತರಿಸಲು ಅವಕಾಶ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಸೋಮವಾರ ವಿಧಾನಸಭೆಗೆ ತಿಳಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್ನ ವೈ.ಎಸ್.ವಿ.ದತ್ತ, `ಪ್ರಥಮ ವರ್ಷದಲ್ಲಿ ಹತ್ತು ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ ತರಗತಿ ಅಧ್ಯಯನಕ್ಕೆ ಅವಕಾಶ ಮಾಡಿಕೊಡು `ಕ್ಯಾರಿ ಓವರ್' ಸೌಲಭ್ಯ ಹಿಂದೆ ಇತ್ತು. ಈಗ ಅದನ್ನು ನಾಲ್ಕು ವಿಷಯಕ್ಕೆ ಕಡಿತ ಮಾಡಲಾಗಿದೆ. ಇದರಿಂದ ಎಂಟು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಹಿಂದಿನಂತೆ ಹತ್ತು ವಿಷಯಗಳಿಗೆ ಮಿತಿಯನ್ನು ಹೆಚ್ಚಿಸಬೇಕು' ಎಂದು ಒತ್ತಾಯಿಸಿದರು.
ಉತ್ತರ ನೀಡಿದ ಸಚಿವರು, `ಕ್ಯಾರಿ ಓವರ್' ಮಿತಿಯನ್ನು ನಾಲ್ಕು ವಿಷಯಗಳಿಗೆ ನಿಗದಿಪಡಿಸಿರುವ ತೀರ್ಮಾನವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಈಗ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಸರ್ಕಾರ ನ್ಯಾಯಾಂಗ ನಿಂದನೆ ಆರೋಪವನ್ನು ಎದುರಿಸಬೇಕಾಗುತ್ತದೆ ಎಂದರು.