ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡುಂಡಿರಾಜ್ ಕಚಗುಳಿ: ಸವದಿಗೆ ಮನೆಯಲ್ಲಿ ಮಡದಿ ಕಾಟ!

Last Updated 13 ಫೆಬ್ರುವರಿ 2012, 6:10 IST
ಅಕ್ಷರ ಗಾತ್ರ

ದಾವಣಗೆರೆ: ಪೋಲಿ ವಿಡಿಯೊ ನೋಡಿದರಂತೆ
ಸದನದಲ್ಲಿ ಸವದಿ!
ಏನು ಮಾಡುವುದು?
ಮನೆಯಲ್ಲಿ ನೋಡಲು ಬಿಡುವುದಿಲ್ಲ ಮಡದಿ.
ಈಚೆಗೆ ಸದನದಲ್ಲಿ ನಡೆದ ಸಚಿವರ ನೀಲಿ ಚಿತ್ರ ವೀಕ್ಷಣೆಯ ಕುರಿತು ಕವಿ ಡುಂಡಿರಾಜ್ ಭಾನುವಾರ ಈ ಕವನ ವಾಚಿಸಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ ಆಯೋಜಿಸಿದ್ದ ಗೀತೋತ್ಸವದ ಕವಿ-ಕಾವ್ಯ-ಗಾಯನದಲ್ಲಿ ಇಂತಹ ಕಚಗುಳಿ ಇಡುವ ಕವನಗಳು ನೆರೆದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು.

ಪತಿ ಭಕ್ತಿಯಲ್ಲಿ ಗಾಂಧಾರಿಗಿಂತ ಇವಳೇನು ಕಮ್ಮಿ ಹೇಳಿ
ಪತಿಗಿಲ್ಲದ್ದು ನನಗೇಕೇ ಹೇಳಿ ಎಂದು ಕಿತ್ತೆಸೆದಳು ತಾಳಿ!
ಇಂತಹ ಹಲವು ಹನಿಗವನಗಳನ್ನು ಡುಂಡಿರಾಜ್ ತೇಲಿಬಿಟ್ಟರು...

ಕವಿ ಚನ್ನವೀರ ಕಣವಿ ಕುವೆಂಪು ಅವರ ನವಿಲು ಸಂಕಲನದ ನಾನು, ನಾಯಿ, ಮೆಟ್ಟು, ಕೊಡೆ ನಾಲ್ವರೇ ತಿರುಗಾಟಕೆ ಕವಿತೆ ಹಾಗೂ ಜೀವನ ವನದಲ್ಲಿ ಕವನ ಮಯೂರಿ ಕವನ ವಾಚಿಸಿದರು. ಎಂ.ಎನ್. ವ್ಯಾಸರಾವ್ ಅವರು ಗೋಪಾಲ ಕೃಷ್ಣ ಅಡಿಗರ ಒಡೆದು ಬಿದ್ದ ಕೊಳಲು ನಾನು... ನಾದ ಬರದು ನನ್ನಲಿ ಕವನ ವಾಚಿಸಿದರು.
ಹೇಮಾ ಪಟ್ಟಣಶೆಟ್ಟಿ ಅವರು ಸಿದ್ದಲಿಂಗ ಪಟ್ಟಣ ಶೆಟ್ಟಿ ಅವರ ಇಷ್ಟು ಹೇಳಿದ ಮೇಲೆ ಏನು ಹೇಳಲಿ, ಏನು ಕೇಳಲಿ ನಿನಗೆ ಹಾಗೂ ತಾವು ಬರೆದ ಜೀವ ಸೃಷ್ಟಿ ಕವಿತೆಯ ಸಾರ ಬಿಡಿಸಿಟ್ಟರು.

ಬಿ.ಆರ್. ಲಕ್ಷಣರಾವ್ ಅವರ
ದೇವರೆ ನಿನ್ನದು ಕರುಣೆಯ ಕಡಲು
ನನಗೆ ಸಾಧ್ಯವೇ ಅದರ ಆಳ ಅಳೆಯಲು
ತೋಳಕೊಂದು ನರಿಯ ಕೊಟ್ಟೆ, ಜಿಂಕೆಗೊಂದು ಹುಲಿಯ ಕೊಟ್ಟೆ
ಮನುಷ್ಯರಿಗೆ ಮನುಷ್ಯರನ್ನೇ ಬಿಟ್ಟೆ...ಕವಿತೆ ದೇವರ ಲೀಲೆ ಕುರಿತ ಅವರ ವ್ಯಂಗ್ಯ ವಿಮರ್ಶೆಯನ್ನು ಅನಾವರಣಗೊಳಿಸಿತು.

ಇನ್ನೊಬ್ಬ ಕವಿ, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯಂ ಕುವೆಂಪು ಅವರ ವಸಂತವನದಲ್ಲಿ ಕವಿತೆ ವಾಚಿಸಿದರು. ಎಂ.ಆರ್. ಕಮಲಾ ಅವರು ಸು.ರಂ ಎಕ್ಕುಂಡಿ ಅವರ ದಾಸಿಮಯ್ಯ ಮತ್ತು ಬೆಕ್ಕು ಕವಿತೆ ವಾಚಿಸುವ ಮೂಲಕ ಧಾರ್ಮಿಕ ಆಡಂಬರ ಹಾಗೂ ಕಾಯಕ ತತ್ವದ ಮಹತ್ವ ಸಾರಿದರು.

ಅಧ್ಯಕ್ಷತೆ ವಹಿಸಿದ್ದ ಎಚ್.ಎಸ್. ವೆಂಕಟೇಶಮೂರ್ತಿ ಕಾರ್ಯಕ್ರಮ ನಿರೂಪಣೆಯ ಜತೆಗೆ ಅಂತಿಮವಾಗಿ ಕಣವಿ ಅವರ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಕವಿತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆದರು.

ಇದಕ್ಕೂ ಮೊದಲು ಹೊಸ ಪ್ರತಿಭೆಗಳಾದ ಅನನ್ಯ, ಸುರಭಿ, ಶ್ರೀರಂಗದರ್ಶನ ಹಾಗೂ ಪ್ರಜ್ವಲ್ ಕನ್ನಡದ ಖ್ಯಾತ ಕವಿಗಳ ಕವಿತೆ ಹಾಡುವ ಮೂಲಕ ಪ್ರತಿಭೆ ಅನಾವರಣಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT