ಶಿವಮೊಗ್ಗ: ಗ್ರಾಮ ಪಂಚಾಯ್ತಿ ನೀಡುವ ಡಿಮ್ಯಾಂಡ್ ರಿಜಿಸ್ಟ್ರಾರ್ ಆಧಾರದ ಮೇಲೆ ಇಂದಿರಾ ಆವಾಸ್ ಯೋಜನಾ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಮುಖಂಡರು, ಅಪರ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಜಿಲ್ಲಾ ವ್ಯಾಪ್ತಿಯ ಗ್ರಾಮಾಂತರ, ತೀರ್ಥಹಳ್ಳಿ, ಭದ್ರಾವತಿ, ಸಾಗರ, ಸೊರಬ ಹಾಗೂ ಶಿಕಾರಿಪುರಗಳಲ್ಲಿ ಕೇಂದ್ರ ಸರ್ಕಾರದ ಇಂದಿರಾ ಆವಾಸ್ ಯೋಜನೆ ಅಡಿ ಪ್ರತಿ ತಾಲ್ಲೂಕಿಗೆ 2 ಸಾವಿರದಂತೆ ಒಟ್ಟು 12 ಸಾವಿರ ಮನೆ ನಿರ್ಮಾಣಕ್ಕೆ ಕಾರ್ಯಾದೇಶವನ್ನು ಸಂಬಂಧಪಟ್ಟ ಗ್ರಾಮ ಪಂಚಾಯ್ತಿ ವತಿಯಿಂದ ನೀಡಿದ್ದು, ಈ ಕಾರ್ಯಾದೇಶದಲ್ಲಿ ಹಕ್ಕುಪತ್ರ ಕಡ್ಡಾಯವಾಗಿ ಹೊಂದಿರಬೇಕೆಂಬ ಷರತ್ತು ವಿಧಿಸಿದ್ದರಿಂದ ಆಯ್ಕೆಯಾದ ಶೇ.75 ಫಲಾನುಭವಿಗಳು ಹಕ್ಕುಪತ್ರ ಹೊಂದಿರದೇ ಯೋಜನೆ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.
ಅಲ್ಲದೇ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತ್ರ ಹಕ್ಕುಪತ್ರಕ್ಕೆ ಬದಲಾಗಿ ಕೇವಲ ಗ್ರಾಮ ಪಂಚಾಯ್ತಿ ಡಿಮ್ಯಾಂಡ್ ರಿಜಿಸ್ಟ್ರಾರ್ ಆಧಾರದ ಮೇಲೆ ಇಂದಿರಾ ಆವಾಸ್ ಯೋಜನೆ ಅಡಿ ಮನೆ ನಿರ್ಮಿಸಲಾಗುತ್ತಿದೆ.
ಈ ಕಾರಣದಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲೂ `ಡಿಮ್ಯಾಂಡ್ ರಿಜಿಸ್ಟ್ರಾರ್~ ಆಧಾರದ ಮೇಲೆ ಇಂದಿರಾ ಆವಾಸ್ ಯೋಜನೆ ಅಡಿ ಮನೆ ನಿರ್ಮಿಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದ ಮುಖಂಡರು, ಈ ತಾರತಮ್ಯ ನೀತಿ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎ. ರಮೇಶ್ ಹೆಗ್ಡೆ, ಮುಖಂಡರಾದ ಪಿ. ರುದ್ರೇಶ್, ಕೆ. ದೇವೆಂದ್ರಪ್ಪ, ಮೋಹನ್ ಮತ್ತಿತರರು ಮನವಿ ಸಲ್ಲಿಸಿದರು.