ವಿಜಾಪುರ: ಡಿಫ್ತೀರಿಯಾ ರೋಗದಿಂದ ಇತ್ತೀಚೆಗೆ ಮೃತಪಟ್ಟ ಕಾಖಂಡಕಿ ಗ್ರಾಮದ ಹೆರಕಲ್ಲ ವಸ್ತಿಗೆ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ನಿನ್ನೆ ಭೇಟಿ ನೀಡಿ ಮತ ಬಾಲಕರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಜಿ.ಬಿ. ಚವ್ಹಾಣ, ಜಿಲ್ಲಾ ಮಲೇರಿಯಾ ಅಧಿಕಾರಿ ಎಸ್.ಬಿ.ಮಸಳಿ, ವೈದ್ಯಾಧಿಕಾರಿ ಡಾ.ವಾಸಂತಿ ಚಲವಾದಿ ಅವರನ್ನು ಒಳಗೊಂಡ ತಂಡವು ಡಿಫ್ತೀರಿಯಾ ರೋಗದ ತಡೆಗೆ ಕೈಗೊಂಡ ಕ್ರಮಗಳನ್ನು ಶಾಸಕರಿಗೆ ವಿವರಿಸಿದರು.
ಶಾಸಕ ಎಂ.ಬಿ.ಪಾಟೀಲ ಮಾತನಾಡಿ ಒಂದೇ ಕುಟುಂಬದ 4 ಮಕ್ಕಳಿಗೆ ರೋಗ ತಗುಲಿ 2 ಮಕ್ಕಳು ಬಲಿ ಯಾಗಿದ್ದು, ದುರ್ದೈವದ ಸಂಗತಿ. ಜಿಲ್ಲೆಯಲ್ಲಿ ಡಿಫ್ತೀರಿಯಾ ರೋಗ ಮರುಕಳಿಸಿರುವ ಕುರಿತು ಮಾಧ್ಯಮ ಗಳ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೂ ಬಂದಿದ್ದು, ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಔಷಧಗಳು ಲಭ್ಯವಿದ್ದು, ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಹಿಂದೆ 2005-06 ಸಾಲಿನಲ್ಲಿ ವಿಜಾಪುರ ಜಿಲ್ಲೆಯ 10 ರೋಗಿಗಳು ಡಿಫ್ತೀರಿಯಾದಿಂದ ಮತಪಟ್ಟಿರುತ್ತಾರೆ ಎಂದು ಸೊಲ್ಲಾಪುರ ಸರಕಾರಿ ವೈದ್ಯಕೀಯ ಕಾಲೇಜಿನವರು ಪತ್ರ ಬರೆದು ತಿಳಿಸಿರುವುದು ಸೇರಿದಂತೆ ಈ ಸಂಬಂಧ ಬರುವ ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಾಗುವುದು ಎಂದರು.
ಮೃತಪಟ್ಟ ಬಾಲಕರ ಪಾಲಕರು ಆರ್ಥಿಕವಾಗಿ ಹಿಂದುಳಿದಿದ್ದು, ಅವರಿಗೆ ಯೋಗ್ಯ ಪರಿಹಾರ ನೀಡಲು ವಿನಂತಿಸ ಲಾಗುವುದು. ವೈಯಕ್ತಿಕವಾಗಿ 25 ಸಾವಿರ ರೂಪಾಯಿ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಶಾಸಕ ಎಂ.ಬಿ.ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾಪುಗೌಡ ಪಾಟೀಲ ಶೇಗುಣಸಿ, ಗಣ್ಯರಾದ ರಾಮಣ್ಣ ದಳವಾಯಿ, ರಮೇಶ ಹೆಬ್ಬಿ, ಅಲ್ಲಿಸಾಬ ಖಡಕೆ, ಮುದಿಮಲ್ಲಪ್ಪ ತೇಲಿ, ಪ್ರಕಾಶ ಹೂಗಾರ ಉಪಸ್ಥಿತರಿದ್ದರು.