ಗೋಣಿಕೊಪ್ಪಲು: ಜಿಲ್ಲೆಯಲ್ಲಿ 5 ವರ್ಷಕ್ಕೂ ಹಳೆಯದಾದ 1300 ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ. ಇವುಗಳಿಗೆ ಡಿಸೆಂಬರ್ ಒಳಗೆ ನ್ಯಾಯ ಒದಗಿಸಲು ಮುಂದಾಗಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ಬಿ. ಮನೋಹರ್ ಹೇಳಿದರು.
ಸಮೀಪದ ಪೊನ್ನಂಪೇಟೆಯಲ್ಲಿ ನೂತನ ನ್ಯಾಯಾಲಯ ಸಮುಚ್ಚಯ ಕಟ್ಟಡ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಸುಪ್ರೀಂ ಕೋರ್ಟ್ ಈಗಾಗಲೇ ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಎಲ್ಲ ವಕೀಲರು ಇದನ್ನು ತಪ್ಪದೆ ಪಾಲಿಸಬೇಕು ಎಂದು ಸೂಚಿಸಿದರು.
ರಾಜಿ ಮೂಲಕವೂ ಹಳೆಯ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಮುಂದಾಗಬೇಕು. ಇದರಿಂದ ಬಹಳಷ್ಟು ಪ್ರಕರಣಗಳಿಗೆ ಶೀಘ್ರ ನ್ಯಾಯ ಒದಗಿಸಬಹುದು. ಹೀಗೆ ನಡೆದುಕೊಂಡಾಗ ಜನಸಾಮಾನ್ಯರಿಗೂ ನ್ಯಾಯಾಲಯದ ಬಗ್ಗೆ ನಂಬಿಕೆ ಬರುತ್ತದೆ. ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ವಕೀಲರು ಕರ್ತವ್ಯ ನಿರ್ವಹಿಸಬೇಕು ಎಂದು ಅವರು
ನುಡಿದರು.
ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಎ.ಟಿ. ಭೀಮಯ್ಯ ಮಾತನಾಡಿ, ವಕೀಲರು ಕೇವಲ ಹಣ ಸಂಪಾದಿಸುವುದನ್ನೇ ಗುರಿಯಾಗಿಸಿಕೊಂಡು ನ್ಯಾಯಕ್ಕೆ ಧಕ್ಕೆ ಉಂಟು ಮಾಡಬಾರದು. ನ್ಯಾಯಕ್ಕಾಗಿ ಹೋರಾಡುವ ಮನೋಭಾವನೆ ಮೂಡಿಸಿಕೊಂಡು ಕರ್ತವ್ಯ ನಿರ್ವಹಿಸಿ ಎಂದು ಹೇಳಿದರು.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸೋಮಶೇಖರ್ ಮಾತನಾಡಿ, ವಕೀಲರು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು. ಸಮಸ್ಯೆಗಳನ್ನು ಬಗೆಹರಿಸುವತ್ತ ಚಿಂತನೆ ನಡೆಸಬೇಕು. ನ್ಯಾಯಾಧೀಶರು ಸಾಮಾಜಿಕ ಚಿಂತನೆ ಮೈಗೂಡಿಸಿಕೊಂಡರೆ ಉತ್ತಮ ಹೆಸರು ಗಳಿಸಬಹುದು ಎಂದು ನುಡಿದರು.
ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ನಾಣಯ್ಯ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್, ಜಿಲ್ಲಾ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ವೆಂಕಟಾದ್ರಿ ಹಾಜರಿದ್ದರು.