ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವಿಎಸ್ ರಾಜೀನಾಮೆ; ಹೊಸ ಸರ್ಕಾರಕ್ಕೆ ಸಿದ್ಧತೆ

Last Updated 11 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಡಿ.ವಿ.ಸದಾನಂದ ಗೌಡ ಬುಧವಾರ ಬೆಳಿಗ್ಗೆ 11.40ಕ್ಕೆ ರಾಜಭವನದಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇದರ ಬೆನ್ನಿಗೇ ರಾಜ್ಯಪಾಲರನ್ನು ಭೇಟಿಯಾದ ನಿಯೋಜಿತ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೊಸ ಸರ್ಕಾರ ರಚನೆಗೆ ಅವಕಾಶ ಕೋರಿದರು.

ಬೆಳಿಗ್ಗೆ 11.15ಕ್ಕೆ ತಮ್ಮ ಅಧಿಕೃತ ನಿವಾಸ `ಅನುಗ್ರಹ~ದಿಂದ ಹೊರಟ ಸದಾನಂದ ಗೌಡ, 11.30ರ ವೇಳೆಗೆ ಬಸವೇಶ್ವರ ವೃತ್ತಕ್ಕೆ ಬಂದರು. ಅಲ್ಲಿನ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಚಿವರಾದ ಗೋವಿಂದ ಕಾರಜೋಳ, ಬಿ.ಎನ್.ಬಚ್ಚೇಗೌಡ, ಆನಂದ ಅಸ್ನೋಟಿಕರ್, ಸಿ.ಪಿ.ಯೋಗೇಶ್ವರ್, ಶಾಸಕರಾದ ಎಂ.ಶ್ರೀನಿವಾಸ್, ಎಸ್.ಎನ್. ಕೃಷ್ಣಯ್ಯ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಮತ್ತಿತರರು ಜೊತೆಗಿದ್ದರು.

ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಬೇಲಿಮಠದ ಶಿವರುದ್ರ ಸ್ವಾಮೀಜಿ ಅವರು ಸದಾನಂದ ಗೌಡರ ಹಣೆಗೆ ವಿಭೂತಿ ಹಚ್ಚಿ, ಶಾಲು ಹೊದಿಸಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ವಿಧಾನಸೌಧಕ್ಕೆ ತೆರಳಿದ ಸದಾನಂದ ಗೌಡರು, ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ಡಾ.ಬಿ.ಆರ್.ಅಂಬೇಡ್ಕರ್, ಜವಾಹರಲಾಲ್ ನೆಹರು ಮತ್ತಿತರರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ನಂತರ ಅಲ್ಲಿಂದ ರಾಜಭವನಕ್ಕೆ ಹೋಗಿ 11.40ಕ್ಕೆ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ನೀಡಿದರು. ಕೆಲಕಾಲ ಸದಾನಂದ ಗೌಡರ ಜೊತೆ ಚರ್ಚಿಸಿದ ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಿದರು.

ಈ ಮಧ್ಯೆಯೇ ಜಗದೀಶ ಶೆಟ್ಟರ್ ಅವರು ಬಿಜೆಪಿ ರಾಷ್ಟ್ರೀಯ ನಾಯಕ ರಾಜನಾಥ್ ಸಿಂಗ್, ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ರಾಜಭವನಕ್ಕೆ ಬಂದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಕೂಡ ಜೊತೆಗಿದ್ದರು. ಸಿ.ಎಂ.ಉದಾಸಿ,, ಆರ್.ಅಶೋಕ, ಬಸವರಾಜ ಬೊಮ್ಮಾಯಿ ಮತ್ತಿತರರು ರಾಜಭವನ ಪ್ರವೇಶಿಸಿದರು.

ಶೆಟ್ಟರ್ ಅವರನ್ನು ಶಾಸಕಾಂಗ ಪಕ್ಷದ ನೂತನ ನಾಯಕನನ್ನಾಗಿ ಆಯ್ಕೆ ಮಾಡಿರುವ ನಿರ್ಣಯದ ಪ್ರತಿಯೊಂದಿಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂಬ ಮನವಿಯನ್ನು ಬಿಜೆಪಿ ಮುಖಂಡರು ರಾಜ್ಯಪಾಲರಿಗೆ ಸಲ್ಲಿಸಿದರು. ಹೊಸ ಸರ್ಕಾರ ರಚನೆಗೆ ಅವಕಾಶ ಕೋರಿದ ಬಳಿಕ ಸದಾನಂದ ಗೌಡ, ಶೆಟ್ಟರ್ ಸೇರಿದಂತೆ ಎಲ್ಲ ಮುಖಂಡರೂ ರಾಜಭವನದಿಂದ ಹೊರಬಂದರು.

ಪರಿಷತ್ ಸದಸ್ಯನಾಗಿರುವೆ: ರಾಜಭವನದಿಂದ ಹೊರಬಂದು ಪತ್ರಕರ್ತರ ಜೊತೆ ಮಾತನಾಡಿದ ಸದಾನಂದ ಗೌಡರು, `11 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ಎರಡು ವರ್ಷಗಳ ಕಾಲ ವಿಧಾನ ಪರಿಷತ್‌ನ ಸದಸ್ಯನಾಗಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಮಾಡುತ್ತೇನೆ~ ಎಂದರು.

`ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಎಲ್ಲ ಶಾಸಕರು ಸಂಪೂರ್ಣ ಸಹಕಾರ ನೀಡಿದ್ದಾರೆ. ವಿರೋಧ ಪಕ್ಷಗಳ ನಾಯಕರು ಕೂಡ ಪೂರ್ಣ ಸಹಕಾರ ನೀಡಿದ್ದರು. ಇದಕ್ಕಾಗಿ ಅವರಿಗೆಲ್ಲ ನಾನು ಆಭಾರಿ. ಮುಂದೆಯೂ ಸಹಕಾರ, ಸಂಯಮ, ಸಮನ್ವಯದಿಂದ ಮುನ್ನಡೆಯುತ್ತೇನೆ~ ಎಂದು ಹೇಳಿದರು.

`ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹುದ್ದೆ ಬಗ್ಗೆ ನನ್ನ ಜೊತೆ ಯಾರೂ ಇದುವರೆಗೆ ಚರ್ಚಿಸಿಲ್ಲ~ ಎಂದು ಉತ್ತರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT